ಕುರುಡ ಅಥವಾ ದಡ್ಡನಾಗಿದ್ದಿರಬೇಕು ಅಂತ ನಗುತ್ತಾರೆ ಶಾರುಖ್ ಖಾನ್.
ಬಾಲಿವುಡ್ ಮತ್ತು ಅಂಡರ್ವರ್ಲ್ಡ್ ಮಾಫಿಯಾ ಸಂಬಂಧ ಉತ್ಪ್ರೇಕ್ಷೆಯ ಮಾತಾಗುತ್ತಿದೆಯೇ ಹೊರತು ಅದು ಹಕೀಕತ್ತಲ್ಲ. ಪ್ರತಿಶತ 90 ನಿರ್ಮಾಪಕರಿಗೆ ಭೂಗತ ಜಗತ್ತಿನ ವಾಸನೆಯೂ ಗೊತ್ತಿಲ್ಲ ಎಂದು ಶಾರುಖ್ ಖಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಡಿಯೋಕಾನ್ ಗ್ರೂಪ್ ಆಫ್ ಕಂಪನೀಸ್ನ ಹೊಸ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸುವ ಸಲುವಾಗಿ ಆಗ್ರಾದಲ್ಲಿರುವ ಶಾರುಖ್ ಮಾತಾಡಿದ್ದು ಭಾನುವಾರ ರಾತ್ರಿ. ಸಿನಿಮಾ, ಟೀವಿ ಮತ್ತು ಬಾಲಿವುಡ್ ಕುರಿತ ಪ್ರಶ್ನೆಗಳಿಗೆ ಶಾರುಖ್ ಮಾತು ಸರಳ ಮತ್ತು ನೇರವಾಗಿತ್ತು...
ನಾನು ಹನ್ನೊಂದು ವರ್ಷದಿಂದ ಸಿನಿಮಾ ಲೋಕದಲ್ಲಿದ್ದೇನೆ. ಇದುವರೆಗೂ ಬಾಲಿವುಡ್ ಮತ್ತು ಭೂಗತ ಲೋಕಕ್ಕೆ ಸಂಪರ್ಕ ಇರುವ ಬಗ್ಗೆ ನನಗೆ ಒಂದೇ ಒಂದು ಸುಳಿವೂ ಸಿಕ್ಕಿಲ್ಲ. ಒಂದು ವೇಳೆ ಮಾಧ್ಯಮಗಳು ಎಬ್ಬಿಸುತ್ತಿರುವ ಸುದ್ದಿ ದಿಟವೇ ಆಗಿದ್ದರೆ, ನಾನು ಕುರುಡ ಅಥವಾ ಮೂರ್ಖನಾಗಿರಬೇಕು !
ಸಿನಿಮಾ ಇನ್ನಷ್ಟು ಬೆಳೆಯಲು ಜನರ ಪ್ರೋತ್ಸಾಹ ಬೇಕು. ದೇವದಾಸ್ ಚಿತ್ರ ಏನೇ ಆದರೂ ಹಳೇ ಚಿತ್ರದ ರೀಮೇಕ್. ಅದರಲ್ಲಿ ದಿಲೀಪ್ ಕುಮಾರ್ ಮಾಡಿದ್ದ ಪಾತ್ರವನ್ನು ನಾನು ಮಾಡಿದ್ದೇನೆ. ಅವರಿಗೂ, ನನಗೂ ಹೋಲಿಸುವುದು ತರವಲ್ಲ. ಹಾಗೆ ಮಾಡಿದರೆ ಅಪ್ಪನನ್ನೂ, ಮಗನನ್ನೂ ತಕ್ಕಡಿಯಲ್ಲಿಟ್ಟು ನೋಡಿದಂತಾಗುತ್ತದೆ.
ಟೀವಿ ಚಾನೆಲ್ಗಳ ಜನಪ್ರಿಯತೆಯಿಂದ ಸಿನಿಮಾ ಚರಿಷ್ಮಾ ಹಾಳಾಗುತ್ತಿದೆ ಅನ್ನುವುದನ್ನು ನಾನು ನಂಬುವುದಿಲ್ಲ. ಇವತ್ತಿಗೂ ಟೀವಿ ಚಾನೆಲ್ಗಳ ಶೇ.80ರಷ್ಟು ಕಾರ್ಯಕ್ರಮಗಳು ಸಿನಿಮಾ ಲೋಕವನ್ನು ಆಧರಿಸಿದ್ದೇ ಆಗಿರುತ್ತವೆ. ಒಂದು ಕಾಲದಲ್ಲಿ ಕಿರುತೆರೆ ಅಭಿನಯದ ಮೂಲಕವೇ ಗಮನ ಸೆಳೆದು, ಹಿರಿತೆರೆಗೆ ಲಗ್ಗೆ ಇಟ್ಟ ಶಾರುಖ್ಗೆ ಸದ್ಯಕ್ಕೆ ಕಿರುತೆರೆಯಲ್ಲಿ ಮತ್ತೆ ನಟಿಸುವ ಇರಾದೆ ಇಲ್ಲವೇ ಇಲ್ಲವಂತೆ.(ಪಿಟಿಐ)


Click it and Unblock the Notifications