ಭಾವಿ ಮುಖ್ಯಮಂತ್ರಿ(?)ಯ ಸಿನಿನಂಟು!
ಧರ್ಮಸಿಂಗ್ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭಗೊಂಡಿದೆ! ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಕನ್ನಡ ಚಿತ್ರೋದ್ಯಮದೊಂದಿಗೆ ನಂಟನ್ನು ಉಳಿಸಿಕೊಂಡು ಬಂದಿರುವ ಕುಮಾರಸ್ವಾಮಿ, ನಿರ್ಮಾಪಕರಾಗಿ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ ಗಲಾಟೆ ಅಳಿಯಂದಿರು, ಸೂರ್ಯವಂಶ, ಪ್ರೇಮೋತ್ಸವ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಗೆದ್ದಿವೆ. ಇತ್ತೀಚೆಗೆ ತೆರೆಕಂಡು ಸುಮಾರು 500ದಿನ ಪ್ರದರ್ಶನ ಕಂಡ ‘ಚಂದ್ರಚಕೋರಿ’, ಕುಮಾರಸ್ವಾಮಿಗೆ ಹೆಸರು ತಂದಿದೆ.
ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವ ಬಯಕೆ ಅವರಲ್ಲಿದ್ದು, ವಿತರಕರಾಗಿ, ಪ್ರದರ್ಶಕರಾಗಿ ಸಹ ಕುಮಾರಸ್ವಾಮಿ ಪರಿಚಿತರು. ಕನ್ನಡದಲ್ಲಿ ಪ್ರಾದೇಶಿಕ ಚಾನಲ್(ಕನ್ನಡ ಕಸ್ತೂರಿ) ಆರಂಭಿಸುವ ನಿಟ್ಟಿನಲ್ಲಿ ಅವರು ಪ್ರಯತ್ನ ನಡೆಸಿದ್ದಾರೆ.
ಪರಭಾಷಾ ಚಿತ್ರಗಳ ವಿರುದ್ಧ ರಾಜ್ಯದಲ್ಲಿ ಈ ಹಿಂದೆ ಆರಂಭವಾಗಿದ್ದ ಸಮರದಲ್ಲಿ, ಕುಮಾರಸ್ವಾಮಿ ಗೊಂದಲ ಸೃಷ್ಟಿಸಿದ್ದರು. ಕನ್ನಡ ಚಿತ್ರೋದ್ಯಮದ ಧೋರಣೆ ಬಗ್ಗೆ ಬಹಿರಂಗ ಸಮರ ಸಾರಿದ್ದರು. ವಿಚಾರ ಏನೇ ಇರಲಿ, ಚಿತ್ರೋದ್ಯಮದ ಗಣ್ಯರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ ಸಂದರ್ಭ ರಾಜ್ಯದಲ್ಲಿದೆ. ಅವರಿಂದ ಚಿತ್ರೋದ್ಯಮ ಹೆಚ್ಚಿನ ನಿರೀಕ್ಷೆ ಮಾಡಿದರೆ ತಪ್ಪೇನಿಲ್ಲ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications