ಸದ್ದಿಲ್ಲದಂತೆ ಸುದೀಪ್ ಕೈಗೆತ್ತಿಕೊಂಡಿದ್ದಾರೆ ಕೆಂಪೇಗೌಡ
ಕಿಚ್ಚ ಸುದೀಪ್ ಸದ್ದಿಲ್ಲದಂತೆ ಚಿತ್ರವೊಂದನ್ನು ಕೈಗೆತ್ತಿಕೊಂಡಿರುವುದು ಗಾಂಧಿನಗರದಲ್ಲಿ ಸಖತ್ ಸುದ್ದಿಯಾಗಿದೆ. 'ಕೆಂಪೇಗೌಡ' ಎಂದು ಹೆಸರಿಡಲಾಗಿರುವ ಈ ಚಿತ್ರವನ್ನು ಅವರೇ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅಂದಹಾಗೆ ವಿಜಯನಗರ ಸಾಮ್ರಾಜ್ಯದ ಸಾಮಂತ, ಯಲಹಂಕದ ಪಾಳೇಗಾರ, ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ತಮಿಳಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿ ಮುನ್ನುಗ್ಗುತ್ತಿರುವ ಸೂರ್ಯ ಅಭಿನಯದ 'ಸಿಂಗಂ' ಚಿತ್ರದ ರೀಮೇಕ್ 'ಕೆಂಪೇಗೌಡ'. ಸುದೀಪ್ ಅವರಿಗೆ ಆಪ್ತರಾದ ಶಂಕರೇಗೌಡ ಚಿತ್ರವನ್ನು ನಿರ್ಮಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಈಗಾಗಲೆ ಸುದೀಪ್ ಜತೆ 'ಕನ್ವರ್ ಲಾಲ್' ಚಿತ್ರವನ್ನು ಶಂಕರೇಗೌಡರು ನಿರ್ಮಿಸುತ್ತಿದ್ದಾರೆ. ಕಾರಣಾಂತರಗಳಿಂದ ಈ ಚಿತ್ರ ಮುಂದಕ್ಕೆ ಹೋಗಿದೆ. ಈ ಹಿಂದೆ ತೆಲುಗಿನ 'ವಿಕ್ರಮಾರ್ಕುಡು' ಚಿತ್ರವನ್ನು ರೀಮೇಕ್ ಮಾಡಿ 'ವೀರ ಮದಕರಿ'ಯಾಗಿ ಸುದೀಪ್ ಮೆರೆದಿದ್ದರು. ಈಗ ಕೆಂಪೇಗೌಡನಾಗಿ ಸುದೀಪ್ ಪರಾಕ್ರಮ ತೋರಲಿದ್ದಾರೆ.
ಪರಭಾಷೆಯಲ್ಲಿ ಯಶಸ್ವಿಯಾದ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್ ಮಾಡುವುದರಲ್ಲಿ ಸುದೀಪ್ ಎತ್ತಿದಕೈ. ಅವರು ರೀಮೇಕ್ ಚಿತ್ರಗಳು ಯಶಸ್ವಿಯಾಗಿವೆ. ಮೈ ಆಟೋಗ್ರಾಫ್, ವಾಲಿ, ಸ್ವಾತಿಮುತ್ತು ಚಿತ್ರಗಳು ರೀಮೇಕ್ ಆದರೂ ಕಿಚ್ಚನಿಗೆ ಹೆಸರು ತಂದುಕೊಟ್ಟ ಚಿತ್ರಗಳು.


Click it and Unblock the Notifications











