ಸದಾಶಿವನಗರ ಬಂಗಲೆಯಲ್ಲಿ ಧರ್ಮಸಿಂಗ್!
- ದಟ್ಸ್ಕನ್ನಡ ಬ್ಯೂರೊ
ಸದಾಶಿವನಗರದ ವರನಟ ರಾಜ್ಕುಮಾರ್ ಬಂಗಲೆಯಲ್ಲಿ ಬುಧವಾರ (ಆ.18) ಕಲರವ. ಅಣ್ಣಾವ್ರ ಭೇಟಿಗಾಗಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಖುದ್ದು ಬಂಗಲೆಗೆ ಆಗಮಿಸಿದ್ದರು. ಮೇರುನಟ ಹಾಗೂ ಮುಖ್ಯಮಂತ್ರಿಯ ಭೇಟಿ ನೆರೆದವರಲ್ಲಿ ಪುಳಕ ಉಂಟು ಮಾಡಿತ್ತು .
ರಾಜ್ ದಂಪತಿಗಳಿಗೆ ಪುಷ್ಪಗುಚ್ಛ ನೀಡಿ ಅಭಿಮಾನ ಸೂಚಿಸಿದ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಇತ್ತೀಚೆಗಷ್ಟೇ ಹೃದಯಬೇನೆಗೆ ತುತ್ತಾಗಿದ್ದ ರಾಜ್ಕುಮಾರ್ ಕ್ಷೇಮಸಮಾಚಾರ ವಿಚಾರಿಸಿದರು.
ಕನ್ನಡ ಚಿತ್ರೋದ್ಯಮದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ ನಡುವಣ ಮಾತುಕತೆ ಮಹತ್ವ ಪಡೆದಿತ್ತು . ಸುಮಾರು ಅರ್ಧ ತಾಸು ಮಾತುಕತೆ ನಡೆಯಿತು. ಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಅತ್ಯಂತ ತ್ವರಿತವಾಗಿ ಪರಿಹಾರ ಒದಗಿಸುವುದಾಗಿ ಮಾತುಕತೆಯ ಸಂದರ್ಭದಲ್ಲಿ ಧರ್ಮಸಿಂಗ್ ಆಶ್ವಾಸನೆ ನೀಡಿದರು.
ಚಿತ್ರೋದ್ಯಮದ ಸಮಸ್ಯೆಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ನೇಮಿಸಿರುವ ಸಮಿತಿ ವರದಿ ನೀಡುವವರೆಗೂ ಪರಭಾಷೆಗಳ ಹೊಸಚಿತ್ರಗಳನ್ನು 7 ವಾರಗಳವರೆಗೆ ರಾಜ್ಯದಲ್ಲಿ ತೆರೆ ಕಾಣಲು ಅವಕಾಶ ಮಾಡಿಕೊಡಬಾರದು ಎಂದು ರಾಜ್ ಮುಖ್ಯಮಂತ್ರಿಗೆ ಮನವಿ ಮಾಡಿದರು. ಈ ಸಂಬಂಧ ಮನವಿಪತ್ರವನ್ನೂ ಧರ್ಮಸಿಂಗ್ರಿಗೆ ಸಲ್ಲಿಸಲಾಯಿತು.
ಪಾರ್ವತಮ್ಮ ರಾಜ್ಕುಮಾರ್, ರವಿಚಂದ್ರನ್, ಜಗ್ಗೇಶ್, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಪುನೀತ್, ರಾಘವೇಂದ್ರ ರಾಜ್ಕುಮಾರ್, ರಾಕ್ಲೈನ್ ವೆಂಕಟೇಶ್, ಬಸಂತಕುಮಾರ್ ಪಾಟೀಲ್, ಕನಕಪುರ ಶ್ರೀನಿವಾಸ್, ಜೋಸೈಮನ್, ತಿಪಟೂರು ರಘು ಮುಂತಾದವರು ಧರ್ಮಸಿಂಗ್ ಭೇಟಿಯ ಸಂದರ್ಭದಲ್ಲಿ ಹಾಜರಿದ್ದರು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications