ಖಡಕ್ ಅಗ್ನಿ ಶ್ರೀಧರ್ ಮತ್ತೆ ಎದೆಗಾರಿಕೆಯೊಂದಿಗೆ ಹಾಜರ್

ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ'ಯನ್ನು ನಿರ್ದೇಶಿಸಲಿದ್ದಾರೆ ಡಿ. ಸುಮನಾ ಕಿತ್ತೂರ್. ಈ ಮೊದಲು ಅವರು ದುನಿಯಾ ವಿಜಯ್ ನಾಯಕತ್ವದಲ್ಲಿ 'ಸ್ಲಂ ಬಾಲಾ' ನಿರ್ದೇಶಿಸಿದ್ದರು. ಇದೀಗ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮಗ 'ಡೆಡ್ಲಿ' ಖ್ಯಾತಿಯ ಆದಿತ್ಯ ಈ ಎದೆಗಾರಿಕೆ ಚಿತ್ರಕ್ಕೆ ನಾಯಕ. ನಾಯಕನ ಸಖಿಯಾಗಿ 'ಚಂದ್ರಮುಖಿ ಪ್ರಾಣಸಖಿ' ಭಾವನಾ ಆಯ್ಕೆಯಾಗಿದ್ದಾರೆ.
'ಮೇಘ ಮೂವೀಸ್' ಲಾಂಛನದಲ್ಲಿ ತಯಾರಿಸಲಾಗುವ ಎದೆಗಾರಿಕೆಗೆ ಕಥೆ-ಸಂಭಾಷಣೆ ಅಗ್ನಿ ಶ್ರೀಧರ್ ಅವರದು. ಚಿತ್ರಕಥೆಗೆ ಇವರೊಂದಿಗೆ ಪೆನ್ನು ಹಿಡಿದಿದ್ದಾರೆ ಸುಮನಾ ಕಿತ್ತೂರ್. ಅಮಾನುಲ್ಲಾ ಬಚ್ಚನ್ ಹಾಗೂ ಎಂ ಎಸ್ ರವೀಂದ್ರ ಈ ಚಿತ್ರಕ್ಕೆ ನಿರ್ಮಾಪಕರು. ದೀಪಕ್ ಪಂಡಿತ್ ಸಂಗೀತ ಹಾಗೂ ಆಂಟನಿ ಎಲ್ ರೂಬೆನ್ ಸಂಕಲನವಿದೆ. ಬಿ. ರಾಕೇಶ್ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ.
ಸಹಜವಾಗಿಯೇ ಈ ಚಿತ್ರ ಸಾಕಷ್ಟು ಸಂಚಲನ ಮೂಡಿಸಿದೆ. ಕಾರಣ ಅಗ್ನಿ ಶ್ರೀಧರ್ ಈ ಮೊದಲು ಸ್ಯಾಂಡಲ್ ವುಡ್ ಗೆ ಕೊಟ್ಟ ಯಶಸ್ವೀ ಕಾಣಿಕೆ "ಆ ದಿನಗಳು" ಚಿತ್ರ. ಚೈತನ್ಯ ನಿರ್ದೇಶನದ ಆ ದಿನಗಳು, ಅಗ್ನಿ ಶ್ರೀಧರ್ ಅವರ ಹರಿತವಾದ ಸಂಭಾಷಣೆ ಹಾಗೂ ಬಿಗಿಯಾದ ಚಿತ್ರಕಥೆಯಿಂದ ಜನರಿಗೆ ಮರೆಯಲಾಗದ ಮೋಡಿ ಮಾಡಿತ್ತು. ಈಗ ಎದೆಗಾರಿಕೆ ಇನ್ನೂ ಹೆಚ್ಚಿನ ನಿರೀಕ್ಷೆ ಮೂಡಿಸಿದೆ, ನಿರಾಶೆ ಆಗಲಾರದು ಖಂಡಿತ...


Click it and Unblock the Notifications











