ರಜನಿ ಅನಾರೋಗ್ಯಕ್ಕೆ ರಾಣಾ ಚಿತ್ರದ ಹೆಸರು ಕಾರಣ?
ಏ.24 ಚೆನ್ನೈನ ಖ್ಯಾತ ಸ್ಟುಡಿಯೋ ಎವಿಎಂನಲ್ಲಿ ಸಂಭ್ರಮ ಮನೆ ಮಾಡಿತ್ತು. ಸೂಪರ್ ಸ್ಟಾರ್ ರಜನಿ ಅವರ ರಾಣಾ ಚಿತ್ರದ ಮಹೂರ್ತ ಸಮಾರಂಭಕ್ಕೆ ಎಲ್ಲವೂ ಸಿದ್ಧವಾಗಿತ್ತು.
ಆದರೆ, ರಾಣಾ ಹೆಸರಿನ ದೋಷ ಆಗಲೇ ರಜನಿ ಮೇಲೆ ಪ್ರಭಾವ ಬೀರತೊಡಗಿತ್ತು. ಅಂದು ಚೆನ್ನೈನಲ್ಲಿ ಕುಸಿದ ಸೂಪರ್ ಸ್ಟಾರ್ ರಜಿನಿ, ಸಿಂಗಾಪುರಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾಯ್ತು.
ಸೈಂಟ್ ಇಸೆಬಲ್ ಆಸ್ಪತ್ರೆ, ರಾಮಚಂದ್ರ ಆಸ್ಪತ್ರೆ ಕೊನೆಗೆ ಮೌಂಟ್ ಎಲಿಜಬೆತ್ ಆಸ್ಪತ್ರೆ ಸುತ್ತಿ ಈಗಷ್ಟೆ ಸುಧಾರಿಸಿಕೊಳ್ಳುತ್ತಿರುವ ರಜನಿ ಕೊಯಮತ್ತೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ದಯಾನಂದ ಸರಸ್ವತಿ ಅವರ ಜನ್ಮದಿನೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಎರಡು ತಿಂಗಳುಗಳ ಕಾಲ ಯಾವುದೇ ಸ್ಟಂಟ್ ಮಾಡುವಂತಿಲ್ಲ. ನಟನೆಗೆ ಬ್ರೇಕ್ ಹಾಕಿ ರೆಸ್ಟ್ ತೆಗೆದುಕೊಳ್ಳಬೇಕು ಎಂದು ಅವರ ಆಪ್ತ ವೈದ್ಯರು ಸ್ಟ್ರೀಕ್ಟ್ ಆಗಿ ಹೇಳಿದ್ದಾರೆ. ರಜನಿ ಕೂಡಾ ದೇಗುಲಗಳ ದರ್ಶನಕ್ಕೆ ಈ ಸಮಯವನ್ನು ಮೀಸಲಿಟ್ಟಿದ್ದಾರೆ.
ಇಷ್ಟೆಲ್ಲ ಆದ ಮೇಲೆ ರಜನಿ ಅನಾರೋಗ್ಯದ ಕಾರಣ ಹುಡುಕುತ್ತಿದ್ದ ಚಿತ್ರತಂಡಕ್ಕೆ ರಾಣಾ ಹೆಸರು ರಜನಿಗೆ ಆಗಿ ಬರುವುದಿಲ್ಲ ಎಂಬ ಸತ್ಯ ತಿಳಿದುಬಂದಿದೆ. ಈಗ ರಜನಿ ಪುತ್ರಿ ಐಶ್ವರ್ಯಾ ಹಾಗೂ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ಚಿತ್ರದ ಶೀರ್ಷಿಕೆ ಬದಲಿಸಲು ಚಿಂತನೆ ನಡೆಸಿದ್ದಾರೆ. ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಗೊಳ್ಳುವ ಸೂಚನೆ ಇದೆ.
ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಅಲ್ಲದೆ ಇಲಿಯಾನಾ ಡಿಕ್ರೂಜ್, ತಬು, ಸೋನು ಸೂದ್ ಮುಂತಾದವರನ್ನು ಒಳಗೊಂಡ ರಾಣಾ ಚಿತ್ರದ ಸಹ ನಿರ್ಮಾಣದ ಹೊಣೆಯನ್ನು ಎರೋಸ್ ಇಂಟರ್ ನ್ಯಾಷನಲ್ ಹಾಗು ಒಶರ್ ಸ್ಟುಡಿಯೋಸ್ ವಹಿಸಿಕೊಂಡಿದೆ. ತೆಲುಗು, ತಮಿಳು ಹಾಗು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣವಾಗಲಿದೆ.


Click it and Unblock the Notifications











