ಹತ್ತು ಕೋಟಿ ರು.ಲಾಭದಲ್ಲಿ ತಾಜ್ ಮಹಲ್

ಗಾಂಧಿನಗರದ ಪಂಡಿತರ ಲೆಕ್ಕಾಚಾರ ನಿಜವಾಗಿದ್ದೇ ಆದರೆ 'ತಾಜ್' 10 ಕೋಟಿ ರುಪಾಯಿಗೂ ಅಧಿಕ ಲಾಭ ಗಳಿಸಿದೆ ಎಂಬ ಮಾತು ನಿಜವಾಗುತ್ತದೆ. ಈ ಬಗ್ಗೆ ನಿರ್ದೇಶಕ ಆರ್.ಚಂದ್ರು ಅವರನ್ನ್ನು ಕೇಳಿದರೆ, ''ಓಡಾಡಲು ಕಾರು ಖರೀದಿಸಿದ್ದೇನೆ, ಚಿಕ್ಕಬಳ್ಳಾಪುರ ಬಳಿಯ ತಮ್ಮ ಊರಿನಲ್ಲಿ ಭರ್ಜರಿ ಮನೆ ಕಟ್ಟಿಸಿದ್ದೇನೆ, ಬೆಂಗಳೂರಿನ ಸಹಕಾರಿ ನಗರದಲ್ಲಿ ಮನೆ ಖರೀದಿಸುವ ಸಿದ್ಧತೆಯಲ್ಲಿದ್ದೇನೆ'' ಎಂದು ತಮ್ಮ ಗಳಿಕೆಯನ್ನು ನಮ್ಮ ಊಹೆಗೆ ಬಿಡುತ್ತಾರೆ.
ಇದರ ಜೊತೆಗೆ 'ತಾಜ್' ರಿಮೇಕ್ ಹಕ್ಕುಗಳನ್ನು ಖರೀದಿಸಲು ತೆಲುಗು ಹಾಗೂ ತಮಿಳು ನಿರ್ಮಾಪಕರು ಮುಗಿಬಿದ್ದಾರೆ. 'ತಾಜ್' ಚಿತ್ರದಿಂದ ಒಟ್ಟು ಎಷ್ಟು ಲಾಭ ಬಂದಿದೆ ಎಂಬುದನ್ನು ಲೆಕ್ಕಾಚಾರ ಹಾಕಲು ನಿರ್ಮಾಪಕರಿಗೂ ಸಾಧ್ಯವಾಗಿಲ್ಲ. ಹಂಚಿಕೆದಾರರು ಸೇರಿದಂತೆ ತಮಗೂ ಲಾಭವಾಗಿದೆ ಎಂಬುದನ್ನು ನಿರ್ಮಾಪಕರಾದ ಅಶೋಕ್ ಕುಮಾರ್ ಮತ್ತು ಶಿವಶಂಕರರೆಡ್ಡಿ ಒಪ್ಪುತ್ತಾರೆ.
ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಕೆ.ಮಂಜು ಮತ್ತು ಕನಕಪುರ ಶ್ರೀನಿವಾಸ್ ತಮ್ಮ ಮುಂದಿನ ಚಿತ್ರಗಳನ್ನು ನಿರ್ದೇಶಿಸುವಂತೆ ಆರ್.ಚಂದ್ರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕನಕಪುರ ಶ್ರೀನಿವಾಸ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಿಗೆ ಮುಂಗಡ ಹಣ ಕೊಟ್ಟು ಪವರ್ ಸ್ಟಾರ್ ಪುನೀತ್ ಗೆ ಒಂದು ಸುಂದರ ಕಥೆ ಹೆಣೆಯಲು ಸೂಚಿಸಿದ್ದಾರೆ. ತಾಜ್ ಮಹಲ್ ಯಶಸ್ಸಿನ ನಂತರ ಆರ್.ಚಂದ್ರು ಅವರ ಮತ್ತೊಂದು ದೃಶ್ಯ ಕಾವ್ಯ ಪ್ರೇಮ್ ಕಹಾನಿ ಎಂಬ ಪಕ್ಕಾ ಲವ್ ಸ್ಟೋರಿ ಚಿತ್ರೀಕರಣ ಈಗಾಗಲೇ ಶುರುವಾಗಿದೆ.
ತಾಜ್ ಮಹಲ್ ಚಿತ್ರದ ನಿರ್ಮಾಪಕರಾದ ಅಶೋಕ್ ಕುಮಾರ್ ಮತ್ತು ಶಿವಶಂಕರರೆಡ್ಡಿ ತಮ್ಮ ಚಿತ್ರ 150ನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಅದ್ದೂರಿ ಸಮಾರಂಭ ನಡೆಸುವುದಾಗಿ ಘೋಷಿಸಿದ್ದಾರೆ. ಒಟ್ಟಿನಲ್ಲಿ ತಾಜ್ ಗೆಲುವು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ. ಚಿತ್ರದಲ್ಲೊಂದು ಪಾತ್ರ ಮಾಡಿದ್ದ್ದ ನಿರ್ಮಾಪಕ ಎಸ್ ಅಶೋಕ್ ಕುಮಾರ್ ಅವರಿಗೆ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಕೃಷ್ಣ ಸಮರ್ಥ್ ಎಂಬುವವರು ನಿರ್ಮಿಸುತ್ತಿರುವ 'ಬ್ರೂಸ್ಲಿ' ಚಿತ್ರದಲ್ಲಿ ಅವರಿಗೆ ಉತ್ತಮ ಪಾತ್ರ ಸಿಕ್ಕಿದೆ. ಒಂದು ಚಿತ್ರದ ಯಶಸ್ಸು ಏನೆಲ್ಲಾ ಬೆಳವಣಿಗೆಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ 'ತಾಜ್' ಒಂದು ಉತ್ತಮ ಉದಾಹರಣೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಚಿತ್ರ ವಿಮರ್ಶೆ: ತಾಜ್ ಮಹಲ್.ಎಂಥಾ ಸ್ವಾದ!
ಗ್ಯಾಲರಿ : ವಾಹ್ ! ಪೂಜಾ. . ವಾಹ್!!! || ಚಂದ್ರು ಕನಸಿನ ತಾಜ್ ಮಹಲ್ || ತಾಜ್ ಮಹಲ್ ಟ್ರೈಲರ್


Click it and Unblock the Notifications











