ಕುಡುಕ ವಕೀಲನಾಗಿ ನವರಸ ನಾಯಕ ಜಗ್ಗೇಶ್
'ಎದ್ದೇಳು ಮಂಜುನಾಥ' ಚಿತ್ರದಲ್ಲಿ ಜಗ್ಗೇಶ್ ಅವಿದ್ಯಾವಂತ, ಕುಡುಕನಾಗಿ ಬೇಜವಾಬ್ದಾರಿ ಪಾತ್ರ ಪೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಬಾರಿ ಜಗ್ಗೇಶ್ ಕುಡುಕ ವಕೀಲನ ಪಾತ್ರವನ್ನು ಪೋಷಿಸುತ್ತಿದ್ದಾರೆ. ಚಿತ್ರದ ಹೆಸರು ಗೊತ್ತೇ ಇದೆ ಮಂಜುನಾಥ ಬಿಎ ಎಲ್ಎಲ್ಬಿ.
ನಟ, ನಿರ್ದೇಶಕ ಮೋಹನ್ ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆ ಸಂಭಾಷಣೆ ಜವಬ್ದಾರಿ ವಹಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಬಿರುಸಿನಿಂದ ನಡೆಯುತ್ತಿದೆ. ದಂಡಂ ದಶಗುಣಂ ಖ್ಯಾತಿಯ ಎ ಗಣೇಶ್ ಚಿತ್ರದ ನಿರ್ಮಾಪಕರು.
ಮುರಳಿ ಮೀಟ್ಸ್ ಮೀರಾ ಚಿತ್ರದಲ್ಲಿ ಅಭಿನಯಿಸಿದ್ದ ರೀಮಾವೋರಾ ಚಿತ್ರದ ನಾಯಕಿ. ಜಗ್ಗೇಶ್ಗೆ ಇದೇ ಮೊದಲ ಬಾರಿಗೆ ಮೋಹನ್ ಆಕ್ಷನ್ ಕಟ್ ಹೇಳುತ್ತಿರುವುದು. ಜಗ್ಗೇಶ್ ಮ್ಯಾನರಿಸಂಗೆ ತಕ್ಕಂತೆ ಸಂಭಾಷಣೆ ಹೆಣೆಯುವುದು ಬಹಳ ಕಷ್ಟ ಎನ್ನುತ್ತಾರೆ ಅವರು.
ಆರಂಭದಲ್ಲಿ ಈ ಚಿತ್ರಕ್ಕೆ ಮುತ್ತುರಾಜ್ ಎಂದು ಹೆಸರಿಡಲಾಗಿತ್ತು. ಆದರೆ ಚಿತ್ರದ ನಾಯಕ ಕುಡುಕನಾದ ಕಾರಣ ಆ ಹೆಸರಿಗೆ ಶೋಭೆ ತರುವುದಿಲ್ಲ ಎಂದು ಶೀರ್ಷಿಕೆಯನ್ನು ಮಂಜುನಾಥ ಬಿಎ ಎಲ್ಎಲ್ಬಿ ಎಂದು ಇಡಲಾಯಿತು ಎನ್ನುತ್ತಾರೆ ಮೋಹನ್. ಸಲ್ಮಾನ್ ಖಾನ್ ಹಾಗೂ ಕರೀಷ್ಮಾ ಕಪೂರ್ ಜೊತೆಯಾಗಿ ಅಭಿನಯಿಸಿದ 'ಬಾಡಿಗಾರ್ಡ್' ಹಿಂದಿ ಚಿತ್ರದ ಆಧಾರವಾಗಿ ಬಂದ ಕನ್ನಡದ 'ಬಾಡಿಗಾರ್ಡ್' ಚಿತ್ರವನ್ನು ಜಗ್ಗೇಶ್ ನಿರ್ಮಿಸಿ, ಅಭಿನಯಿಸಿದ್ದರು. ಆದರೆ ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ.
ಈ ಚಿತ್ರದ ತಾರಾಬಳಗದಲ್ಲಿ ಕರಿಬಸವಯ್ಯ, ಸ್ವಸ್ತಿಕ್ ಶಂಕರ್, ಗಿರಿಜಾ ಲೋಕೇಶ್, ಶಂಕರ್ ಪಾಟೀಲ್, ರಾಣಿ ಮುಂತಾದವರಿದ್ದಾರೆ. ವಿನಯ್ಚಂದ್ರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಶೋಕ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿರುವ ಮಂಜುನಾಥ ಬಿ.ಎ.ಎಲ್.ಎಲ್.ಬಿ ಚಿತ್ರಕ್ಕೆ ರವಿಶಂಕರ್ ಅವರ ನಿರ್ಮಾಣ ನಿರ್ವಹಣೆಯಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











