ಮುಖ್ಯಮಂತ್ರಿಗೇ ಬೆನ್ನು ತೋರಿಸಿದ ರಾಗಿಣಿ ದ್ವಿವೇದಿ
ರಾಗಿಣಿ ನಡವಳಿಕೆಯಲ್ಲಿ ಯಾಕೋ ಇತ್ತೀಚಿಗೆ ಬಹಳಷ್ಟು ಬದಲಾವಣೆಯಾಗಿದೆ. ಕೋಪಗೊಳ್ಳುವುದು ಜಾಸ್ತಿಯಾಗಿದೆ. ಕೆಂಪೇಗೌಡ ಚಿತ್ರ ಹಿಟ್ ಆದ ನಂತರ ರಾಗಿಣಿ ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಬಹಳಷ್ಟು ಬದಲಾವಣೆ ಆಗಿವೆ ಎನ್ನುತ್ತಿವೆ ಘಟನೆಗಳು ಹಾಗೂ ಸುದ್ದಿಮೂಲಗಳು. ಮೊನ್ನೆ ಈಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಕ್ಯಾರೇ ಅನ್ನದೇ ಕೋಪಗೊಂಡು ವೇದಿಕೆಯಿಂದ ಬಿರಬಿರನೇ ನಡುದು ಸೀದಾ ಕಾರು ಹತ್ತಿಹೋದ ಘಟನೆ ನಡೆದಿದೆ.
ರಾಗಿಣಿ ಕೋಪಕ್ಕೆ ಕಾರಣವಾಗಿದ್ದಿಷ್ಟು. ಮೊನ್ನೆ ನಂಜುಂಡೇಗೌಡರ ಉಸ್ತುವಾರಿಯಲ್ಲಿ ಮಕ್ಕಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತು ನಡೆಯುತ್ತಿದ್ದ ಸಮಾರಂಭಕ್ಕೆ ಸೆಲೆಬ್ರಿಟಿ ರಾಗಿಣಿ ಬಂದಿದ್ದರು. ಅವರಿಗೆ ಬರುವ ಕನ್ನಡದಲ್ಲಿ ವೇದಿಕೆ ಮೇಲೆ ಮಾತನಾಡುತ್ತಿದ್ದರು. ಆ ಹೊತ್ತಿಗೆ ಸರಿಯಾಗಿ ಮುಖ್ಯಮಂತ್ರಿ ಸದಾನಂದ ಗೌಡರು ಆಗಮಿಸಿದರು.
ತಕ್ಷಣ, ವೇದಿಕೆ ಮೇಲಿದ್ದ ರಾಗಿಣಿ ಸಮೀಪ ಬಂದ ಆಯೋಜಕರು 'ಮುಖ್ಯಮಂತ್ರಿ ಬಂದಿದ್ದಾರೆ, ಒಂದೇ ನಿಮಿಷ ಸ್ವಾಗತ ಕೋರಿ ಬಿಡುತ್ತೇನೆ. ಆಮೇಲೆ ನೀವು ಮಾತು ಮುಂದುವರಿಸಿ" ಎಂದು ಕೇಳಿಕೊಂಡಿದ್ದಾರೆ. ಅಷ್ಟಕ್ಕೇ ಕೋಪಗೊಂಡ ರಾಗಿಣಿ ಸಭೆಯಿಂದ ಸೀದಾ ಕಾರು ಹತ್ತಿ ಹೋಗಿಯೇ ಬಿಟ್ಟರಂತೆ. ಹೋಗುವಾಗ ಎದುರಾದ ಸದಾನಂದ ಗೌಡರು ಎಂದಿನಂತೆ ತಮ್ಮ ನಗುವನ್ನು ಪ್ರದರ್ಶಿಸಿದರೂ ರಾಗಿಣಿ ಮಾತ್ರ ನಗಲೇ ಇಲ್ವಂತೆ.
ಕಾಲ್ ಶೀಟ್ ಕೇಳಲು ಹೋದರೆ "ಮೂವತ್ತೇಳು ಲಕ್ಷ ಕೊಡುವುದಾದರೆ ಮಾತ್ರ ಮಾತನಾಡಿ" ಎನ್ನುತ್ತಾರಂತೆ. ಹೋಗಲಿ, ಕನಿಷ್ಟಪಕ್ಷ ರಾಜ್ಯದ ಮುಖ್ಯಮಂತ್ರಿ ಎದುರು ಬಂದು ನಕ್ಕಾಗ 'ಹಲೋ' ಎನ್ನುವಷ್ಟು ಸೌಜನ್ಯವಾದರೂ ಬೇಡವೇ ಎನ್ನುತ್ತಿದ್ದಾರೆ ಪ್ರತ್ಯಕ್ಷದರ್ಶಿಗಳು. ಯಶಸ್ಸು ಬಂದ ತಕ್ಷಣ ಹೀಗಾದರೆ ಹೇಗೆ ಎಂದು ಪ್ರಶ್ನಿಸುತ್ತಿದೆ ಗಾಂಧಿನಗರದ ಗುಮ್ಮ. ರಾಗಿಣಿ, ಉತ್ತರ ಹೇಳಮ್ಮಾ...(ಒನ್ ಇಂಡಿಯಾ ಕನ್ನಡ)


Click it and Unblock the Notifications











