ಕಠಾರಿವೀರ, ಗಾಡ್ಫಾದರ್ ಉಪ್ಪಿ ಸಂಧಾನ ವಿಫಲ
ಕಠಾರಿವೀರ ಮತ್ತು ಗಾಡ್ಫಾದರ್ ಚಿತ್ರಗಳ ಬಿಡುಗಡೆ ವಿವಾದ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಕೆ.ಮಂಜು ಹಾಗೂ ಮುನಿರತ್ನ ಇಬ್ಬರೂ ನಿರ್ಮಾಪಕರ ನಡುವಿನ ಹಗ್ಗ ಜಗ್ಗಾಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಗುರುವಾರ (ಏ.19) ರಿಯಲ್ ಸ್ಟಾರ್ ಉಪೇಂದ್ರ ಅವರ ಕತ್ರಿಗುಪ್ಪೆ ಮನೆಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.
ಮಂಜು ಮತ್ತು ಮುನಿರತ್ನ ಇಬ್ಬರೂ ಜಿದ್ದಿಗೆ ಬಿದ್ದಿದ್ದಾರೆ. ನೀ ಕೊಡೆ ನಾ ಬಿಡೆ ಎಂಬಂತೆ ಇಬ್ಬರೂ ಬಿಗಿ ಪಟ್ಟುಹಿಡಿದಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಇದ್ದ ಎಲ್ಲ ದಾರಿಗಳು ಬಂದ್ ಆಗಿವೆ. ಈಗ ಅವರಿಗೆ ಗೋಚರಿಸುತ್ತಿರುವ ಒಂದೇ ಒಂದು ದಾರಿ ರೆಬಲ್ ಸ್ಟಾರ್ ಅಂಬರೀಷ್ ಅವರ ಮನೆಗೆ ದಾರಿ.
ಗುರುವಾರ ನಡೆದ ಸಂಧಾನ ಸಭೆಯಲ್ಲಿ ಇಬ್ಬರೂ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಇಬ್ಬರು ನಿರ್ಮಾಪಕರೊಂದಿಗೂ ಉಪೇಂದ್ರ ಪ್ರತ್ಯೇಕವಾಗಿ ಚರ್ಚಿಸಿದರಾದರೂ ಸಮಸ್ಯೆ ಬಗೆಹರಿಯಲಿಲ್ಲ. ಇಬ್ಬರೂ ನಿರ್ಮಾಪಕರು ಅಲ್ಲಿಂದ ಎದ್ದು ಬಂದಿದ್ದಾರೆ. ಈಗ ಚೆಂಡು ಅಂಬರೀಷ್ ಮನೆಗೆ ಬಂದು ಬೀಳಲಿದೆ. ಮುಂದೇನಾಗುತ್ತದೋ ಎಂಬ ಕುತೂಹಲ ನಿಮ್ಮಂತೆಯೇ ನಮಗೂ ಇದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











