ಜೀ ಕನ್ನಡದ ಕುಣಿಯೋಣು ಬಾರಾ ಫೈನಲ್
ಬೆಂಗಳೂರು, ಸೆ.20: ಕರ್ನಾಟಕದ ಪುಟಾಣಿಗಳ ನೃತ್ಯ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿರುವ ಜೀ ಕನ್ನಡದ ಜನಪ್ರಿಯ 'ಕುಣಿಯೋಣು ಬಾರಾ' ಕಾರ್ಯಕ್ರಮದ ಫೈನಲ್ ಸಂಚಿಕೆಯು ಸೆಪ್ಟೆಂಬರ್ 21ರಂದು ಸಂಜೆ 5:30ರಿಂದ ರಾತ್ರಿ 8:30ಗಂಟೆಯವರೆಗೆ ಪ್ರಸಾರವಾಗಲಿದೆ. ಅಂತಿಮ ಸ್ಪರ್ಧೆಗೆ ಧಾರವಾಡದಿಂದ ನಿಹಾಲ್, ಬೆಂಗಳೂರಿನಿಂದ ಶಿವಾನಿ, ಮಂಡ್ಯದಿಂದ ಧನುಷ್, ಮಂಗಳೂರಿನಿಂದ ಜ್ಞಾನ ಐತಾಳ್ ಆಯ್ಕೆಯಾಗಿದ್ದಾರೆ.
ಅಂತಿಮ ಸ್ಫರ್ಧೆಯಲ್ಲಿ ವಿಜೇತರಾದವರಿಗೆ 5ಲಕ್ಷ ಮೊತ್ತದ ಶೈಕ್ಷಣಿಕ ಇನ್ಶೂರೆನ್ಸ್, ಮೊದಲ ರನ್ನ್ರ್-ಅಪ್ಗೆ 2ಲಕ್ಷ ಹಾಗೂ ಎರಡನೇ ರನ್ನ್ರ್-ಅಪ್ಗೆ 1ಲಕ್ಷ ರೂಪಾಯಿ ಮೊತ್ತದ ಶೈಕ್ಷಣಿಕ ಇನ್ಶೂರೆನ್ಸ್ ನೀಡಲಾಗುವುದು. ಕುಣಿಯೋಣು ಬಾರಾ ನಾಲ್ಕನೆ ಭಾಗವು ಹಲವಾರು ವಿಷಯಗಳಲ್ಲಿ ಉಳಿದ ವಾಹಿನಿಗಳ ಕಾರ್ಯಕ್ರಮಕ್ಕಿಂತ ಭಿನ್ನವಾಗಿದೆ.
ಇತ್ತೀಚೆಗೆ ಕೆಲ ವಾರಗಳ ಹಿಂದೆ ಪ್ರಸಾರವಾದ ಒಂದು ಸಂಪೂರ್ಣ ಸಂಚಿಕೆಗೆ, ಹಿಮಪಾತವಾಗುತ್ತಿರುವ ಪ್ರದೇಶದ ಸೆಟ್ ಹಾಕಲಾಗಿತ್ತು. ಕನ್ನಡ ಕಿರುತೆರೆಯಲ್ಲೇ ಇಷ್ಟು ಅದ್ದೂರಿ ಸೆಟ್ ನಿರ್ಮಿಸಿದ ದಾಖಲೆಯಿಲ್ಲ. ಗಣೇಶ ಚತುರ್ಥಿಯ ಸಂದರ್ಭದಲ್ಲೂ ಕೂಡ ಪುಟಾಣಿಗಳ ಜನಪದ ನೃತ್ಯ ವೀಕ್ಷಕರ ಮೆಚ್ಚುಗೆ ಗಳಿಸಿತ್ತು.
ಕರ್ನಾಟಕದಾದ್ಯಂತದಿಂದ 7ರಿಂದ 12ವರ್ಷ ವಯೋಮಿತಿ ಒಳಗಿನ 22 ಪುಟಾಣಿಗಳನ್ನು ಈ ಸ್ಫರ್ಧೆಗೆ ಆಯ್ಕೆ ಮಾಡಲಾಗಿತ್ತು. ಆಯ್ಕೆಯದ ಪುಟಾಣಿಗಳಿಗೆ ನೃತ್ಯ ಹಾಗೂ ನೃತ್ಯದಲ್ಲಿನ ಆಂಗೀಕ ಅಭಿನಯದ ಕುರಿತು ತರಬೇತಿ ನೀಡಲಾಗಿತ್ತು. ಇವರ ನಡುವೆ ನಡೆದ ಸ್ಪರ್ಧೆಯಲ್ಲಿ ಈಗ 4 ಪುಟಾಣಿಗಳು ಅಂತಿಮ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಖ್ಯಾತ ನೃತ್ಯ ನಿರ್ದೇಶಕ ಚೆಲುವಿನ ಚಿತ್ತಾರ ಖ್ಯಾತಿಯ ಮಾಲೂರು ಶ್ರೀನಿವಾಸ್ ಹಾಗೂ ನಟಿ ಛಾಯಾಸಿಂಗ್ ತೀರ್ಪುಗಾರರಾಗಿದ್ದಾರೆ. ಕಾರ್ಯಕ್ರಮ ನಿರೂಪಣೆಯನ್ನು ಜೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದ ಪ್ರತಿಭೆಗಳಾದ ಅನಿರುದ್ಧ ಹಾಗೂ ಸಹನಾ ಹೆಗ್ಡೆ ನಡೆಸಿಕೊಡುತ್ತಿದ್ದಾರೆ.
"ಕುಣಿಯೋಣು ಬಾರಾ ಇದು ಕರ್ನಾಟಕದ ನೃತ್ಯ ಪ್ರತಿಭೆಗಳಿಗೆ ಒಂದು ಉತ್ತಮ ವೇದಿಕೆ. ಉತ್ತಮ ಗುಣಮಟ್ಟ ಹಾಗೂ ಉತ್ತಮ ಮನರಂಜನೆ ನಮ್ಮ ಈ ಕಾರ್ಯಕ್ರಮದ ಉದ್ದೇಶ. ಕರ್ನಾಟಕದ ನೃತ್ಯ ಪ್ರಿಯರಿಗೆ ಈ ಕಾರ್ಯಕ್ರಮ ಜೀ ಕನ್ನಡದ ಕೊಡುಗೆ" ಎಂದು ಜೀ ಕನ್ನಡದ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದರು.
(ದಟ್ಸ್ ಕನ್ನಡ ಸಿನಿವಾರ್ತೆ)
ಜೀ ಕನ್ನಡದಲ್ಲಿ ಕುಣಿಯೋಣು ಬಾರಾ ಕಿಡ್ಸ್ ಸ್ಪೆಷಲ್
ಶತಕ ಪೂರೈಸಿದ ಜೀ ಕನ್ನಡದ ಕಾಮಿಡಿ ಕಿಲಾಡಿಗಳು


Click it and Unblock the Notifications