ಶ್ರೀನಗರ ಕಿಟ್ಟಿಗೆ ಬೆಳಗೆರೆ ಪುತ್ರಿ ಜತೆ ಕಂಕಣ ಯೋಗ
'ಇಂತಿ ನಿನ್ನ ಪ್ರೀತಿಯ' ಚಿತ್ರದ ನಂತರ ಶ್ರೀನಗರ ಕಿಟ್ಟಿಯ ದುನಿಯಾ ಬದಲಾಗಿದೆ. ನಾಲ್ಕು ಕನ್ನಡ ಚಿತ್ರಗಳಲ್ಲಿ ನಟಿಸಲು ಕಿಟ್ಟಿ ಈಗಾಗಲೇ ಸಹಿ ಹಾಕಿದ್ದಾರೆ. ತಮ್ಮ ನಾಮಧೇಯವನ್ನು ಮುದ್ದಾಗಿ ಕೃಷ್ಣ ಎಂದು ಬದಲಾಯಿಸಿಕೊಂಡಿದ್ದಾರೆ. ಶೀಘ್ರದಲ್ಲೇ ರವಿಬೆಳಗೆರೆ ಅವರ ಅಳಿಯನಾಗುವ ಯೋಗ ಕೂಡಿ ಬಂದಿದೆ.
ಕೆ.ಮಂಜು ನಿರ್ಮಿಸುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿಯ ಚಿತ್ರ ಮದುವೆಗೂ ಮುಂಚೆ ಸೆಟ್ಟೇರಲಿದೆ. ರವಿಬೆಳಗೆರೆ ಅವರ ಕಿರಿಯ ಪುತ್ರಿ ಭಾವನಾ ಬೆಳಗೆರೆ ಅವರೊಂದಿಗೆ ಮೇ.8ರಂದು ನಿಶ್ಚಿತಾರ್ಥ ಮುಗಿಸಿಕೊಂಡು ಆನಂತರ 2008ರ ಜೂನ್ ತಿಂಗಳ ಕೊನೆಯ ವಾರದಲ್ಲಿ ಮದುವೆಯಾಗಲಿದ್ದಾರೆ ಕಿಟ್ಟಿ.
ನಾಗತಿಹಳ್ಳಿ ನಿರ್ದೇಶನದ ಚಿತ್ರದ ನಂತರ ದಿನೇಶ್ ಬಾಬು ಅವರ ಮನರಂಜನಾತ್ಮಕ ಚಿತ್ರ ಸೆಟ್ಟೇರಲಿದೆ. ಇದರ ನಂತರ ಗೆಳೆಯ ಚಿತ್ರದ ನೃತ್ಯ ಸಂಯೋಜಕ ಹರ್ಷ ಅವರ ಚಿತ್ರದಲ್ಲಿ ಆಕ್ಷನ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಮೂರು ಚಿತ್ರಗಳು ಆದ ನಂತರ ಕಿಟ್ಟಿ ಅವರ ಭಾವಿ ಮಾವ ರವಿ ಬೆಳಗೆರೆ ನಿರ್ದೇಶನದಲ್ಲಿ ಈ ಟಿವಿಯ ಕಾರ್ಯಕ್ರಮವೊಂದು ಶುರುವಾಗಲಿದೆ. ರವಿಬೆಳಗೆರೆ ಅವರು ಈಟಿವಿ ಕನ್ನಡ ಸುರೇಂದ್ರನಾಥ್ಗಾಗಿ 'ಒಂದು ಮಳೆಯ ರಾತ್ರಿ' ಮಾಡಿಕೊಡಲಿದ್ದಾರೆ.
ಶ್ರೀನಗರ ಕಿಟ್ಟಿ ನಟಿಸಿದ ಕನ್ನಡದ ಗಿರಿ, ತಮಿಳಿನ ಕೇವಲ ಎರಡೇ ಎರಡು ಪಾತ್ರಗಳಿರುವ 'ಇರುವರ್ ಮಟ್ಟಮ್' ಬಾಕ್ಸಾಫೀಸ್ ಗಳಿಕೆಯಲ್ಲಿ ಸೋತಿತು. ಪ್ರಸ್ತುತ 'ಇಂತಿ ನಿನ್ನ ಪ್ರೀತಿಯ' ಗಳಿಕೆಯಲ್ಲಿ ಪರ್ವಾಗಿಲ್ಲ. ಸೆನ್ಸಾರ್ ಮಂಡಳಿ 'ಇಂತಿ ನಿನ್ನ ಪ್ರೀತಿಯ' ಚಿತ್ರದಲ್ಲಿನ ಒಂಬತ್ತೂವರೆ ನಿಮಿಷಗಳ ದೃಶ್ಯಗಳನ್ನು ಕತ್ತರಿ ಹಾಕಿದ ಕಾರಣ ಚಿತ್ರ ಅದ್ಭುತವಾಗಿ ಬಂದಿದೆ ಎನ್ನುತ್ತಾರೆ ಕಿಟ್ಟಿ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications