ಸತ್ಯುಗೆ ದಕ್ಷಿಣಏಷ್ಯಾ ಸಿನಿ ಪ್ರತಿಷ್ಠಾನದ ‘ಜೀವಮಾನ ಸಾಧನೆ’ ಗೌರವ
ಲಂಡನ್ : ಪ್ರಸಿದ್ಧ ಚಿತ್ರ ನಿರ್ದೇಶಕ, ಕನ್ನಡಿಗ ಎಂ.ಎಸ್.ಸತ್ಯು ದಕ್ಷಿಣ ಏಷ್ಯಾ ಸಿನಿಮಾ ಪ್ರತಿಷ್ಠಾನದ ಜೀವಮಾನದ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನ.18ರ ರಾತ್ರಿ ಲಂಡನ್ನ ನೆಹರೂ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ , ವಿಶೇಷ ಕುಸುರಿ ಕೆತ್ತನೆಯ ಬೆಳ್ಳಿಯ ಪ್ಲೇಟ್ ಹಾಗೂ ಶಾಲು ನೀಡುವ ಮೂಲಕ 74 ವರ್ಷದ ಕಲಾಸಾಧಕನನ್ನು ಭಾರತೀಯ ರಾಯಭಾರಿ ಕಮಲೇಶ್ ಶರ್ಮ ಗೌರವಿಸಿದರು.
ಸತ್ಯು ಅವರಿಗೆ ಹೆಸರು ತಂದುಕೊಟ್ಟ 'ಗರಂ ಹವಾ" ಹಾಗೂ 'ಹಕೀಕತ್" ಚಿತ್ರಗಳನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಮರಿಸಲಾಯಿತು.
ಭಾರತೀಯ ಉರ್ದು ಬರಹಗಾರ ಇಸ್ಮತ್ ಛುಘಾಟಿ ಅವರ ಕಥೆಯನ್ನೊಳಗೊಂಡ 'ಗರಂ ಹವಾ" - ಸ್ವಾತಂತ್ರ್ಯಾ ನಂತರ ಭಾರತೀಯ ಮುಸ್ಲಿಮರ ದ್ವಂದ್ವ ತಾಕಲಾಟಗಳನ್ನು ಯಾವುದೇ ನಾಟಕೀಯತೆ ಹಾಗೂ ಗಿಮಿಕ್ಗಳಿಲ್ಲದೆ ಸಮರ್ಥವಾಗಿ ಬಿಂಬಿಸಿದೆ. ಪ್ರಸಿದ್ಧ ಕವಿ ಕೈಫಿ ಅಜ್ಮಿ ಹಾಗೂ ಸತ್ಯು ಪತ್ನಿ ಶಮಾ ಝೈದಿ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದರು. 'ಗರಂ ಹವಾ" ತಯಾರಾಗಿ ಮೂವತ್ತು ವರ್ಷಗಳಾಗಿದ್ದರೂ, ಇಂದಿಗೂ ಅದನ್ನು ಹೋಲುವಂಥ ಇನ್ನೊಂದು ಚಿತ್ರ ಬಂದಿಲ್ಲ . ಈ ಕಾಲಾತೀತ ಚಿತ್ರದ ನಿರ್ಮಾತೃವನ್ನು ಗೌರವಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ದಕ್ಷಿಣ ಏಷ್ಯನ್ ಸಿನಿಮಾ ಸಂಪಾದಕ ಲಲಿತ್ ಮೋಹನ್ ಜೋಷಿ ಹೇಳಿದರು.
74ರ ವಯಸ್ಸಿನಲ್ಲೂ ಸತ್ಯು ಕ್ರಿಯಾಶೀಲರಾಗಿದ್ದು , ಇತ್ತೀಚೆಗಷ್ಟೇ ನಾಟಕವೊಂದನ್ನು ನಿರ್ದೇಶಿಸಿದ್ದರು. ಈ ನಾಟಕ ದೆಹಲಿಯಲ್ಲಿ ಪ್ರದರ್ಶನ ಕಂಡಿತ್ತು .(ಪಿಟಿಐ)


Click it and Unblock the Notifications