ದಾರಿಕಾಣದಾಗಿದೆ... ಅಂತ ರವಿ

ಉದಯ ಟೀವಿಯಲ್ಲಿ ಚಿತ್ರಶ್ರೀ ಜೊತೆ ಮಾತಾಡುವ ವರಸೆಯಲ್ಲಿ ಕನಸುಗಾರ ರವಿಚಂದ್ರನ್ ಉಸುರಿದ್ದು ಹೀಗೆ. ಚಿತ್ರಶ್ರೀ ಪ್ರಶ್ನೋತ್ತರಗಳ ಚಕಮಕಿಗೆ ಫುಲ್ಸ್ಟಾಪ್ ಹಾಕಿ ರವಿಯೇ ಪ್ರಶ್ನೆ ಕೇಳಲು ಶುರುವಿಟ್ಟುಕೊಂಡರು. ಅವರು ಕೇಳಿದ ಪ್ರಶ್ನೆ- 'ನನ್ನ ಸಿನಿಮಾ ಹಾಡುಗಳ ಪೈಕಿ ನಿಮಗ್ಯಾವುದು ಇಷ್ಟ".
ಚಿತ್ರಶ್ರೀ ಥಟ್ಟನೆ ಹೇಳಿದ್ದು- 'ಏಕಾಂಗಿ ಚಿತ್ರದ ಬಣ್ಣ ಬಣ್ಣದ ಲೋಕ".
ರವಿ ಪ್ರಶ್ನೆ ಮುಂದುವರೆಸಿದರು- 'ಯಾಕೆ ಇಷ್ಟವಾಯಿತು"'ನಾವು ಮಾತಾಡುವಷ್ಟು ಸರಳವಾಗಿದೆ ಅದರ ಸಾಹಿತ್ಯ. ಅದಕ್ಕೇ ನನಗದು ಇಷ್ಟ "ಅಂದರು ಚಿತ್ರಶ್ರೀ.
ರವಿ ಥ್ರಿಲ್ಲಾಗಿ ಹೇಳಿದರು- 'ನಾನು ಹಾಡು ಬರೆಯೋದೇ ಏನು ಹೇಳಬೇಕು ಅಂತಿರುತ್ತೇನೋ ಅದನ್ನು ಹೇಳೋ ಉದ್ದೇಶದಿಂದ. ನಾನು ಖಂಡಿತ ಕವಿಯಲ್ಲ, ನಿಮ್ಮ ಪ್ರೀತಿಯ ರವಿ !"
ನೀವೂ ರವಿಯನ್ನು ಕೆಣಕಿ. ಇನ್ನೂ 'ಏಕಾಂಗಿ"ಯ ಸೋಲನ್ನು ಜೀರ್ಣಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಿಲ್ಲದಿರುವುದು ಸ್ಪಷ್ಟ್ಟವಾಗುತ್ತೆ. ಯಾವುದೇ ವಿಷಯದಿಂದ ಮಾತು ಶುರುವಾದರೂ, ಹೇಗೋ ಏಕಾಂಗಿಗೇ ತಂದು ನಿಲ್ಲಿಸುತ್ತಾರೆ ರವಿ. ಏಕಾಂಗಿಯ ಚಿಂತೆಯಲ್ಲಿ ರವಿ ಕೂಡ ಏಕಾಂಗಿಯಾಗಿ ಹೋಗಿದ್ದಾರೆ. ಏಕಾಂಗಿ ಸೋಲು, ಕೋದಂಡರಾಮ ಮಕಾಡೆಯಾದದ್ದು, ತಮ್ಮ ಬಾಲಾಜಿಯ ಪ್ರೇಯಸಿ ಅಂತ ಹೇಳಿಕೊಂಡಿದ್ದಾಕೆಯ ಆತ್ಮಹತ್ಯೆಯ ತಲೆನೋವು.... ಹೀಗೆ ಕಷ್ಟಗಳ ಮಳೆಯ ನಡುವೆ ರವಿ ಎಷ್ಟು ಅಂತ ಕಲ್ಲಾಗುತ್ತಾರೆ. ಈಗವರು ಮೆತ್ತ ಮೆತ್ತಾಗಾಗಿದ್ದಾರೆ. ಮುಂದೇನು?
ಶಕುನಿಯನ್ನು ಬಿಡಲು ಶಕುನ ಸರಿಯಿಲ್ಲ. ತಮ್ಮನ ನಾಯಕ ಮಾಡೋಣ ಅಂದರೆ ಯಡವಟ್ಟಾಗಿದೆ. ಅಂದುಕೊಂಡಿದ್ದೆಲ್ಲಾ ಪಾಚೊಂಡಿದೆ. ಇಂತಿಪ್ಪ ಪರಿಸ್ಥಿತಿಯಲ್ಲಿ ರವಿ ತಲೆ ಮೇಲೆ ಕೈಹೊತ್ತು ಕೂತಿರುವಾಗ ಧೀರ ರಾಕ್ಲೈನ್ ವೆಂಕಟೇಶ್ ಪ್ರತ್ಯಕ್ಷರಾದರಂತೆ. ಹೆದರಬೇಡ ರವಿ, ನಾನಿದ್ದೇನೆ ಅಂದರಂತೆ.
ಎಂಬಲ್ಲಿಗೆ ರವಿ ಮುಂದಿನ ಚಿತ್ರದ ನಿರ್ಮಾಪಕ ರಾಕ್ಲೈನ್ ಅನ್ನುತ್ತಿದೆ ಸ್ಯಾಂಡಲ್ವುಡ್. ಈ ಶಕುನ ಸರಿಯಾಗೇ ಇದೆ. ಯಾಕೆಂದರೆ, ಈ ಹಿಂದೆ ರವಿ ಚಿತ್ರಗಳು ಬೋರಲಾಗುತ್ತಿದ್ದಾಗ ಇದೇ ಧೀರ ಬಂದು 'ಪ್ರೀತ್ಸೋದ್ ತಪ್ಪಾ" ತೆಗೆದು, ರವಿಗೆ ಉಸಿರು ಕೊಟ್ಟಿದ್ದರು. 'ಧೀರ"ನ ದರುಶನದ ನಂತರ ರವಿ ಮೊಗದಲ್ಲಿ ನಗುವಿನ ಗೆರೆ ಮರಳಿದೆಯಂತೆ.


Click it and Unblock the Notifications