ನಾಯಗನ್ ರೀಮೇಕಿನಲ್ಲಿ ಸುದೀಪ್
*ದಟ್ಸ್ಕನ್ನಡ ಬ್ಯೂರೋ
ಕಮಲ ಹಾಸನ್ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾಯಗನ್’ ಮೇಲೆ ಧನರಾಜ್ ಕೈಯಿಟ್ಟಿದ್ದಾರೆ. ಎಚ್ಟೂಓ ನಂತರ ಫುಟ್ಪಾತ್ ಪಾರಾಯಣದಲ್ಲೇ ಕಳೆದುಹೋಗಿದ್ದ ನಿರ್ಮಾಪಕ ಧನರಾಜ್ ‘ದಳಪತಿ’ ಎಂಬ ಚಿತ್ರಕ್ಕೆ ಹಣ ಹಾಕಿ ಕೂತಿದ್ದಾಗ ಹೊಳೆದ ಯೋಚನೆಯ ಫಲವಿದು. ಈಗವರು ಭರವಸೆ ಇಟ್ಟುಕೊಂಡು ಸುದೀಪ್ ಕೈಲಿ ಕಮಲ ಹಾಸನ್ ಪಾತ್ರ ಮಾಡಿಸಲು ಹೊರಟಿದ್ದಾರೆ.
‘ನಾಯಗನ್’ ಕನ್ನಡಕ್ಕೆ ರೀಮೇಕಾಗುತ್ತಿದೆ. ಚಿತ್ರದ ಹೆಸರು ‘ವರದ ನಾಯಕ’. ತಮಿಳಿನಲ್ಲಿ ಮಣಿ ರತ್ನಂ ನಿರ್ದೇಶಿಸಿದ್ದ ಈ ಚಿತ್ರ ಸಾಕಷ್ಟು ಕಾರಣಗಳಿಂದ ಭಾರೀ ಮೆಚ್ಚಿಗೆ ಗಿಟ್ಟಿಸಿತ್ತು. ಇಳಯರಾಜಾ ಸಂಗೀತ ಹೊಸೆದಿದ್ದ ‘ನಾಯಗನ್’ನಲ್ಲಿ ದೆಹಲಿ ಗಣೇಶ್, ಶರಣ್ಯ, ನಾಸರ್ ಮೊದಲಾದವರು ಮಿಂಚಿದ್ದರು. ಕಮಲ ಹಾಸನ್ ಪಾತ್ರದ ಪರಕಾಯ ಪ್ರವೇಶ ಮಾಡಿದ್ದರು ಅಂತ ಖುದ್ದು ಮಣಿರತ್ನಂ ಸರ್ಟಿಫಿಕೇಟ್ ಕೊಟ್ಟಿದ್ದರು.
ಇಂಥಾ ಭಾರೀ ಕಥೆಯನ್ನು ಕನ್ನಡಕ್ಕೆ ನಿರ್ದೇಶಿಸುತ್ತಿರುವವರು ಡಿ.ರಾಜೇಂದ್ರ ಬಾಬು. ರವಿಚಂದ್ರನ್ ಜೊತೆ ಅವರ ಸಂಬಂಧ ಮತ್ತೆ ಹಳಸಿದ ನಂತರ ಇದನ್ನು ಡಿ.ರಾ.ಬಾಬು ಸವಾಲಾಗಿ ಸ್ವೀಕರಿಸಿದ್ದಾರೆ.
ಸ್ವಮೇಕ್ಗೂ ತಮಗೂ ಆಗೋಲ್ಲವೇನೋ ಎಂಬಂತಾಗಿರುವ ಸುದೀಪ್ಗೂ ಇದೊಂದು ಚಾಲೆಂಜಾಗಿದೆ. ‘ಕಿಚ್ಚ’ ಸೋತ ನಂತರ ಈಗ ಮತ್ತೆ ರೀಮೇಕ್ ಚಿತ್ರದ ಅವಕಾಶ ಅವರನ್ನು ಹುಡುಕಿಕೊಂಡು ಬಂದಿದೆ. ಸದ್ಯಕ್ಕೆ ತಮಿಳಿನ ‘ನಾಯಗನ್’ ಚಿತ್ರದ ಕ್ಯಾಸೆಟ್ ನೋಡುತ್ತಾ ಕಮಲ ಹಾಸನ್ ನಡಾವಳಿಗಳನ್ನು ಕರಗತ ಮಾಡಿಕೊಳ್ಳುವುದರಲ್ಲಿ ಸುದೀಪ್ ಬ್ಯುಸಿ !
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications