ದುಬೈ ಬಾಬುನಲ್ಲಿ ಒಂದಾದ ಉಪೇಂದ್ರ,ಗೋವಿಂದ

ದುಬೈ ಬಾಬು ಕುರಿತು ಕುಮಾರ್ ಗೋವಿಂದ್ ಮಾತನಾಡುತ್ತಾ, ಪ್ರೇಕ್ಷಕರಿಗೆ ನಾನು ಈ ಚಿತ್ರದ ಬಗ್ಗೆ ಸಂಪೂರ್ಣ ಭರವಸೆ ಕೊಡುತ್ತೇನೆ.ಅಷ್ಟೇ ಅಲ್ಲ ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ದುಬೈ ಬಾಬು ಬರುತ್ತಿದ್ದಾನೆ ಎಂದು ಹೆಮ್ಮೆಯಿಂದ ಹೇಳಿದರು.
ದುಬೈ ಬಾಬು ಚಿತ್ರದಲ್ಲಿ ಕುಮಾರ್ ಗೋವಿಂದ್ ನಟಿಸುವಂತೆ ಉಪೇಂದ್ರ ಅವರು ಕರೆ ಮಾಡಿ ವಿನಂತಿಸಿಕೊಂಡಿದ್ದರು.ಹಾಗಾಗಿ ಇಬರಿಬ್ಬರ ನಡುವಿನ ಹಳೆಯ ಸ್ನೇಹ ಮತ್ತೆ ಚಿಗುರಿದೆ. ತನ್ನ ಕಷ್ಟದ ದಿನಗಳಲ್ಲಿ ಅನ್ನ ಹಾಕಿದ ಗೆಳೆಯ ಎಂದು ಉಪೇಂದ್ರ ನೆನೆಯುವುದನ್ನು ಮರೆತಿಲ್ಲ. 2008 ಕುಮಾರ್ ಗೋವಿಂದ್ ಗೆ ಒಂದರ್ಥದಲ್ಲಿ ಅದೃಷ್ಟದ ವರ್ಷ ಎಂದು ಹೇಳಬೇಕು. ಅವರ ಎರಡು ವರ್ಷಗಳ ಸುದೀರ್ಘ ಯೋಜನೆಯ 'ಸತ್ಯ'ಚಿತ್ರ ಮುಗಿದಿದೆ. ದುಬೈಬಾಬು ಸೇರಿದಂತೆ ಹೊಸಹೊಸ ಯೋಜನೆಗಳ ಕಡೆಗೆ ಅವರ ಗಮನ ಹರಿದಿದೆ.
ದುಬೈ ಬಾಬು ಚಿತ್ರದ ವಿಶೇಷಗಳು
ಇದು ತೆಲುಗಿನ 'ದುಬೈ ಸೀನು'ಚಿತ್ರದ ರೀಮೇಕ್. 'ಕುಟುಂಬ' ಹಾಗೂ 'ಗೌರಮ್ಮ' ಯಶಸ್ವಿ ಚಿತ್ರಗಳ ನಂತರ ಉಪೇಂದ್ರ ಅವರೊಂದಿಗೆ ಶೈಲೇಂದ್ರ ಬಾಬು ನಿರ್ಮಿಸುತ್ತಿರುವ ಮೂರನೆಯ ಚಿತ್ರ ಇದು. ಶೇ.70ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ನಿಖಿತಾ ಮತ್ತು ಸಲೋನಿ ಚಿತ್ರದ ಇಬ್ಬರು ನಾಯಕಿಯರು. ಇದೇ ಮೊದಲ ಬಾರಿಗೆ ಉಪೇಂದ್ರ ಜೊತೆಗೆ ದ್ವಾರಕೀಶ್ ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.
ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರದ ಬಗ್ಗೆ ನಿರ್ಮಾಪಕ ಶೈಲೇಂದ್ರ ಬಾಬು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟಿಕೊಂಡಿದ್ದಾರೆ. ಅವರ ನಿರ್ಮಾಣದ 'ಗಂಡ ಹೆಂಡತಿ' ಚಿತ್ರ ಈಗಾಗಲೇ ಸಾಕಷ್ಟು ನಷ್ಟವನ್ನು ತಂದೊಡ್ಡಿತ್ತು. ಒಟ್ಟಿನಲ್ಲಿ ನಿರ್ದೇಶಕ ನಾಗಣ್ಣ, ನಿರ್ಮಾಪಕ ಶೈಲೇಂದ್ರ ಬಾಬು ಹಾಗೂ ಉಪೇಂದ್ರ ಜೋಡಿ ಹ್ಯಾಟ್ರಿಕ್ ಕನಸಿನಲ್ಲಿದೆ.
ಗ್ಯಾಲರಿ :ರಾಜಕುಮಾರಿ ನಿಖಿತಾ || ಬುದ್ಧಿವಂತನ ರಾರಾರಾ..ಸಲೋನಿ || ರಿಯಲ್ ಸ್ಟಾರ್ ಉಪ್ಪಿ


Click it and Unblock the Notifications