ನಿರ್ದೇಶಕನೆ ನಾಯಕ; ನಾಯಕನ ಪತ್ನಿಯೆ ನಾಯಕಿ
ರಾಜಕೀಯ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬಿ ಟಿ ಲಲಿತಾ ನಾಯಕ್ ಈಗ ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಿದ್ದಾರೆ, ನಿರ್ಮಾಪಕಿಯಾಗಿ! ಅವರು ನಿರ್ಮಿಸುತ್ತಿರುವ ಚಿತ್ರದ ಹೆಸರು 'ಅಶಾಂತಿ'. ಮನೋವಿಜ್ಞಾದ ಸುತ್ತ ಹೆಣೆಯಲಾಗಿರುವ ಕತೆ ಇದು. ಇದೇ ಕಥಾವಸ್ತುವನ್ನಿಟ್ಟುಕೊಂಡು ಈಗಾಗಲೆ ಬಂದಿರುವ ಚಿತ್ರಗಳಿಗಿಂತ ಈ ಚಿತ್ರ ಭಿನ್ನವಾಗಿದೆಯಂತೆ.
ಓಂ ಪ್ರಕಾಶ್ ನಾಯಕ್ ನಿರ್ದೇಶಿಸಿರುವ ಈ ಚಿತ್ರ ಅಭದ್ರತೆಯಲ್ಲಿರುವ ಮಹಿಳೆ ಬಗ್ಗೆ ಬೆಳಕು ಚೆಲ್ಲುತ್ತದೆ. ಭದ್ರತೆ ಇಲ್ಲದ ಮಹಿಳೆಯೊಬ್ಬಳ ಮೇಲೆ ಬಲತ್ಕಾರ ನಡೆದಾಗ ಆಕೆ ಆಕಸ್ಮಿಕವಾಗಿ ಮಾಡುವ ಅಪರಾಧ, ಅದರಿಂದ ಆಗುವ ಅನಾಹುತಗಳ ಸುತ್ತ ಕಥೆ ಸಾಗುತ್ತದೆ. ಅಂದಹಾಗೆ ನಿರ್ದೇಶಕರೇ ಚಿತ್ರದ ನಾಯಕ ನಟರೂ ಹೌದು. ನಿರ್ದೇಶಕರ ಪತ್ನಿ ಅನುಪಮ ಚಿತ್ರದ ನಾಯಕಿ.
ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಬಗ್ಗೆ ಲಲಿತಾ ನಾಯಕ್ ಮಾತನಾಡುತ್ತಾ, ಸಿನಿಮಾ ನಿರ್ಮಿಸುವ ಉದ್ದೇಶ ನಮಗಿರಲಿಲ್ಲ. ರಾಜಕೀಯ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲಾಗಲಿಲ್ಲ. ಪ್ರಭಾವಶಾಲಿಯಾದ ಸಿನಿಮಾ ಮಾಧ್ಯಮದ ಮೂಲಕ ಏನನ್ನಾದರೂ ಸಾಧಿಸಬಹುದು ಎಂದು 'ಅಶಾಂತಿ'ಗೆ ಕೈಹಾಕಿದ್ದಾಗಿ ಹೇಳಿದ್ದಾರೆ.
ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರವಿದು. ಆಕಸ್ಮಿಕವಾಗಿ ನಡೆಯುವ ಅಪರಾಧದಿಂದನಾಯಕಿಯ ಮನೆ ಅಶಾಂತಿಯ ಗೂಡಾಗುತ್ತದೆ. ಇದೇ ಚಿತ್ರದ ಒನ್ ಲೈನ್ ಸ್ಟೋರಿ ಎನ್ನುತ್ತಾರೆ ಲಲಿತಾ ನಾಯಕ್. ಈ ಚಿತ್ರಕ್ಕೆ ಮಹದೇವ್ ವಿಶ್ವನಾಥ್ ಛಾಯಾಗ್ರಹವಿದೆ. ಸಂಗೀತ ಆದಿತ್ಯ. ಉಷಾ ರಮೇಶ್ ಮತ್ತು ಡಾ.ಶರತ್ ಚಂದ್ರ ತಾರಾಬಳಗದಲ್ಲಿದ್ದಾರೆ.
ಈ ಚಿತ್ರವನ್ನು ಸಬ್ಸಿಡಿಗಾಗಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ನಮಗೆ ಹಣ ಮಾಡುವ ಉದ್ದೇಶವಿಲ್ಲ. ಚಿತ್ರವನ್ನು ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿದ್ದರೂ ಉತ್ತಮ ಮೌಲ್ಯಗಳಿಂದ ಕೂಡಿದೆ ಎಂದು ನಿರ್ದೇಶಕ ಓಂ ಪ್ರಕಾಶ್ ನಾಯಕ್ ಹೇಳಿದ್ದಾರೆ. ಬಹುತೇಕ ಚಿತ್ರೀಕರಣ ಅವರ ಮನೆಯಲ್ಲೇ ನಡೆದಿರುವುದು ವಿಶೇಷ.
ದಟ್ಸ್ ಕನ್ನಡ ಹೂವಿನಂಗಡಿ 24/7


Click it and Unblock the Notifications











