twitter
    For Quick Alerts
    ALLOW NOTIFICATIONS  
    For Daily Alerts

    ಜೀವಭಯದಲ್ಲಿರುವ ಜಗ್ಗೇಶ್‌ ಸಂದರ್ಶನ

    By Staff
    |
    • ವಿಘ್ನೕಶ್ವರ ಕುಂದಾಪುರ
    ಜಗ್ಗೇಶ್‌ ಭಾಷೆಯಲ್ಲೇ ಹೇಳುವುದಾದರೆ ಅವರಿಗೆ ಲಕ್ಕು ಖುಲಾಯಿಸಿದೆ. ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಚಿತ್ರದ ಯಶಸ್ಸು ಬಿ ಮತ್ತು ಸಿ ವಲಯದ ಚಿತ್ರಮಂದಿರಗಳಲ್ಲಿ ಮತ್ತೆ ಜಗ್ಗೇಶ್‌ ಮೇನಿಯಾ ಹುಟ್ಟುಹಾಕಿದೆ. ಅದರ ಪರಿಣಾಮ ‘ಕಾಸು ಇದ್ದೋನೆ ಬಾಸು’ ಕೂಡ ಸಕ್ಸಸ್ಸು. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ರಾಜಕಾರಣದಲ್ಲೂ ಒಂದು ಕೈ ನೋಡುತ್ತಿರುವ ಜಗ್ಗೇಶ್‌ಗೆ ಈಚೆಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಸಕ್ಸಸ್ಸು ಹಾಗೂ ಜೀವಭಯದ ಮೂಡಲ್ಲಿರುವ ಅವರು ಮೊನ್ನೆ ಮಾತಿಗೆ ಸಿಕ್ಕಿದ್ದರು. ಚುಟುಕು ಪ್ರಶ್ನೆಗಳಿಗೆ ಅವರದ್ದೇ ಸ್ಟೈಲಿನಲ್ಲಿ ಚುಟುಕು ಉತ್ತರ ಬಂದಿದ್ದು ಹೀಗೆ...

    ನಿಮಗೆ ಯಾರು ಜೀವ ಬೆದರಿಕೆ ಹಾಕಿರಬಹುದು?
    ಮೊದಲೇ ನನ್ನ ಗ್ರಹಗತಿ ಕೆಟ್ಟಿದೆ. ಆ ಅನುಮಾನ ಬೇರೆ ಹೇಳಿ, ಬೆದರಿಕೆ ಹಾಕಿರುವವನು ಅಟಕಾಯಿಸಿಕೊಳ್ಳಲಿ ಅಂತೀರಾ?

    ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ಕೊಡುವ ಸಮಿತಿಯಲ್ಲಿ ಭ್ರಷ್ಟಾಚಾರ ಇದೆ ಅಂತ ಖುಲ್ಲಂಖುಲ್ಲ ಹೇಳಿದ್ದಿರಿ. ಹಾಗೆ ಹೇಳಿದ್ದಕ್ಕೂ ನಿಮಗೆ ಬೆದರಿಕೆ ಬಂದದ್ದಕ್ಕೂ ಏನಾದರೂ ಸಂಬಂಧ ಇದೆಯಾ?
    ಇರಬಹುದು. ಇಲ್ಲದಿರಲೂಬಹುದು. ಏನು ಅಂತ ನನಗೇ ಗೊತ್ತಿಲ್ಲ. ತನಿಖೆ ನಡೀತಿದೆ. ಪೊಲೀಸರೇ ಹೇಳ್ತಾರೆ.

    ನಿಮ್ಮ ಈ ಪಾಟಿ ಸಿನಿಮಾಗಳು ಒಟ್ಟೊಟ್ಟಿಗೆ ಬರ್ತಿರೋದು ಯಾಕೆ?
    ಸುಮಾರು ಒಂದು ವರ್ಷ ಮೇಕಪ್‌ ಚಿತ್ರದಲ್ಲೇ ನಾನು ಬ್ಯುಸಿಯಾಗಿದ್ದೆ. ಆಗ ಕಾಲ್‌ಷೀಟ್‌ ಕೇಳಿದ ನಿರ್ಮಾಪಕರಿಗೆಲ್ಲ ಕೊಟ್ಟಿದ್ದ ಮಾತನ್ನು ಈಗ ನಿಭಾಯಿಸುತ್ತಿದ್ದೇನೆ ಅಷ್ಟೆ.

    ಇಷ್ಟೊಂದು ಸಿನಿಮಾಗಳು ಒಟ್ಟೊಟ್ಟಿಗೆ ಬಂದರೆ ಸ್ಟಾರ್‌ವ್ಯಾಲ್ಯೂ ಬಿದ್ಹೋಗಲ್ವೆ?
    ಸಿನಿಮಾ ಹಿಟ್‌ ಆದರೆ ವ್ಯಾಲ್ಯೂ ಹೆಂಗೆ ಬೀಳುತ್ತೆ. ಕಾಸು ಇದ್ದೋನೆ ಬಾಸು ಚಿತ್ರ ‘ಯಾರ್ದೋ ದುಡ್ಡು...’ ಸಿನಿಮಾದಷ್ಟು ಜೋರಾಗಿ ಓಡ್ತಿಲ್ಲ ಅನ್ನೋದು ನಿಜ. ಆದರೆ ನಿರ್ಮಾಪಕರಿಗೆ ಲಾಸಂತೂ ಆಗಿಲ್ಲ. ಮನರಂಜನೆ ಇದ್ದರೆ ಸಿನಿಮಾ ನೋಡೋದಕ್ಕೆ ಜನ ಬಂದೇ ಬರ್ತಾರೆ ಅಂತ ನಂಬಿರೋನು ನಾನು.

    ಒಂದೇ ಸಮ ಶೂಟಿಂಗ್‌ನಲ್ಲಿ ಬ್ಯುಸಿಯಾದರೆ, ಬರುವ ಎಲೆಕ್ಷನ್ನಲ್ಲಿ ನೀವು ನಿಲ್ಲೋದಕ್ಕಾಗತ್ತ?
    ಅಷ್ಟೊತ್ತಿಗೆ ಪುರುಸೊತ್ತು ಮಾಡ್ಕೋತೀನಿ. ನಮ್ಮೂರು ತುರುವೇಕೆರೆನಲ್ಲೇ ಇಲೆಕ್ಷನ್‌ಗೆ ನಿಂತ್ಕೋತೀನಿ, ಟಿಕೇಟು ಕೊಡಿ ಅಂತ ಕೇಳ್ಕೊಂಡಿದೀನಿ.

    ಅಲ್ಲಿ ನೀವು ನಿಂತರೂ ಸರಿ, ವಿರುದ್ಧವಾಗಿ ನಿಲ್ತೀನಿ ಅಂತ ಕೊಬ್ರಿ ಮಂಜು ಶರ್ಟಿನ ತೋಳು ಮಡಿಸುತ್ತಿದ್ದಾರಲ್ಲ ?
    ಅವರು ನಿಂತ್ಕೊಳ್ಳೋ ವಿಷಯವಾಗಿ ನಾನು ಏನೂ ಹೇಳಲ್ಲ. ಕಳೆದ ಎರಡು ವರ್ಷದಿಂದ ನಾನು ರಾಜಕಾರಣಿಯಾಗಿ ಕಷ್ಟಪಟ್ಟು ಕೆಲಸ ಮಾಡಿದ್ದೀನಿ. ನಾನೇನೂ ಅಂತ ಜನರೇ ಹೇಳ್ತಾರೆ.

    ‘ಹುಚ್ಚನ ಮದುವೇಲಿ ಉಂಡವನೇ ಜಾಣ’, ‘ಯಾರಿಗೆ ಬೇಕು ಸಂಸಾರ’ ಚಿತ್ರಗಳ ಡಬ್ಬಿಂಗ್‌ ಕೆಲಸ ಮುಗಿದಿದೆ. ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಅಷ್ಟರಲ್ಲೇ ನಿರ್ಮಾಪಕ ರಾಜೇಂದ್ರ ಅವರ ಇನ್ನೊಂದು ಚಿತ್ರಕ್ಕೆ ಜಗ್ಗಿ ಯೆಸ್‌ ಅಂದಿದ್ದಾರೆ. ಗಾದೆ, ನಾಣ್ಣುಡಿಗಳ ಟೈಟಲ್ಲಿನ ಚಿತ್ರಗಳು ಜಗ್ಗೇಶ್‌ ಪಾಲಿಗೆ ವರವಾಗಿರುವುದಂತೂ ದಿಟ. ಅಂದಹಾಗೆ, ಕಾಸು ಇದ್ದೋನೆ ಬಾಸು ಚಿತ್ರದ ಕಲೆಕ್ಷನ್ನು ಕ್ಲಾಸ್‌ ಚಿತ್ರ ಅಂತ ವಿಮರ್ಶೆ ಗಿಟ್ಟಿಸಿಕೊಂಡಿರುವ ಶಿವಣ್ಣನ ‘ನಂಜುಂಡಿ’ಗಿಂತ ಜಾಸ್ತಿ ಇರೋದನ್ನು ಏನನ್ನೋಣ?

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 14:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X