twitter
    For Quick Alerts
    ALLOW NOTIFICATIONS  
    For Daily Alerts

    ‘ರಾಜ್‌ ಕಲಾವಿದರು ಮಾತ್ರವಲ್ಲ, ಅವರೊಬ್ಬ ಐತಿಹಾಸಿಕ ವ್ಯಕ್ತಿ’

    By Staff
    |
    • ಮುಕುಂದ್‌ ತೇಜಸ್ವಿ
    ಬೆಂಗಳೂರು : ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕಲಾತ್ಮಕ ಸಾಧನೆಗಾಗಿ ಸ್ಮರಿಸಿಕೊಳ್ಳುತ್ತೇವೆ. ಅದೇ ರೀತಿ ಅವರ ಐತಿಹಾಸಿಕ ಮಹತ್ವವನ್ನೂ ಕಡೆಗಣಿಸಲಾಗದು ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್‌ ಕಾರ್ನಾಡ್‌ ಹೇಳಿದ್ದಾರೆ.

    ಕನ್ನಡ ಚಿತ್ರೋದ್ಯಮ ಗುರುವಾರ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಹಾಗೂ ಶ್ರದ್ಧಾಂಜಲಿ ಕಾರ್ಮಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

    ಕುವೆಂಪು, ಬೇಂದ್ರೆ, ಅನಕೃ ಮೊದಲಾದ ಸಾಹಿತಿಗಳು ವಿದ್ಯಾವಂತರನ್ನು ತಲುಪಿದರೆ, ರಾಜ್‌ಕುಮಾರ್‌ ಅವಿದ್ಯಾವಂತರನ್ನೂ ತಲುಪುವ ಮೂಲಕ ಕನ್ನಡಿಗರ ಮನೋಭೂಮಿಕೆಗೆ ಹೊಸ ಸ್ವರೂಪ ನೀಡಿದರು. ಚಿತ್ರರಂಗ ಹಾಗೂ ಸಾಹಿತಿಗಳು ಮಾಡಲಾಗದ್ದನ್ನು ರಾಜ್‌ ಸಾಧಿಸಿದರು. ಅಲ್ಲದೆ ಬೆಳ್ಳಿತೆರೆ ಮೇಲೆ ಒಳ್ಳೆಯ ಪಾತ್ರ ನಿರ್ವಹಿಸಿದಂತೆಯೇ, ನಿಜ ಜೀವನದಲ್ಲೂ ಅಷ್ಟೇ ಘನತೆಯಿಂದ ಬದುಕುವ ಮೂಲಕ ಜನಮಾನಸಕ್ಕೆ ಸಮೀಪವಾದರು ಎಂದು ಅಭಿಪ್ರಾಯಪಟ್ಟರು.

    ಜೀವನ ಶೈಲಿ ಕಲಿತೆ : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ನಾನು ರಾಜ್‌ ಅವರ ಕಟ್ಟಾ ಅಭಿಮಾನಿ. ಅವರ ಸಿನಿಮಾಗಳಿಂದ ಪ್ರಭಾವಿತನಾಗಿದ್ದೇನೆ. ಮುಖ್ಯವಾಗಿ ಬಡವರೊಂದಿಗೆ ಹೇಗೆ ವರ್ತಿಸಬೇಕು ಎಂಬ ಮೌಲ್ಯವನ್ನು ಅವರಿಂದ ಕಲಿತಿದ್ದೇನೆ ಎಂದರು.

    ರಾಜ್‌ಕುಮಾರ್‌ ಹೆಸರು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಯೋಜನೆ ಹಮ್ಮಿಕೊಳ್ಳಲಿದೆ. ರಾಜ್‌ ಅಂತಿಮ ಸಂಸ್ಕಾರ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಮೃತರಾದವರ ಕುಟುಂಬಕ್ಕೆ ಪರಿಹಾರ ನೀಡಲು ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ವಿವರಿಸಿದರು.

    ಶಿವಣ್ಣನ ನೆರವು : ಎಲ್ಲರೂ ನಮ್ಮನ್ನು ಸೂಪರ್‌ಸ್ಟಾರ್‌ಗೆ ಹುಟ್ಟಿದವರು ಅಂತಾರೆ. ಆದರೆ, ಅದಕ್ಕಿಂತ ಹೆಚ್ಚಾಗಿ ನಾವು ಒಳ್ಳೇ ಮನುಷ್ಯನಿಗೆ ಹುಟ್ಟಿದೀವಿ ಅಂದ್ಕೊಂಡಿದೀವಿ ಎಂದು ರಾಜ್‌ ಪುತ್ರ ನಟ ಶಿವರಾಜ್‌ಕುಮಾರ್‌ ಹೇಳಿದರು. ಅಂತ್ಯ ಸಂಸ್ಕಾರ ಸಮಯದಲ್ಲಿ ಮೃತರಾದ 8 ಜನರಿಗೆ ತಲಾ 50 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು. ಅಲ್ಲದೆ ಮೃತರ ಕುಟುಂಬದ ದುಃಖದಲ್ಲಿ ತಾವೂ ಭಾಗಿಗಳು ಎಂದು ಸಹಾನುಭೂತಿ ವ್ಯಕ್ತಪಡಿಸಿದರು.

    ಅನಾರೋಗ್ಯದ ಕಾರಣ ಪಾರ್ವತಮ್ಮ ರಾಜ್‌ಕುಮಾರ್‌ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ನಟರಾದ ವಿಷ್ಟುವರ್ಧನ್‌ ಹಾಗೂ ಉಪೇಂದ್ರ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

    ಸಭೆಯಲ್ಲಿ ರಾಜ್‌ ಒಡನಾಡಿಗಳ ಆಡಿದ ಮಾತುಗಳನ್ನು ಅವರ ಬಾಯಿಂದಲೇ ಕೇಳಿ :

    ಹಿರಿಯ ನಟಿ ಬಿ.ಸರೋಜಾದೇವಿ : ಕರ್ನಾಟಕ ಅಂದ್ರೆ ರಾಜ್‌, ರಾಜ್‌ ಅಂದ್ರೆ ಕನ್ನಡ. 40 ವರ್ಷಗಳ ರಾಜ್‌ ಒಡನಾಟದಲ್ಲಿ ಅವರೊಂದಿಗೆ ಅಭಿನಯಿಸಿದ್ದೇ ನನ್ನ ಪುಣ್ಯ. ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದ್ದಾಗ, ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಭಾಗ್ಯವಂತರು ಚಿತ್ರದಲ್ಲಿನ ನನ್ನ ಅಭಿನಯದ ಬಗ್ಗೆ ಪ್ರಶಂಸೆ ಮಾಡಿದ್ದರು. ಪಾರ್ವತಮ್ಮ ಆ ಚಿತ್ರದ ಕ್ಲೈಮ್ಯಾಕ್ಸ್‌ ನೋಡಿರಲಿಲ್ಲವಂತೆ. ರಾಜ್‌ ಹಾಗೂ ನಾನು ಸಾಯುವ ದೃಶ್ಯ ಅದರಲ್ಲಿರುವುದೇ ಅದಕ್ಕೆ ಕಾರಣವಂತೆ. ರಾಜ್‌ ಚಿತ್ರದಲ್ಲಿ ಸಾಯುವುದನ್ನೇ ನೋಡಲು ಕಷ್ಟವಾಗುತ್ತಿದ್ದ ಪಾರ್ವತಮ್ಮನವರಿಗೆ ಈಗ ಎಷ್ಟು ನೋವಾಗಿರಬಹುದು ಎಂದು ಊಹಿಸಲಾಗದು. ದೇವರು ಅವರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

    ಶ್ರೀನಾಥ್‌ : ರಾಜಣ್ಣ ಎಲ್ಲರ ಕಷ್ಟಗಳನ್ನೂ ತನ್ನ ಕಷ್ಟಗಳೆಂದು ಭಾವಿಸುತ್ತಿದ್ದ ಮಹಾಚೇತನ. ಒಂದು ಸಲ ನನ್ನ ಮಗಳಿಗೆ ಆರೋಗ್ಯ ಸರಿ ಇರಲಿಲ್ಲ. ಆಕೆ ಉಳಿಯುವುದೇ ದುಸ್ತರವಾಗಿತ್ತು. ಆಗ ರಾಜಣ್ಣ ನೀಡಿದ ಸಾಂತ್ವನವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ. ಈಗ ರಾಜಣ್ಣ ನಮ್ಮನ್ನಗಲಿ ಹೋಗಿದ್ದಾರೆ. ನನ್ನ ಮಗಳು ಆರೋಗ್ಯವಾಗಿದ್ದಾಳೆ. ನನ್ನ ಮಗಳನ್ನು ನೋಡಿದಾಗಲೆಲ್ಲ ನನಗೆ ರಾಜಣ್ಣನದೇ ನೆನಪು ತುಂಬಿಬರುತ್ತದೆ.

    ಅಂಬರೀಶ್‌ : ಒಂದು ಕಾಲದಲ್ಲಿ ಸಿನಿಮಾ ಶೂಟಿಂಗ್‌ ನಡೆಯುತ್ತಿದೆ ಎಂದರೆ ರಾಜ್‌ಕುಮಾರ್‌ ಇದ್ದಾರಾ ಎಂದು ಕೇಳುತ್ತಿದ್ದರು. ರಾಜ್‌ ಎಂದರೆ ಸಿನಿಮಾ. ಸಿನಿಮಾ ಶೂಟಿಂಗ್‌ ಎಂದರೆ ರಾಜ್‌ ಎಂಬುದೇ ಜನಾಭಿಪ್ರಾಯವಾಗಿತ್ತು. ನಮ್ಮ ತಾಯಿ ರಾಜ್‌ ಅಭಿನಯಿಸುತ್ತಿದ್ದ ನಾಟಕಗಳನ್ನೂ ನೋಡುತ್ತಿದ್ದರಂತೆ. ಇಡೀ ವಿಶ್ವವೇ ಮೆಚ್ಚಿಕೊಂಡಿದ್ದ ರಾಜಣ್ಣ ಕನ್ನಡ ಚಿತ್ರರಂಗಕ್ಕೆ ಮೆರುಗು ನೀಡಿದ್ದರು ಎಂದರು.

    ನಾನು ಒಡಹುಟ್ಟಿದವರು ಚಿತ್ರದಲ್ಲಿ ರಾಜ್‌ಕುಮಾರ್‌ ಜೊತೆಗೆ ಅಭಿನಯಿಸಿದ್ದು ಅವಿಸ್ಮರಣೀಯ. ಆ ಚಿತ್ರದಲ್ಲಿ ರಾಜ್‌ ಅವರೇ ನನಗೆ ಪಾತ್ರ ದೊರಕಿಸಿಕೊಟ್ಟಿದ್ದರು. ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ನನ್ನ ಕಟೌಟ್‌ಗಿಂತ ಅಂಬರೀಶ್‌ ಕಟೌಟ್‌ ಚಿಕ್ಕದಿರಬಾರದು ಎಂದು ಸೂಚಿಸಿದ್ದ ರಾಜಣ್ಣ ಅವರದ್ದು ಮೇರು ವ್ಯಕ್ತಿತ್ವ. ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಳ್ಳುವುದಕ್ಕಿಂತ ಮುಂಚೆ ರಾಜಣ್ಣನವರ ಮುಂದೆ ನಾನು ಎರಡು ಷರತ್ತುಗಳನ್ನು ಇಟ್ಟಿದ್ದೆ. ಚಿತ್ರದಲ್ಲಿ ರಾಜ್‌ ಅವರಿಗೆ ನಾನು ಬೈಯುವುದಿಲ್ಲ. ಆದರೆ, ರಾಜ್‌ ನನಗೆ ಬೈಯಬಹುದು. ಚಿತ್ರದಲ್ಲಿ ನಾನು ರಾಜ್‌ಗೆ ಹೊಡೆಯುವಂತಿಲ್ಲ. ಆದರೆ, ರಾಜ್‌ ನನಗೆ ಹೊಡೆಯಬಹುದು ಎಂದು ಅವರು ನೆನಪು ಮಾಡಿಕೊಂಡರು.

    ಜಯಂತಿ : ಸೂರ್ಯ ಚಂದ್ರರು ಇರುವತನಕ ರಾಜ್‌ ಇರುತ್ತಾರೆ.

    ಶಿವರಾಂ, ಹರಿಣಿ, ಸಿ.ಆರ್‌.ಸಿಂಹ, ತಾರಾ, ಸುದೀಪ್‌, ದರ್ಶನ್‌, ಸುನೀಲ್‌ರಾವ್‌, ಅನು ಪ್ರಭಾಕರ್‌ ಹಿರಿತೆರೆ ಹಾಗೂ ಕಿರುತೆರೆಯ ಬಹುತೇಕ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ರಾಜ್‌ಕುಮಾರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ರಾಜ್‌ ಚಿತ್ರದ ಜನಪ್ರಿಯ ಗೀತೆಗಳು ಮೊಳಗಿದವು. ನಿರ್ಮಾಪಕ ಸಾ.ರಾ.ಗೋವಿಂದು ಸ್ವಾಗತಿಸಿದರೆ, ನಟ ಸುಂದರರಾಜ್‌ ವಂದಿಸಿದರು.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 16, 2024, 7:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X