ರಾಜ್ ಹುಟ್ಟು ಹಬ್ಬ : ಅಂಗಳದಿಂದ ಅಂಗಣಕ್ಕೆ...
ಸದ್ದಿಲ್ಲದೆ ಸಿದ್ದತೆಗಳು ನಡೆಯುತ್ತಿವೆ.
ಅಣ್ಣಾವ್ರ ಹುಟ್ಟುಹಬ್ಬವೇ ಹಾಗೆ. ಅಭಿಮಾನಿಗಳ ಪಾಲಿಗದು ಮನೆಹಬ್ಬದ ಸಂಭ್ರಮ. ಪ್ರತಿ ವರ್ಷ ಏಪ್ರಿಲ್ 24 ರಂದು ಅಣ್ಣಾವ್ರ ಹುಟ್ಟುಹಬ್ಬದಲ್ಲಿ ಭಾಗಿಯಾಗುವುದು ಅಭಿಮಾನಿಗಳ ಪಾಲಿಗೆ ಪ್ರೀತಿಯ ಕರ್ತವ್ಯ. ಅಂದು ರಾಜ್ ಮನೆಯಲ್ಲೇ ಇರಬೇಕು. ಅಭಿಮಾನಿಗಳಿಗೆ ದರ್ಶನ ಕೊಡಬೇಕು- ಇದು ಅಭಿಮಾನಿಗಳ ಪ್ರೀತಿಯ ಆಗ್ರಹ.
ಈ ಬಾರಿಯೂ ರಾಜ್ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಮಹಾಲಕ್ಷ್ಮೀಪುರದ ಅಖಿಲ ಕರ್ನಾಟಕ ಶಿವರಾಜ್ಕುಮಾರ್ ಸೇನಾ ಸಮಿತಿ ಏಪ್ರಿಲ್ 24 ರಂದು ವಿಭಿನ್ನವಾಗಿ ರಾಜ್ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದೆ.
ಸದಾಶಿವನಗರದ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾರಂಭ ಎಂದು ಸಂಘದ ಗೌರವಾಧ್ಯಕ್ಷ ಬಿ.ಪಿ.ತ್ಯಾಗರಾಜ್ ಹಾಗೂ ಅಧ್ಯಕ್ಷ ಬಿ.ಚಂದ್ರಶೇಖರ್ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲಿಗೆ ರಾಜ್ ಹುಟ್ಟುಹಬ್ಬ ಸದಾಶಿವನಗರದ ಮನೆಯಂಗಳದಿಂದ ಸಾರ್ವಜನಿಕ ಮೈದಾನಕ್ಕೆ ಬಂದಂತಾಯಿತು.
ರಾಜ್ ಹುಟ್ಟುಹಬ್ಬದ ಹೈಲೈಟ್ಸ್ :
- 74 ಕಿಲೋ ತೂಕದ ಕೇಕ್ ಕತ್ತರಿಸುವ ಮೂಲಕ ಅಣ್ಣಾವ್ರಿಂದ 74 ನೇ ಬರ್ತಡೇ ಆಚರಣೆ.
- ಕೇಕ್ ಕತ್ತರಿಸಿದ ನಂತರ ಅಭಿಮಾನಿಗಳಿಂದ ಅಣ್ಣಾವ್ರಿಗೆ ಬೆಳ್ಳಿ ಕಿರೀಟ.
- ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ ವಿತರಣೆ.
- ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟುಹಬ್ಬ ಸಮಾರಂಭದ ಅಧ್ಯಕ್ಷತೆ ವಹಿಸುವರು.
- ಪಾರ್ವತಮ್ಮ ರಾಜ್ಕುಮಾರ್, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ, ಶಿವಣ್ಣ, ರಾಘವೇಂದ್ರ, ಸಾ.ರಾ.ಗೋವಿಂದು, ಕೆಸಿಎನ್ ಚಂದ್ರಶೇಖರ್, ಜಮೀರ್ ಅಹಮದ್ ಖಾನ್ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.
ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು
ಮುಹೂರ್ತದ ದಿನವೇ ಅಪ್ಪಾಜಿ ಹುಟ್ಟುಹಬ್ಬದಂದು ಅಪ್ಪು ತೆರೆ ಕಾಣುತ್ತದೆ ಎಂದು ಶಿವಣ್ಣ ಘೋಷಿಸಿದ್ದರು. ಅಪ್ಪು ಪ್ರೇಕ್ಷಕರ ಆಶೀರ್ವಾದಕ್ಕೆ ಈಗ ರೆಡಿ. ರಾಜ್ ಹುಟ್ಟುಹಬ್ಬದ ಕೊಡುಗೆಯಾಗಿ ಏಪ್ರಿಲ್ 26 ರಂದು ಅಪ್ಪು ಬಿಡುಗಡೆ. ಅಪ್ಪು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಪುನೀತ್ ಕಾಣಿಸಿಕೊಳ್ಳುವ ಮೂಲಕ ಮೂವರು ರಾಜ್ ಪುತ್ರರೂ ಹೀರೋ ಆದಂತಾಯಿತು.


Click it and Unblock the Notifications