ಜ್ವರದಲ್ಲೂ ಗೌರಿಶಂಕರ್ ಕೆಮರಾ ಹಿಡಿದು ನಿಂತರು
ಮೂವತ್ತೆೈದು ದಿನಗಳಲ್ಲಿ ಶೂಟಿಂಗ್ ಮುಗಿಸಿಕೊಡುತ್ತೇನೆ;
ಚಂದ್ರಶೇಖರ ಕಂಬಾರರ 'ಸಿಂಗಾರೆವ್ವ ಮತ್ತು ಅರಮನೆ"ಯ ವಿಷಯವಾಗಿ ಟಿ.ಎಸ್.ನಾಗಾಭರಣ ನಿರ್ಮಾಪಕ ಸಂದೇಶ್ ನಾಗರಾಜ್ಗೆ ಹೀಗೆ ಮಾತು ಕೊಟ್ಟರು. ಅಣ್ಣಿಗೇರಿ ವಾಡೆಯಲ್ಲಿ ಶೂಟಿಂಗ್ ಶುರುವಾಯಿತು. ಕೆಮೆರಾ ಹಿಡಿದು ನಿಂತಿದ್ದ ಬಿ.ಸಿ.ಗೌರಿಶಂಕರ್ಗೆ ಸುಡುಸುಡು ಜ್ವರ ಬಂತು. ಆಸ್ಪತ್ರೆ ಸೇರುವುದು ಅನಿವಾರ್ಯವಾಯಿತು. ತಾತ್ಕಾಲಿಕವಾಗಿ ಶೂಟಿಂಗ್ ಸ್ಥಗಿತಗೊಂಡಿತು.
ಹರೀಬರಿಯಲ್ಲಿದ್ದ ನಾಗಾಭರಣರಿಗೆ ಕಾಯುವ ವ್ಯವಧಾನ ಇರಲಿಲ್ಲ. ಸಾಲದ್ದಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಜೀವನ್ಮುಖಿ" ಮೆಗಾ ಧಾರಾವಾಹಿಯ ಜವಾಬ್ದಾರಿ ಒಂದು ಕಡೆ. ಕೆಮೆರಾಮನ್ ಬದಲಿಸಲು ಎಲ್ಲಾ ನಟ- ನಟಿಯರಿಂದ ಅನುಮತಿ ಪಡೆದ ಭರಣ ಪ್ರಶಸ್ತಿ ವಿಜೇತ ಕೆಮೆರಾಮನ್ ರಾಮಚಂದ್ರ ಅವರನ್ನು ಗೌರಿಶಂಕರ್ ಜಾಗಕ್ಕೆ ತರುವ ನಿರ್ಧಾರ ಮಾಡಿದರು. ನೇರ ಆಸ್ಪತ್ರೆಗೆ ಹೋಗಿ, ಮಂಚದ ಮೇಲೆ ಮಲಗಿದ್ದ ಗೌರಿಶಂಕರ್ ಅವರನ್ನು ಇದಕ್ಕಾಗಿ ಪರ್ಮಿಷನ್ ಕೇಳಿದರು. ಚಾದರ ಕಿತ್ತೆಸೆದ ಗೌರಿಶಂಕರ್ ವೈರಲ್ ಜ್ವರವನ್ನು ಹೊತ್ತುಕೊಂಡೇ ಕೆಮೆರಾ ಹಿಡಿದು ನಿಂತರು. ಆರೋಗ್ಯ ಇನ್ನಷ್ಟು ಹದಗೆಟ್ಟಿತು. ನಾಗಾಭರಣ ತಬ್ಬಿಬ್ಬಾದರು!
ಗೌರಿಶಂಕರ್ ಹೀಗೆ ವರ್ತಿಸಲು ಕಾರಣವೂ ಉಂಟು. 'ಸಿಂಗಾರೆವ್ವ.."ನಂಥ ಚೆಂದದ ಸಿನಿಮಾದಲ್ಲಿ ಕೆಲಸ ಮಾಡುವ ಸಲುವಾಗಿ ಅವರು ಹುಡುಕಿಕೊಂಡು ಬಂದ ಕೆಲವು ಆಫರ್ಗಳನ್ನು ತಳ್ಳಿದ್ದರು. ಆಯ್ಕೆಯ ವಿಷಯದಲ್ಲಿ ಗೌರಿಶಂಕರ್ ಯಾವತ್ತೂ ಚೂಸಿ. ಅದಕ್ಕೇ ಮಗಳು ರಕ್ಷಿತಾಗೆ ಉಪೇಂದ್ರ ಜೊತೆ ನಟಿಸಬೇಡ ಎಂದು ತಾಕೀತು ಮಾಡಿರುವುದು !
ಅಂದಹಾಗೆ, 'ಸಿಂಗಾರೆವ್ವ.."ದಲ್ಲಿ ಬಣ್ಣ ಹಾಕಿಕೊಂಡಿರುವವರು- ಪ್ರೇಮಾ, ಏಣಗಿ ನಟರಾಜ್, ಅಖಿಲ, ಶಿವಧ್ವಜ, ಶರತ್ ಲೋಹಿತಾಶ್ವ , ಅವಿನಾಶ್ ಮತ್ತಿತರರು. ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವವರು ಸಿ.ಅಶ್ವಥ್.
ಮತ್ತೆ ಹಾಸಿಗೆ ಹಿಡಿದಿರುವ ಗೌರಿಶಂಕರ್ ಅವರ ಜಾಗಕ್ಕೆ ರಾಮಚಂದ್ರನ ಕರೆ ತರುವ ಯೋಚನೆ ಸದ್ಯಕ್ಕೆ ಭರಣಾ ಮನಸ್ಸಿಂದ ದೂರವಾಗಿದೆ. ಕೆಲಸದ ಮೇಲೆ ಗೌರಿಶಂಕರ್ ಇಟ್ಟಿರುವ ಪ್ರೀತಿಯನ್ನು ಮೆಚ್ಚಲೇಬೇಕು.


Click it and Unblock the Notifications