ಏ.24ರಂದು ರಾಜ್ ಸ್ಮಾರಕಕ್ಕೆ ಅಡಿಗಲ್ಲು -ಕುಮಾರಸ್ವಾಮಿ
ಬೆಂಗಳೂರು : ರಾಜ್ಕುಮಾರ್ ಪುಣ್ಯತಿಥಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ ಪರಿವಾರ ಗುರ್ಗುರ್ ಎಂದಿತ್ತು.
‘ನಾವು ಗಂಡಸರು.. ಸರ್ಕಾರ ಕೈಚೆಲ್ಲಿದರೆ ನಮ್ಮಪ್ಪನ ಸ್ಮಾರಕವನ್ನು ನಾವೇ ಕಟ್ಟುತ್ತೇವೆ’ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದರು. ಏ.24ರೊಳಗೆ ಸ್ಮಾರಕದ ಕೆಲಸ ಆರಂಭಗೊಳ್ಳಬೇಕು ಎಂದು ಪಾರ್ವತಮ್ಮ ರಾಜ್ಕುಮಾರ್ ಗಡುವಿನ ರೇಖೆ ಎಳೆದಿದ್ದರು.
ಈ ಹೇಳಿಕೆಗಳಿಗೆ ಸೊಪ್ಪು ಹಾಕದಂತೆ ಅಂದು ವರ್ತಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಕುಮಾರ್ ಹುಟ್ಟಿದ ಹಬ್ಬ(ಏ.24)ದೊಳಗೆ ಅವರ ಸಮಾಧಿ ಬಳಿ ಸ್ಮಾರಕ ನಿರ್ಮಾಣದ ಕೆಲಸ ಆರಂಭಗೊಳ್ಳುತ್ತವೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಸ್ಮಾರಕದಲ್ಲಿ ವಸ್ತು ಸಂಗ್ರಹಾಲಯ, ಸಭಾಂಗಣ, ರಂಗಮಂಟಪ ಇರುತ್ತದೆ. ಸ್ಮಾರಕ ನಿರ್ಮಾಣಕ್ಕೆ 3ಕೋಟಿ ಬಿಡುಗಡೆ ಮಾಡಿದ್ದೇವೆ. ಇನ್ನೂ ಎಷ್ಟು ಹಣ ಬೇಕಾದರೂ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಕೊನೆಗೂ, ಕಂಠೀರವ ಸ್ಟುಡಿಯೋದಲ್ಲಿ ಸದ್ಯದಲ್ಲಿಯೇ ರಾಜ್ ಸ್ಮಾರಕ ಎದ್ದು ನಿಲ್ಲಲಿದೆ. ರಾಜ್ ನೆನಪನ್ನು ಹಸಿರಾಗಿಡಲಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications