ದುನಿಯಾ ವಿಜಯ್ ಗೆ ಪುರುಸೊತ್ತೇ ಇಲ್ಲವಂತೆ
*ಜಯಂತಿ

ದುನಿಯಾ ನಂತರ ವಿಜಯ್ ಅಭಿನಯದ ಯಾವ ಚಿತ್ರವೂ ಕಚ್ಚಿಕೊಂಡಿಲ್ಲ. ಹಾಗಂತ ಅವರು ಪುರುಸೊತ್ತಾಗೇನೂ ಇಲ್ಲ. ಯುಗ, ಚಂಡ, ಅವ್ವ, ಸ್ಲಂ ಬಾಲ ಎಲ್ಲಾ ಚಿತ್ರಗಳು ತಾಚೊಂಡಿದ್ದರೂ ಕಾಲ್ಶೀಟ್ ಬೇಕೆಂದರೆ 80 ಲಕ್ಷ ಮಡಗಿ ಅಂತಾರೆ. ಸದ್ಯಕ್ಕೆ ಎಂ.ಎಸ್.ರಮೇಶ್ ಅಭಿನಯದ ತಾಕತ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ವಿಜಯ್ಗೆ ಜಂಗ್ಲಿ ಸಿನಿಮಾ ಕುರಿತು ನಿರೀಕ್ಷೆಗಳಿವೆ. ಅವರನ್ನು ನಾಯಕನಾಗಿಸಿದ ನಿರ್ದೇಶಕ ಸೂರಿ ಈ ಚಿತ್ರಕ್ಕೂ ಆಕ್ಷನ್, ಕಟ್ ಹೇಳಿರುವುದೇ ಇದಕ್ಕೆ ಕಾರಣ.
ಸ್ಲಂ ಬಾಲ ತಾಚೊಂಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಅವರು ಕೊಡುವ ಉತ್ತರ ಹೀಗಿದೆ. ಅದು ತಣ್ಣಗಿನ ಸಿನಿಮಾ. ಒಂದಿಷ್ಟು ಫೈಟ್ಸ್ ಇರಬೇಕಿತ್ತು ಅಂತ ಜನ ಹೇಳಿದರು. ಎಲ್ಲಾ ಚಿತ್ರಗಳಲ್ಲೂ ನಾನು ಹೊಡೆದಾಡಬೇಕು ಅನ್ನೋದೇ ಜನರ ಬಯಕೆ. ಅವರ ನಿರೀಕ್ಷೆಗೆ ಸ್ಪಂದಿಸದಿದ್ದರೆ ಸಿನಿಮಾ ಓಡೋದು ಕಷ್ಟ ಅಂತ ಈಗ ಸ್ಪಷ್ಟವಾಗಿದೆ. ಸ್ಲಂ ಬಾಲ ಕಥೆಯೇನೋ ಚೆನ್ನಾಗಿತ್ತು. ಕೆಲವು ಸಲ ನಮಗೆಲ್ಲಾ ಹಿಡಿಸಿದ್ದು ಜನಕ್ಕೆ ಇಷ್ಟವಾಗೋಲ್ಲ. ಇನ್ನು ಮುಂದೆ ಸಾಕಷ್ಟು ಫೈಟ್ ದೃಶ್ಯಗಳಿರುವ ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅಂದ್ಕೊಡಿದೀನಿ.
ದುನಿಯಾದಲ್ಲಿ ಕಲ್ಲು ಕುಟ್ಟುವವ, ಚಂಡದಲ್ಲಿ ಬೆಸ್ತ, ಯುಗದಲ್ಲಿ ರೌಡಿ, ಅವ್ವದಲ್ಲಿ ಹಳ್ಳಿಹೈದ, ಸ್ಲಂ ಬಾಲ ಏನೂಂತ ಹೆಸರೇ ಹೇಳುತ್ತೆ, ಈಗ ತಾಕತ್ನಲ್ಲಿ ಲಾರಿ ಕ್ಲೀನರ್. ತಮಗೆ ಒಪ್ಪೋದರಿಂದ ಇಂಥ ಪಾತ್ರಗಳನ್ನೇ ವಿಜಯ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬರೀ ಇಳಿತಗಳನ್ನೇ ಕಂಡಿರುವ ವಿಜಯ್ಗೆ ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಿ ಅಂತ ಕೇಳಿದರೆ, ಬಿಡುವಿದ್ದರಲ್ಲವೇ ಏನಾದ್ರೂ ಮಾಡೋದು ಅಂತ ನಗ್ತಾರೆ!


Click it and Unblock the Notifications