ತಾಜಾ ಕತೆಯೊಂದಿಗೆ ಮರಳಿದ ಜೇಕಬ್ ವರ್ಗೀಸ್
ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟುಹಾಕಿದ ಜೇಕಬ್ ವರ್ಗೀಸ್ ಸ್ವಲ್ಪ ಗ್ಯಾಪ್ನ ಬಳಿಕ ಮತ್ತೊಂದು ತಾಜಾ ಚಿತ್ರಕತೆಯೊಂದಿಗೆ ಮರಳಿದ್ದಾರೆ. ಈ ಬಾರಿ ಅವರು ಪ್ರೀತಿ ಪ್ರೇಮದ ಕಥನಕ್ಕೆ ಶರಣೆಂದಿದ್ದಾರೆ. ಈ ಹಿಂದೆ ಅವರ ನಿರ್ದೇಶನದಲ್ಲಿ ಬಂದಂತಹ 'ಸವಾರಿ' (ರೀಮೇಕ್) ಹಾಗೂ 'ಪೃಥ್ವಿ' (ಸ್ವಮೇಕ್) ಚಿತ್ರಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದವು.
ಬಳ್ಳಾರಿ ಗಣಿ ಮಾಫಿಯಾ ಬಗ್ಗೆ ಬೆಳಕು ಚೆಲ್ಲುವ 'ಪೃಥ್ವಿ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಐಎಎಸ್ ಅಧಿಕಾರಿಯಾಗಿ ಖಡಕ್ ಅಭಿನಯ ನೀಡಿದ್ದರು. ಈ ಬಾರಿಯೂ ಪುನೀತ್ ಅವರನ್ನೆ ತಮ್ಮ ಚಿತ್ರಕ್ಕೆ ನಾಯಕ ನಟ ಅಂದುಕೊಂಡಿದ್ದರಂತೆ. ಆದರೆ ಪುನೀತ್ ಡೇಟ್ಸ್ ಸಿಗದೆ ಈಗವರು ಹೊಸಬರಿಗೆ ಬಲೆ ಬೀಸಿದ್ದಾರೆ.
ಇದಕ್ಕಾಗಿ ಅವರು ಬೆಂಗಳೂರು ಹಾಗೂ ಮೈಸೂರಿನಲ್ಲಿ ಆಡಿಷನ್ ಕೂಡ ನಡೆಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ಪ್ರತಿಭೆಯನ್ನು ಪರಿಚಯಿಸುವ ಸನ್ನಾಹದಲ್ಲಿದ್ದಾರೆ ಜೇಕಬ್. ಇದೇ ಚಿತ್ರವನ್ನು ತೆಲುಗಿನಲ್ಲಿ ಮಾಡುವ ಉದ್ದೇಶ ಜೇಕಬ್ ಅವರಿಗಿದೆ. ಚಿತ್ರದ ಸಂಪೂರ್ಣ ವಿವರಗಳು ಇನ್ನಷ್ಟೆ ಹೊರಬೀಳಬೇಕು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











