ಸಕ್ಕರೆ ನಾಡಲ್ಲಿ ವಿಷ್ಣುರ 56ನೇ ಬರ್ಥ್ ಡೇ!
ಮಂಡ್ಯ ನಗರದ ಸರ್.ಎಂ.ವಿ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಟ ವಿಷ್ಣುವರ್ಧನ್ ಅವರ 56ನೇ ಹುಟ್ಟು ಹಬ್ಬ ಆಚರಣೆಗೆ ಅಭಿಮಾನಿಗಳು ಪ್ರವಾಹದಂತೆ ಭಾನುವಾರ ಜಮಾಯಿಸಿದ್ದರು. ಮತ್ತೊಂದು ವಿಶೇಷವೆಂದರೆ ‘ವಿಷ್ಣು ಸೇನಾ’ ಚಿತ್ರಕ್ಕಾಗಿ ಈ ಅಪರೂಪದ ದೃಶ್ಯಾವಳಿಗಳ ಚಿತ್ರೀಕರಣವೂ ಅಲ್ಲಿ ನಡೆಯುತ್ತಿತ್ತು.
ಅಂತೂ ಸೂರ್ಯ ನೆತ್ತಿ ಮೇಲೆ ಬಂದ ಹೊತ್ತಿಗೆ(ಮಧ್ಯಾಹ್ನ 12) ವೇದಿಕೆಗೆ ಸಾಹಸಸಿಂಹನ ಆಗಮನವಾಯಿತು. ಅಭಿಮಾನಿಗಳು ಹುಚ್ಚೆದ್ದು ಕುಣಿದರು, ಕೇಕೆ ಹಾಕಿದರು, ಜೈಕಾರ ಹಾಕಿದರು, ಕುಣಿದು ಕುಪ್ಪಳಿಸಿದರು.
ವೇದಿಕೆಯ ಮೇಲೆ ಸಾಹಸ ಸಿಂಹ, ‘ಆಪ್ತಮಿತ್ರ’ ಚಿತ್ರದ ಕಾಲವನ್ನು ‘ತಡೆಯೋರು ಯಾರು ಇಲ್ಲ ...’, ‘ನಾ ಹಾಡಲು ನೀವು ಹಾಡಬೇಕು...’ ,‘ಕಲ್ಲಾದರೆ ನಾನು...’ ಗೀತೆಗಳನ್ನು ಎದೆದುಂಬಿ ಹಾಡಿದರು. ಹಾಡಿಗೆ ಹೆಜ್ಜೆ ಹಾಕಿದರು. ಅವರ ಅಳಿಯ ಅನಿರುದ್ಧ ಧ್ವನಿ ಸೇರಿಸಿದರು.
ಅದಕ್ಕೂ ಮುನ್ನ ಮಾತನಾಡಿದ ವಿಷ್ಣು, ಎಂದಿನಂತೆಯೇ ಅಭಿಮಾನಿಗಳ ಪ್ರೀತಿಗೆ ಋಣಿ ಎಂದರು. ಅನಂತರ ಕಣ್ಣೀರು ಸುರಿಸಿದರು. ‘ಸಿಲ್ಲಿಲಲ್ಲಿ’ಯ ಡಾ.ವಿಠಲ್ರಾವ್ ಖ್ಯಾತಿಯ ರವಿಶಂಕರ್ ದಂಪತಿಗಳು ನಿರೂಪಣೆ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಕಾರ್ಯಕ್ರಮದಲ್ಲಿ ಎಲ್ಲರನ್ನು ನಗಿಸುವಲ್ಲಿ ಮಿಮಿಕ್ರಿ ದಯಾನಂದ್ ಸಫಲರಾಗಿದ್ದರು.
ವಿಷ್ಣು ಮತ್ತು ಭಾರತಿ ಜೋಡಿ ಅಭಿಮಾನಿಗಳತ್ತ ಕೈ ಬೀಸಿದಾಗಲೆಲ್ಲ ಭಾರೀ ಚಪ್ಪಾಳೆಗಳು ಸುರಿಮಳೆಯಾಗುತ್ತಿತ್ತು. ನಟ ಅಂಬರೀಷ್, ನೆಚ್ಚಿನ ಗೆಳೆಯನನ್ನು ಅಪ್ಪಿಕೊಂಡು, ಶುಭಕೋರಿದರು. ಶಿವರಾಜ್ಕುಮಾರ್ ತಮ್ಮ ಪತ್ನಿಯಾಂದಿಗೆ ದಿಢೀರ್ ವೇದಿಕೆಯಲ್ಲಿ ಪ್ರತ್ಯಕ್ಷರಾದರು.
‘ವಿಷ್ಣು ಸೇನಾ’ ನಿರ್ದೇಶಕ ನಾಗಣ್ಣ ಕಾರ್ಯಕ್ರಮದ ಹೊಣೆ ಹೊತ್ತಿದ್ದರು.
ಮತ್ತೊಂದು ಹುಟ್ಟು ಹಬ್ಬ : ಭಾನುವಾರ ನಗರದ ಕಂಠೀರವ ಸ್ಪುಡಿಯೋದಲ್ಲಿ , ಅಭಿಮಾನಿಗಳ ಸಮ್ಮುಖದಲ್ಲಿ ನಟ ಉಪೇಂದ್ರ ತಮ್ಮ ಪತ್ನಿ ಪ್ರಿಯಾಂಕರೊಂದಿಗೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications