ರೈಲಿನ ರೂಪದಲ್ಲಿ ಯಮಧರ್ಮ.. ಪ್ರೇಮ್ಗೆ ಮರುಜನ್ಮ!
ಆಶ್ಚರ್ಯಕರ ರೀತಿಯಲ್ಲಿ ನಟ ಪ್ರೇಮ್ ಅಪಾಯದಿಂದ ಪಾರಾಗಿದ್ದಾರೆ. ನನ್ನ ಹಿತೈಷಿಗಳು ಮತ್ತು ದೇವರ ಆಶೀರ್ವಾದದಿಂದ ಮರುಜನ್ಮ ಪಡೆದಿದ್ದಾಗಿ ಅವರು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಒಂದು ಕ್ಷಣ ಮೈಮರೆತಿದ್ದರೆ, ರೈಲಿಗೆ ಬಲಿಯಾಗುತ್ತಿದ್ದ ಪ್ರೇಮ್, ಈವೇಳೆಗೆ ಕೇವಲ ನೆನಪಾಗುತ್ತಿದ್ದರು! ಸಕಾಲದಲ್ಲಿ ರೈಲ್ವೆ ಟ್ರ್ಯಾಕ್ನಿಂದ ಪಕ್ಕಕ್ಕೆ ಜಿಗಿದು, ನಿಟ್ಟುಸಿರು ಬಿಟ್ಟಿದ್ದಾರೆ.
ಇಷ್ಟಕ್ಕೂ ಆದದ್ದೇನು ಅಂದರೆ; ಪರಮೇಶ್ ನಿರ್ಮಾಣದ ‘ಪಲ್ಲಕ್ಕಿ’ ಚಿತ್ರದ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದರು. ಅರಮನೆ ಮೈದಾನದಲ್ಲಿ ಚಿತ್ರೀಕರಣಕ್ಕೆ ಸೆಟ್ ಹಾಕಲಾಗಿತ್ತು. ಅಲ್ಲಿಗೆ ಸಮೀಪವೇ ಕಂಟೋನ್ಮೆಂಡ್ ರೈಲ್ವೆ ಸ್ಟೇಷನ್ ಇದೆ. ಚಿತ್ರೀಕರಣದ ಬಿಡುವಿನ ಅವಧಿಯಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ, ಪ್ರೇಮ್ ತಮ್ಮ ಸಹಾಯಕನೊಂದಿಗೆ ಮಾತನಾಡುತ್ತ ನಡೆಯುತ್ತಿದ್ದರು. ಇದ್ದಕ್ಕಿದ್ದಂತೆ ರೈಲೊಂದು, ಪ್ರೇಮ್ ನಡೆಯುತ್ತಿದ್ದ ಹಳಿಗಳ ಮೇಲೆಯೇ ಬಂತು.. ಆಕಸ್ಮಿಕ ಘಟನೆಯಿಂದ ವಿಚಲಿತರಾಗದ ಪ್ರೇಮ್, ತಕ್ಷಣ ಪಕ್ಕಕ್ಕೆ ಜಿಗಿದರು.. ಆ ಮೂಲಕ ದುರ್ಘಟನೆ ಕೂದಲೆಳೆ ಅಂತರದಿಂದ ತಪ್ಪಿತು.
ಈ ಘಟನೆಯಿಂದ ಚೇತರಿಸಿಕೊಂಡ ಪ್ರೇಮ್, ಚಿತ್ರೀಕರಣದಲ್ಲಿ ಪಾಲ್ಗೊಂಡರು. ಗುರುವಾರವೂ ಚಿತ್ರೀಕರಣ ಮುಂದುವರೆದಿದೆ.
‘ನೆನಪಿರಲಿ’ ಮೂಲಕ ಜನರ ಮನಸ್ಸು ಗೆದ್ದಿದ್ದ ಪ್ರೇಮ್, ಇತ್ತೀಚೆಗಷ್ಟೇ ರಾಜ್ಯಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರ ‘ಜೊತೆಜೊತೆಯಲಿ’ ಚಿತ್ರ, ಚಿತ್ರಮಂದಿರಗಳಲ್ಲಿದೆ.
ನಿಮ್ಮ ಅನಿಸಿಕೆ ಬರೆಯಿರಿ


Click it and Unblock the Notifications