ಮುಂಬಯಿಗೆ ಹಾರಿದ ಧವಳ ಸುಮಬಾಲೆ
*ದಟ್ಸ್ಕನ್ನಡ ಬ್ಯೂರೋ
ಹಲವು ದಿನಗಳಿಂದ ಬೆಂಗಳೂರಿನ ಸಿನಿಮಾ ಗಲ್ಲಿಗಳಿಂದ ಹಾಗೂ ತಮ್ಮ ಮನೆಯಿಂದ ಕಾಣೆಯಾಗಿದ್ದ ಹೆಸರಿಗೆ ತಕ್ಕಂಥ ಹುಡುಗಿ ಭಾವನಾ ತಮ್ಮ ವಾಸ್ತವ್ಯವನ್ನೇ ಮುಂಬಯಿಗೆ ವರ್ಗಾಯಿಸಿರುವ ವಿಷಾದದ ಸಂಗತಿ ಹೊರ ಬಿದ್ದಿದೆ.
‘ಕ್ಷಾಮ’ ಚಿತ್ರದ ಅಭಿನಯಕ್ಕೆ ಮೊನ್ನೆ ತಾನೆ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾವನಾ ಈ ನಿರ್ಣಯ ಕೈಗೊಳ್ಳಲು ಗಾಂಧಿನಗರದ ಮಂದಿಯ ಧೋರಣೆಯೇ ಕಾರಣ ಅಂತ ನೇರವಾಗಿ ಆರೋಪಿಸಿದ್ದಾರೆ. ‘ನನ್ನನ್ನು ಐಟಂ ನಂಬರ್ ಹುಡುಗಿ ಅಂತ ಹಂಗಿಸತೊಡಗಿದರು. ಅಚ್ಚುಕಟ್ಟಾಗಿ ನಟಿಸುತ್ತೇನೆ ಎಂಬ ವಿಮರ್ಶೆ ಸಿಕ್ಕಿತೇ ವಿನಃ ಕಮರ್ಶಿಯಲ್ ಚಿತ್ರಗಳ ಒಳ್ಳೆಯ ಪಾತ್ರಗಳು ಹುಡುಕಿಕೊಂಡು ಬರಲಿಲ್ಲ. ಸಿಗುವ ಸಂಭಾವನೆಯೂ ಅಷ್ಟಕ್ಕಷ್ಟೆ. ಕಲಾ ಚಿತ್ರಗಳಲ್ಲಿ ಸಂತೋಷ ಹಾಗೂ ಅನುಭವಕ್ಕಾಗಿ ನಟಿಸಿದೆ. ನನಗೂ ವಯಸ್ಸಾಗುತ್ತಿದೆ. ಇರುವ ಕೆಲವು ವರ್ಷಗಳಲ್ಲಿ ಏನಾದರೂ ಸಾಧಿಸಬೇಕೆಂದು ಬೆಂಗಳೂರಿಗೆ ಸಲಾಂ ಹೊಡೆದು ಮುಂಬಯಿಗೆ ಶಿಫ್ಟಾಗಿದ್ದೇನೆ. ಇನ್ನೇನಿದ್ದರೂ ಅಲ್ಲಿ ನನ್ನ ಅವಕಾಶಗಳ ಬೇಟೆ’ ಎಂದು ಭಾವನಾ ಪ್ಯಾಕಪ್ ಮಾಡುತ್ತಿದ್ದ ವೇಳೆಯಲ್ಲಿ ಸಿಕ್ಕಾಗ ಪಟಪಟನೆ ಹೇಳಿ ಹೊರಟೇಬಿಟ್ಟರು.
ಪರ ರಾಜ್ಯಗಳಲ್ಲಿ ಈಗಾಗಲೇ ಜಾಹೀರಾತಿನ ಮಾಡೆಲ್ ಆಗಿ ಸಾಕಷ್ಟು ಹಣ ಮಾಡಿರುವ ಭಾವನಾ ನೇರವಾಗಿ ಬಾಲಿವುಡ್ಗೆ ಗುರಿ ಇಟ್ಟಿರುವುದಂತೂ ಸ್ಪಷ್ಟ. ಅದೂ ಗುರಿ ಇರುವ ಜಾಗಕ್ಕೆ ತೀರಾ ಹತ್ತಿರಕ್ಕೆ ಹೋಗಿ ಅವರು ಬೇಟೆಗಾರ್ತಿಯಾಗುತ್ತಿದ್ದಾರೆ. ಭಗವಂತ ಅವರಿಗೆ ಒಳ್ಳೆಯದನ್ನು ಮಾಡಲಿ !
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications