ಉಡುಪಿ ಸುತ್ತಾಮುತ್ತ ‘ನಾಯಿ ನೆರಳು’
ಪ್ರತಿ ಚಿತ್ರಕ್ಕೂ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಹೊಸ ಚಿತ್ರ ‘ನಾಯಿ ನೆರಳು’. ಈ ಚಿತ್ರದ ಚಿತ್ರೀಕರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭರದಿಂದ ಸಾಗಿದೆ.
ಎಸ್.ಎಲ್.ಬೈರಪ್ಪ ಅವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ನಟಿ ಪವಿತ್ರ ಲೋಕೇಶ್ ಮುಖ್ಯಪಾತ್ರದಲ್ಲಿದ್ದಾರೆ. ಸುಮಾರು 45 ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿ ಜನಪ್ರಿಯರಾಗಿರುವ ಪ್ರತಿಭಾವಂತೆ ಪವಿತ್ರಾಲೋಕೇಶ್ಗೆ, ಚಿತ್ರ ಪ್ರಶಸ್ತಿ ತಂದುಕೊಡುವುದೇ ಎಂಬುದನ್ನು ಕಾದು ನೋಡಬೇಕು.
ಉಡುಪಿಯಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ. ಶಿರ್ವಾದ ನಾಡಿಬೆಟ್ಟು ಮನೆಯಲ್ಲಿ ಚಿತ್ರೀಕರಣ ಸಾಗಿದೆ. ಜನವರಿ 2006ರಲ್ಲಿ ‘ನಾಯಿ ನೆರಳು’ ತೆರೆಕಾಣಬಹುದು ಎಂದು ಕಾಸರವಳ್ಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಹಸೀನಾ’ ನಂತರ ತಮ್ಮ ನಿರ್ದೇಶನದ ಹನ್ನೊಂದನೇ ಚಿತ್ರಕ್ಕೆ ಕಾಸರವಳ್ಳಿ ಜೀವತುಂಬಿದ್ದಾರೆ. ಬಸಂತ್ ಕುಮಾರ್ ಪಾಟೀಲ್ ನಿರ್ಮಾಣದ ಈ ಚಿತ್ರಕ್ಕೆ ಥಾಮಸ್ ಸಂಗೀತ ನೀಡುತ್ತಿದ್ದಾರೆ. ಲಂಡನ್ನಲ್ಲಿ ನೆಲೆಸಿರುವ ಅಶ್ವಿನ್ ಬೊಳಾರ, ಈ ಚಿತ್ರದ ಪ್ರಮುಖ ಪಾತ್ರದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಿತರಾಗುತ್ತಿದ್ದಾರೆ.
ವರ್ಷಕ್ಕೊಂದು ಸಿನಿಮಾ ಎಂಬ ತಮ್ಮ ಅಲಿಖಿತ ನಿಯಮವನ್ನು ಪಕ್ಕಕ್ಕಿಟ್ಟಿರುವ ಗಿರೀಶ್ ಕಾಸರವಳ್ಳಿ ‘ನಾಯಿ ನೆರಳು’ ಚಿತ್ರೀಕರಣದಲ್ಲಿ ಮೈಮರೆತಿದ್ದಾರೆ. ಚಿತ್ರದ ಕಥೆ, ಕಾಸರವಳ್ಳಿ ಅವರ ಶ್ರಮ ಮತ್ತೊಂದು ರಾಷ್ಟ್ರಪ್ರಶಸ್ತಿಯ ಕನಸಿಗೆ ಜೀವ ನೀಡುವಂತಿದೆ! ಅವರಿಗೆ ಬೆಸ್ಟ್ ಆಫ್ ಲಕ್ ಅನ್ನೋಣವೇ?
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications