ಪ್ರತಿಭೆಗಳನ್ನು ಹೆಕ್ಕಿ ತೆಗೆಯೋದು ಜಾಲಿ ವಿಷ್ಯವಲ್ಲ
ಗಾಂಧಿನಗರಕ್ಕೆ ಅವಕಾಶ ಹುಡುಕಿಕೊಂಡು ಬರುವವರು ಸಾವಿರಾರು ಮಂದಿ , ಆದರೆ ಅವರಲ್ಲಿ ನೈಜ ಪ್ರತಿಭೆಯುಳ್ಳವರು ಬೆರಳೆಣಿಕೆಯಷ್ಟು ಮಾತ್ರ. ಆಯ್ಕೆ ಪ್ರಕ್ರಿಯೆ ಹಾಗೂ ಅಭಿನಯವನ್ನು ತೆಗೆಯೋದು ಸುಲಭದ ವಿಷ್ಯವಲ್ಲ ಎನ್ನುತ್ತಾರೆ ನಿರ್ದೇಶಕ ಶಿವಮಣಿ.
ಶಿಸ್ತು, ಸಂಯಮಕ್ಕೆ ಹೆಸರಾದ ನಿರ್ಮಾಪಕ ಎಸ್.ವಿ.ಬಾಬು ಅವರು ವಿನೂತನ ಆಲೋಚನೆಗಳ ಹರಿಕಾರರೂ ಹೌದು. ಅವರ ಸಂಸ್ಥೆಯ ಲಾಂಛನದಲ್ಲಿ ನಿರ್ಮಾಣವಾಗಲಿರುವ ಜಾಲಿ ಹುಡುಗ್ರು ಚಿತ್ರಕ್ಕೆ ನೂತನ ಪ್ರತಿಭೆಗಳು ಬೇಕೆಂದು ಜಾಹಿರಾತು ನೀಡಿದ್ದರು. ಅದಕ್ಕೆ ಉತ್ತರವಾಗಿ ಕರ್ನಾಟಕದ ಮೂಲೆಮೂಲೆಯಿಂದ ಸಾವಿರಾರು ಪತ್ರಗಳು ನಿರ್ಮಾಪಕರ ಕೈ ಸೇರಿದವು.
ಬಂದ ಅರ್ಜಿಗಳಲ್ಲಿ ಸುಮಾರು 1200 ಅರ್ಜಿಗಳನ್ನು ಗಣನೆಗೆ ತೆಗದುಕೊಂಡ ಎಸ್.ವಿ.ಬಾಬು ಅವರು ನಗರದ ರಾಜಾಜಿನಗರದಲ್ಲಿರುವ ಡಾ:ರಾಜಕುಮಾರ್ ಸ್ಮಾರಕ ಭವನದಲ್ಲಿ ಮೂರುದಿನಗಳ ಕಾಲ ದಿನಕ್ಕೆ 400 ಜನರಂತೆ ಪರೀಕ್ಷಿಸಿ ಸುಮಾರು 250 ಪ್ರತಿಭೆಗಳನ್ನು ಆರಿಸಿ ಅದರಲ್ಲಿ ಸುಮಾರು 60ಕ್ಕೂ ಹೆಚ್ಚು ಜನರಿಗೆ ನಮ್ಮ ಸಿನೆಮಾದಲ್ಲಿ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಪ್ರತಿಭೆಗಳಿಗೆ ಮೂರು ದಿನಗಳು ಊಟ, ವಸತಿ ಒದಗಿಸಿದ್ದ ನಿರ್ಮಾಪಕರು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಮೈಸೂರಿನಿಂದ ಹೆಚ್ಚು ಅರ್ಜಿಗಳು ಬಂದಿರುವುದಾಗಿ ತಿಳಿಸಿದ ಎಸ್ ವಿ ಬಾಬು ಅವರು ಚಿತ್ರದ ಮುಹೂರ್ತ ಸಮಯದಲ್ಲಿ ಆಯ್ಕೆಯಾದವರನ್ನು ಪರಿಚಯಿಸಲಾಗುವುದೆಂದು ತಿಳಿಸಿದ್ದಾರೆ.
ಅಂತಿಮ ಸುತ್ತಿನ ನಟರ ಆಯ್ಕೆ ಯಲ್ಲಿ ತೊಡಗಿದ್ದ ನಿರ್ದೇಶಕ ಶಿವಮಣಿ, ಎಸ್ ವಿ ಬಾಬು ಅವರ ವ್ಯವಸ್ಥೆಗೆ ಮಾರುಹೋಗಿದ್ದಾರೆ. ನಾಡಿನ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶಕ್ಕೆ ಬೆಂಬಲ ನೀಡುವ ಇಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕು ಎಂದಿದ್ದಾರೆ. ನೂತನ ಕಲಾವಿದರ ತಂಡದಿಂದ ಯಶಸ್ಸಿನ ನಂಬಿಕೆ ಹೆಚ್ಚಾಗಿದೆ ಎಂದು ನಿರ್ದೇಶಕ ಶಿವಮಣಿ ತಿಳಿಸಿದ್ದಾರೆ.
ಮೇ ಮೊದಲ ವಾರದಲ್ಲಿ ಆರಂಭವಾಗುವ ಜಾಲಿ ಹುಡುಗ್ರುಗೆ ಕಥೆ, ಚಿತ್ರಕಥೆ, ಸಂಭಾಷಣೆ ಪೂರ್ತಿಯಾಗಿದೆ. ಮೈಸೂರಿನ ಸುತ್ತಮುತ್ತ ಚಿತ್ರೀಕರಣ ನಡೆಸುವ ಇರಾದೆ ಶಿವಮಣಿ ಅವರಿಗಿದೆ.
(ದಟ್ಸ್ ಕನ್ನಡಸಿನಿವಾರ್ತೆ)


Click it and Unblock the Notifications