Don't Miss!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇಳದ ಮೊದಲ ದಿನ ಮಿಂಚಿದ ಅಂಬಿ, ಹೇಮಾ ಮಾಲಿನಿ ಹಾಗೂ ಅನಂತಕುಮಾರ್
*ಚೇತನ್ ನಾಡಿಗೇರ್
ಜಗಮಗಿಸುವ ವೇದಿಕೆ. ಸಭಾಂಗಣ. ವೇದಿಕೆಯ ಮೇಲೆ ಹೇಮಮಾಲಿನಿ, ತಾರಾ, ಸೌಂದರ್ಯ, ಸುಮಲತಾ, ಜಯಂತಿ ಮುಂತಾದ ನಟೀಮಣಿಗಳು. ಅಂಬರೀಷ್, ಅನಂತಕುಮಾರ್, ಎಸ್. ರಮೇಶ್ರಂತಹ ಗಣ್ಯರು. ಎಲ್ಲವೂ ನೀಟ್. ವೇದಿಕೆಯ ಪಕ್ಕ ಎತ್ತರದ ಎರಡು ದೀಪಗಳು...ಅದು ತಾರೆಯರ ಸಾಂಸ್ಕೃತಿಕ ಮೇಳ ಸಿನಿ ಎಕ್ಸ್ಪೋ- 2003.
ಭಾರತೀಯ ಚಿತ್ರರಂಗದ ಇತಿಹಾಸಲ್ಲೇ ಪ್ರಪ್ರಥಮ ಬಾರಿಗೆ 30 ದಿನಗಳ ಸಿನಿ ಎಕ್ಸ್ಪೋ 2003 ಉತ್ಸವ ಏ. 18ರ ಶುಕ್ರವಾರ ಅರಮನೆ ಆವರಣದಲ್ಲಿ ಆರಂಭವಾಗಿದೆ. ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದವರು ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್. ಸಾಂಸ್ಕೃತಿಕ ಮೇಳದ ಉದ್ಘಾಟನೆ ಕನಸಿನ ಕನ್ಯೆ ಎಂಬ ಬಿರುದು ಕಟ್ಟಿಕೊಂಡ ಸುಂದರಿ ಹೇಮಮಾಲಿನಿಯವರಿಂದ.
ಅನಂತ್ಕುಮಾರ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಕಲಾವಿದರಿಗೆ ನೆರವು ನೀಡುವ ಭರವಸೆ ನೀಡಿದರು. ಅಶಕ್ತ ಕಲಾವಿದರ ನೆರವಿಗೆ 5 ಕೋಟಿ ರೂಪಾಯಿ ಮೀಸಲಿಡಲಾಗಿದೆ, ದೇಶದಲ್ಲಿ ಪ್ರಪ್ರಥಮ ಬಾರಿಗೆ ಅಪ್ಲಿಂಕ್ ವ್ಯವಸ್ಥೆ ಮಾಡಲಾಗಿದೆ ಮತ್ತು ತಮ್ಮ ಸರಕಾರದ ಅವಧಿಯಲ್ಲಿ ಚಲನಚಿತ್ರರಂಗಕ್ಕೆ ಉದ್ಯಮದ ಸ್ಥಾನಮಾನ ನೀಡಲಾಗಿದೆ ಎಂದು ಎನ್ಡಿಎ ಸರಕಾರದ ಪರವಾಗಿ ಸಚಿವ ಅನಂತಕುಮಾರ್ ಒಂದೆರಡು ಮಾತನಾಡಿದರು.
ವಾಣಿಜ್ಯ ಮಂಡಳಿ ಕಟ್ಟಡಕ್ಕೆ ಲೋಕಸಭಾ ಸದಸ್ಯರ ನಿಧಿಯಿಂದ 10 ಲಕ್ಷ ರೂಪಾಯಿ ದೇಣಿಗೆ ಪ್ರಕಟಿಸಿದರೆ, ಅಂಬರೀಷ್ ನೇತೃತ್ವದ ಕಲಾವಿದರ ಸಂಘದ ಕಟ್ಟಡಕ್ಕೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಅಲ್ಲಿಗೆ ಸಮಾರಂಭದಲ್ಲಿ ಸಚಿವರ ಹಾಜರಿ ಲಾಭದಾಯಕವೆನಿಸಿತು.
ಬೆಂಗಳೂರ್ವುಡ್ ಅಲ್ಲ ಸ್ಯಾಂಡಲ್ವುಡ್
ನಂತರ ಸಚಿವರ ಭಾಷಣ ಹೊರಳಿದ್ದು ಚಿತ್ರರಂಗದತ್ತ. ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ಇರುವ ಹಾಗೆ ಕನ್ನಡ ಚಿತ್ರರಂಗ ಬೆಂಗಳೂರ್ವುಡ್ ಅಂತ ಅನಿಸಿಕೊಳ್ಳದೆಯೇ ಸ್ಯಾಂಡಲ್ವುಡ್ ಆಗಲಿ ಎಂದು ಹಾರೈಸಿದರು. ಕನ್ನಡ ತಾರೆಯರಿಗೆ ಬೇರೆ ಭಾಷೆಯಲ್ಲಿ ನಟಿಸುವ ಶಕ್ತಿ ಇದೆ. ನಮ್ಮ ತಾರೆಯರು ಸೀಮೋಲ್ಲಂಘನ ಮಾಡಬೇಕು, ಅನೇಕ ಸಿನಿಮಾಗಳು 30 ದಿವಸ ಓಡುವುದೇ ಕಷ್ಟವಾಗಿರುವಾಗ ಸಿನಿ ಎಕ್ಸ್ಪೋವನ್ನು 30 ದಿನಗಳ ಕಾಲ ಆಯೋಜಿಸಿರುವುದಕ್ಕೆ ಸಚಿವರು ಶಹಬ್ಬಾಸ್ಗಿರಿ ನೀಡಿದರು.
ಕನ್ನಡ ಚಲನಚಿತ್ರರಂಗದ ಹಾಗೂ ಕಟ್ಟಡದ ಅಭಿವೃದ್ಧಿಗೆ ಅಂಬರೀಷ್ ನೇತೃತ್ವದ ನಿಯೋಗ ಪ್ರಧಾನಿ ವಾಜಪೇಯಿ, ಅವರನ್ನು ಭೇಟಿಯಾಗಿ ಸಹಾಯಕ್ಕಾಗಿ ಮನವಿ ಮಾಡಿಕೊಳ್ಳಬೇಕು. ಆ ನಿಯೋಗದ ಬೆಂಬಲಕ್ಕೆ ತಾನಿರುವುದಾಗಿ ಘೋಷಿಸಿದ ಸಚಿವರು ಮಾತು ಮುಗಿಸಿದರು.
ಸುದೀಪ್, ಉಪೇಂದ್ರರವರೇ ಕಟ್ಟಡ ಕಟ್ಟಿಸಬಹುದು
ನಂತರ ಭಾಷಣದ ಸರದಿ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರದು. ಅವರ ಪ್ರಕಾರ ಏ. 18 ಕನ್ನಡ ಚಿತ್ರರಂಗದ ಸುವರ್ಣ ದಿನ. ತಾನು ಕೇಳಿದ್ದಕ್ಕಿಂತ ಎರಡರಷ್ಟು ಆರ್ಥಿಕ ನೆರವು ನೀಡಿದ ಅನಂತ್ಕುಮಾರ್ ಔದಾರ್ಯತೆಯನ್ನು ಅಂಬಿ ಪ್ರಶಂಸಿಸಿದರು.
ಲಾರಿ ಮುಷ್ಕರ, ನೇಕಾರರ ಮುಷ್ಕರ, ಬರದ ನಡುವೆ ಇಂತಹ ಸಮಾರಂಭ ಏರ್ಪಡಿಸುವುದು ಬಹಳ ಕಷ್ಟ. ಆದರೆ ಚಲನಚಿತ್ರರಂಗದ ಎಲ್ಲರೂ ಪಾಲ್ಗೊ ಳ್ಳಲಿ ಎಂಬ ಕಾರಣಕ್ಕೆ ಇಂತಹ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಲಾವಿದರ ಕಟ್ಟಡವನ್ನು ಕನ್ನಡದ ಹಲವಾರು ಪ್ರದರ್ಶಕರು, ವಿತರಕರು ತಲಾ ಸಾವಿರ ರೂಪಾಯಿ ಕೊಟ್ಟರೂ ಕಟ್ಟಿಸಿಬಿಡಬಹುದು. ಸುದೀಪ್, ಉಪೇಂದ್ರರಂತಹ ಕಲಾವಿದರು ಮನಸ್ಸು ಮಾಡಿದರೂ ಈ ಕೆಲಸ ಕಷ್ಟವೇನಲ್ಲ ಎಂದು ಯುವನಟರನ್ನು ಒಂದಿಷ್ಟು ಹೊಗಳಿದರು.
ಹೇಮಮಾಲಿನಿ ಬೆಂಗಳೂರನ್ನು ಸುಂದರ ನಗರ ಎಂದು ಬಣ್ಣಿಸಿದರು. ಈ ಊರಿನ ಜತೆ ಆತ್ಮೀಯ ಅನುಭವ ಹೊಂದಿದ್ದೇನೆ, ಏಕೆಂದರೆ ಶೋಲೆ ಚಿತ್ರೀಕರಣ ನಡೆದದ್ದು ಇಲ್ಲೇ ಎಂದು ಹಳೇ ನೆನಪನ್ನು ಮೆಲುಕು ಹಾಕಿದರು.
ಸಮಾರಂಭದಲ್ಲಿ ಚಿತ್ರರಂಗದ ಗಣ್ಯರೆನಿಸಿಕೊಂಡ ಜಯಂತಿ, ದ್ವಾರಕೀಶ್, ತಾರಾ, ರಮೇಶ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಮ್ಯ, ಉಪೇಂದ್ರ, ಸುದೀಪ್, ಬಸಂತ್ಕುಮಾರ್ ಪಾಟೀಲ್, ಸಿ.ವಿ.ಎಲ್ ಶಾಸ್ತ್ರಿ, ದರ್ಶನ್, ಸಾ.ರಾ. ಗೋವಿಂದು, ಜೈ ಜಗದೀಶ್, ತಾರಾ ಮುಂತಾದವರ ದಂಡು ಸಿನಿ ಎಕ್ಸ್ಪೋದಲ್ಲಿತ್ತು.
ಪ್ರದರ್ಶನ ತಿಂಗಳ ಕಾಲ ನಡೆಯಲಿದೆ.
ಮುಖಪುಟ / ಸ್ಯಾಂಡಲ್ವುಡ್