‘ನಂದಗೋಪಾಲ’ನಾದನು ಉಪೇಂದ್ರ !
ಮನೆ-ಮನಗಳ ಮುಟ್ಟುವಂತೆ ಜಾಹೀರಾತುಗಳಲ್ಲಿ ಹಾಲು, ಮೊಸರು, ತುಪ್ಪ ಮತ್ತಿತರ ನಂದಿನಿ ಉತ್ಪನ್ನ ಗಳ ಬಳಸುವಂತೆ ಪ್ರಚಾರ ಮಾಡುತ್ತಿದ್ದ ಉಪೇಂದ್ರ, ನಂದಗೋಪಾಲ ಎನ್ನುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕೆಎಂಎಫ್ ಉತ್ಪನ್ನಗಳ ರೂಪದರ್ಶಿಯಾಗಿ, ರಾಯಭಾರಿಯಾಗಿ ಮಾರುಕಟ್ಟೆ ಹಿಗ್ಗಿಸಲು ಕಾರಣಕರ್ತರಾದ ಉಪೇಂದ್ರ ರಿಗೆ ಮೈಸೂರು-ಚಾಮರಾಜನಗರದ ನಂದಿನಿ ಘಟಕ ನಂದಗೋಪಾಲ ಕಿರೀಟವನ್ನು ತೋಡಿಸಿ, ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದು ಬರ್ತ್ಡೇ ಗಿಫ್ಟ್ .
ಸೆ.18 ಉಪೇಂದ್ರರ ಜನ್ಮ ದಿನವಾಗಿದ್ದು, ಈ ಸಂದರ್ಭದಲ್ಲಿ ನಂದಗೋಪಾಲ ಪ್ರಶಸ್ತಿ ಉಡುಗೊರೆ ರೂಪದಲ್ಲಿ ದೊರೆತಿದೆ. ತಮ್ಮ ಸ್ವಂತ ಚಿತ್ರವಾದ ಗೋಕರ್ಣ ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ನಂದಿನಿ ಪ್ರಚಾರ ರಾಯಭಾರಿಯಾಗಿ ಉಪೇಂದ್ರ ನೇಮಕಗೊಂಡಿದ್ದರು.
ಬಾಲಂಗೋಚಿ : ಆಲ್ಕೋಹಾಲ್ ಕುಡಿಯಿರಿ ಎನ್ನುವ ಜಾಹೀರಾತುಗಳ ಮೂಲಕ ಜನರ ಟೀಕೆಗೆ ಗುರಿಯಾಗಿದ್ದ ಉಪೇಂದ್ರ, ಆ ಪಾಪವನ್ನು ನಂದಿನಿ ಹಾಲು ಕುಡಿಯಿರಿ ಎನ್ನುವ ಮೂಲಕ ಕೊಂಚ ಕಳೆದುಕೊಂಡಿದ್ದಾರೆ ಎನ್ನುವುದು ರಾಜ್ಯದ ರೈತರು ಮಾತು.
ಓಂಕಾರಕ್ಕೆ ಮುಹೂರ್ತ : ಶುಕ್ರವಾರ ಬಿಡುಗಡೆಯಾಗಬೇಕಾಗಿದ್ದ ಉಪೇಂದ್ರ ನಾಯಕತ್ವದ ಓಂಕಾರ ಚಿತ್ರ ಶನಿವಾರ ತೆರೆ ಕಾಣಲಿದೆ. ಉಪೇಂದ್ರರ ಜನ್ಮದಿನವಾದ ಶನಿವಾರ(ಸೆಪ್ಟೆಂಬರ್.18) ಬಿಡುಗಡೆಯಾಗಲಿದೆ. ವಿಷ್ಣವರ್ಧನ್ ಆಭಿನಯದ ಸಾಹುಕಾರ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ.
ಓಂಕಾರ ಹಳೆಯ ಮೈಸೂರು ಭಾಗದಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಬಿಡುಗಡೆಯಾಗಲಿದೆ. ಆದರೆ ಉತ್ತರ ಕರ್ನಾಟಕದಲ್ಲೂ ಸುಲಲಿತವಾಗಿ ಚಿತ್ರ ಬಿಡುಗಡೆಯಾಗುವುದೇ ಎನ್ನುವುದರ ಬಗೆಗೆ ಸ್ಪಷ್ಟತೆಯಿಲ್ಲ. ಕರ್ನಾಟಕ ಚಿತ್ರ ಪ್ರದರ್ಶಕರ ಮಹಾಮಂಡಳ ತನ್ನ ಬೇಡಿಕೆಗಳಿಗೆ ಸರಕಾರ ಸ್ಪಂದಿಸುವವರೆಗೆ ಕನ್ನಡವೂ ಸೇರಿದಂತೆ ಯಾವ ಹೊಸ ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ನೀಡುವುದಿಲ್ಲವೆಂದು ಪಟ್ಟುಹಿಡಿದಿದೆ.
ಮಹಾ ಮಂಡಳದ ನಿಲುವು ವಿರೋಧಿಸಿ ಹುಬ್ಬಳ್ಳಿಯಲ್ಲಿ ಶನಿವಾರ ಪ್ರತಿಭಟನೆನಡೆಸಲು ಚಿತ್ರೋದ್ಯಮದ ಗಣ್ಯರು ಸಿದ್ದತೆ ನಡೆಸಿದ್ದಾರೆ. ಈ ನಡುವೆ ಮಹಾಮಂಡಳದ ಮನವೊಲಿಸುವ ಮಾತುಕತೆಗಳು ನಡೆಯುತ್ತಿವೆ.


Click it and Unblock the Notifications