ಅಂಬರೀಷ್ ನೋಡಿ ರಮ್ಯಾಗೆ ಗಡಗಡ ಚಳಿಜ್ವರ
ಕಠಾರಿ ವೀರ ಸುರಸುಂದರಾಂಗಿ ಚಿತ್ರ ಸಾಕಷ್ಟು ಕಾರಣಕ್ಕೆ ಸುದ್ದಿಯಾಗುತ್ತಿದೆ. ಸೂಪರ್ ಸ್ಟಾರ್ ಉಪೇಂದ್ರ ನಾಯಕತ್ವ ಒಂದು. ಹಿಂದೊಮ್ಮೆ ರಿಯಲ್ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಈ ಚಿತ್ರದಲ್ಲಿ ಡಾನ್ ಪಾತ್ರ ಮಾಡುತ್ತಿರುವುದು ಇನ್ನೊಂದು. ಅಂಬರೀಷ್ ಯಮನ ಪಾತ್ರದಲ್ಲಿ ಸಾಕ್ಷಾತ್ ಯಮನಂತೆ ಅಬ್ಬರಿಸುತ್ತಿರುವುದು ಮತ್ತೊಂದು. ಇಷ್ಟಲ್ಲದೇ ಯಮನ ಪಾತ್ರದ ಅಂಬರೀಷ್ ಎದುರಿಗಿದ್ದರೆ ನಾಯಕಿ ರಮ್ಯಾ ಗಡಗಡ ನಡುಗುತ್ತಿರುವುದು ಇತ್ತೀಚಿಗೆ ದೊಡ್ಡ ಸುದ್ದಿಯಾಗಿದೆ.
ಕಾರಣ ಇದೇ ಮೊದಲ ಬಾರಿಗೆ ಅಂಬರೀಷ್ ಎದುರು ನಟಿಸುತ್ತಿದ್ದಾರೆ ರಮ್ಯಾ. ಅವರಿಗೆ ಹೇಳಬೇಕಾದ ಸಂಭಾಷಣೆಯೇ ಮರೆತು ಹೋಗುತ್ತದೆಯಂತೆ. ಹಿಂದಿನ ದಿನವೇ ಡೈಲಾಗ್ ಶೀಟ್ ಪಡೆದು ಉರುಹೊಡೆದುಕೊಂಡು ಬಂದರೂ ಯಮ ಅಂಬರೀಷ್ ಎದುರು ನಿಂತ ತಕ್ಷಣ ರಮ್ಯಾಗೆ ಭಯವಾಗಿ ಎಲ್ಲಾ ಮೆರೆತೇ ಹೋಗುತ್ತಂತೆ. ಹತ್ತು ವರ್ಷಗಳಿಗೂ ಹೆಚ್ಚು ಕಾಲ ನಟಿಸಿರುವ ಅನುಭವಿ ರಮ್ಯಾಗೆ ಹೀಗಾಗುತ್ತದೆ ಎಂದರೆ ಈ ಚಿತ್ರದಲ್ಲಿ ಅಂಬಿಗೆ ಎಂತಹ ಭಯಾನಕ ಗೆಟಪ್ ಇರಬಹುದು ಊಹಿಸಿ...
ಈ ಚಿತ್ರದಲ್ಲಿ ಇಂದ್ರನ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮ್ಯಾ ದೇವಲೋಕದ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಒಮ್ಮೆ ಸಾಕ್ಷಾತ್ ಶ್ರೀದೇವಿಯಂತೆ ಕಾಣುತ್ತಿದ್ದರೆ ಮತ್ತೊಮ್ಮೆ ಮೀನಾಕ್ಷಿ ಶೇಷಾದ್ರಿ ತರಹ ಕಾಣಿಸುತ್ತಾರೆ. ಇನ್ನೊಮ್ಮೆ ರೇಖಾರನ್ನೂ ಮೀರಿಸುವ ಸೌಂದರ್ಯವತಿ" ಎಂದು ರಮ್ಯಾ ಗುಣಗಾನ ಮಾಡಿದೆ ಚಿತ್ರತಂಡ. (ಒನ್ ಇಂಡಿಯಾ ಕನ್ನಡ)


Click it and Unblock the Notifications











