ಕಾಮಿಡಿ ಗಣೇಶ್ಗೆ ಐದೇಐದು ಪ್ರಶ್ನೆಗಳು!

1. ಮುಂಗಾರು ಮಳೆಯಲ್ಲಿ ತೋಯ್ದಮೇಲೆ ಹೇಗಿದ್ದೀರಾ?
ಈಗ ಬಹಳ ಚೆನ್ನಾಗಿದ್ದೀನಿ. ಇಷ್ಟು ದಿನ ಚಳಿಯಲ್ಲಿದ್ದ ಮೈ ಬೆಚ್ಚಗಾಗಿದೆ. ದೊಡ್ಡ ಕಂಬಳಿ ಹೊದ್ದುಕೊಂಡಂತಾಗಿದೆ. ಅಪ್ಪಅಮ್ಮ ಹೇಳ್ತಾ ಇರ್ತಾರೆ. ಇಂಥ ಯಶಸ್ಸಿನ ಗಾಳಿ ಬರ್ತಾ ಇರುತ್ತೆ ಹುಷಾರು ಪುಟ್ಟಾ ಅಂತ. ನಾನು 'ಹಾಗೇ ಸುಮ್ಮನೆ" ಹಾಯಾಗಿದ್ದೀನಿ.
2. ಈ ಮಳೆ ಮುನ್ನ ಬರಕಾಡಿತ್ತಲ್ವಾ?
ಈ ಪ್ರಕೃತಿ ನಿಯಮನೇ ಹಾಗಲ್ವಾ. ಒಂದು ಸಲ ಬಿಸಿಲು, ಒಂದು ಸಲ ಮಳೆ. ನನ್ನ ಜೀವನದಲ್ಲೂ ಬಿಸಿಯಾದ ಬಿರುಗಾಳಿ ಬೀಸಿದೆ. ಅವೆಲ್ಲದರ ನಂತರವೇ ಈಗ ಮುಂಗಾರಿನ ತಂಗಾಳಿ. ದಿನದ 24 ಗಂಟೆನೂ ಸಾಲದ ಹಾಗೆ ಮಾಡಿದೆ. ಅಲ್ಲಿ ಮೀಟಿಂಗ್, ಇಲ್ಲಿ ಮಾತುಕತೆ ಹೀಗೆ ಮನೆಯಲ್ಲೇ ನನ್ನನ್ನು ಅತಿಥಿ ಥರ ಮಾಡಿದೆ.
3. ಈ ಗೆಲುವು ಅರ್ಧರಾತ್ರಿಯಲ್ಲಿ ಐಶ್ವರ್ಯಬಂದ ಹಾಗಿಲ್ವಾ ನಿಮಗೆ?
ಖಂಡಿತ ಇಲ್ಲ. ಈ ಯಶಸ್ಸಿನ ಹಿಂದೆ 12ವರ್ಷಗಳ ಶ್ರಮ ಇದೆ. ಹೀಗಾಗಬೇಕು, ಹಾಗಾಗಬೇಕು ಎನ್ನುವ ಕನಸಿದೆ. ಇದು ಬಂದಿದ್ದು ಶ್ರಮ ಅದೃಷ್ಟಗಳ ಮಿಶ್ರಣದಿಂದ. ಇದರಲ್ಲಿ ಶ್ರಮದ ಪಾಲೇ ಹೆಚ್ಚು.
4. ಮನೆಯಲ್ಲಿ ಪ್ರತಿಕ್ರಿಯೆ ಹೇಗಿದೆ?
ನನಗಿಂತ ಹೆಚ್ಚಿನ ಖುಷಿ ಅವರಿಗಾಗಿದೆ. ಅಪ್ಪ, ಅಮ್ಮ ಫ್ರೀ ಇದ್ದಾಗೆಲ್ಲಾ ಸಿನೆಮಾ ನೋಡ್ಕೊಂಡು ಬರ್ತಾರೆ. ಈಗಾಗಲೇ ಸುಮಾರು 7-8 ಸಲ ನೋಡಿದ್ದಾರೆ. ನನ್ನ ಬೇರೆ ಯಾವ ಚಿತ್ರಾನೂ ಅಷ್ಟು ಸಲ ನೋಡಿಲ್ಲ ಅವರು. ನನ್ನ ಈ ಯಶಸ್ಸಿಗೆ ಅವರೂ ಕಾರಣ. ಕನಸು ಕಾಣುವ ನನ್ನ ಬೆಂಬಲಕ್ಕೆ ನಿಂತಿದ್ದರು. ಎಲ್ಲಾ ನೋಡಿದರೆ ಖುಷಿಯಾಗುತ್ತೆ.
5. ಮುಂದಿನ ಜೀವನ ಹೇಗೆ? ಮದುವೆ ಯೋಚನೆ?
ಸದ್ಯಕ್ಕೆ ಅಂಥ ಷೆಡ್ಯೂಲ್ ಇಲ್ಲ. ಕೈಯಲ್ಲಿ 'ಕೃಷ್ಣ", 'ಅರಮನೆ" ಎರಡು ಚಿತ್ರ ಇದೆ. ಒಟ್ಟಾರೆ 4-5ಸಿನೆಮಾ ಒಪ್ಕೊಂಡಿದ್ದೀನಿ. ಒಂದೂವರೆ ವರ್ಷ ಬ್ಯುಸಿಯಾಗಿರ್ತೀನಿ.


Click it and Unblock the Notifications