ಉಪೇಂದ್ರನಾಯಕತ್ವದಲ್ಲಿ ‘ಹಿಂದೂ’: ಮುಹೂರ್ತಕ್ಕೆ ಬಾಳಾ ಠಾಕ್ರೆ?
ಹಿಂದೂ ಯಾರು ? ಹಿಂದುತ್ವವೆಂದರೆ ಏನು? ಅನ್ನುವ ಚರ್ಚೆಗಳು ಎಲ್ಲೆಡೆ ನಡೆಯುತ್ತಿರುವ ಸಂದರ್ಭದಲ್ಲಿ - ನಾನು ಹಿಂದೂ ಎನ್ನುತ್ತಿದ್ದಾರೆ ಉಪೇಂದ್ರ. ಇದು, ಹಿಂದುತ್ವದ ಕುರಿತ ಇನ್ನೊಂದು ಚರ್ಚೆಯಲ್ಲ ; ಅಪ್ಪಟ ಸಿನಿಮಾ ಸುದ್ದಿ .
'ಹಿಂದೂ" ಉಪೇಂದ್ರರ ಹೊಸ ಸಿನಿಮಾ. ನಿರ್ಮಾಪಕ : ಮುನಿರತ್ನಂ.
ಕುರಿಗಳು, ಕೋತಿಗಳು ಖ್ಯಾತಿಯ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ 'ಕೊತ್ವಾಲ" ಎನ್ನುವ ಚಿತ್ರವನ್ನು ನಿರ್ಮಿಸುವುದಾಗಿ ಮುನಿರತ್ನಂ ಈ ಮೊದಲು ಪ್ರಕಟಿಸಿದ್ದರು. ಕೊತ್ವಾಲನ ಕಥೆಯ ಕುರಿತು ಬಾಬು ಸಾಕಷ್ಟು ಸಂಶೋಧನೆಯನ್ನೂ ನಡೆಸಿ, ಕಥೆಯ ಚೌಕಟ್ಟು ಸಿದ್ಧ ಪಡಿಸಿದ್ದರು. ಕೊತ್ವಾಲನ ನಿರ್ಮಾಣಕ್ಕೆ ಸಾಕಷ್ಟು ಸಿದ್ಧತೆಗಳೂ ನಡೆದಿದ್ದವು. ಆದರೀಗ 'ಕೊತ್ವಾಲ" ಹಿಂದೆ ಬಿದ್ದಿದ್ದಾನೆ. 'ಮೊದಲು ಹಿಂದೂ, ಆಮೇಲೆ ಕೊತ್ವಾಲ" ಅನ್ನುತ್ತಿದ್ದಾರೆ ಮುನಿರತ್ನಂ.
ಕೊತ್ವಾಲ ತಂಡವೇ ಹಿಂದೂ ಸಿನಿಮಾದಲ್ಲೂ ತೊಡಗಿಕೊಳ್ಳಲಿದೆ. ಹಿಂದೂ ಮುಹೂರ್ತ ಸದ್ಯದಲ್ಲಿಯೇ ನಡೆಯಲಿದೆ ಎನ್ನುವ ಮುನಿರತ್ನಂ, ಮುಹೂರ್ತಕ್ಕೆ ಮುಖ್ಯ ಅತಿಥಿಯಾರು ಗೊತ್ತಾ ? ಎಂದು ಧ್ವನಿ ಸಣ್ಣದು ಮಾಡುತ್ತಾರೆ. ಶಿವಸೇನೆಯ ಪ್ರಶ್ನಾತೀತ ನಾಯಕ ಬಾಳಾಠಾಕ್ರೆ ಮುಹೂರ್ತಕ್ಕೆ ಬಂದರೆ ಹೇಗೆ? ಬಂದೇ ಬರುತ್ತಾರೆ ಅನ್ನುವುದು ನಿರ್ಮಾಪಕರ ವಿಶ್ವಾಸ. ಹಿಂದೂ ಸಿನಿಮಾ ಮುಹೂರ್ತಕ್ಕೆ ಅತಿಥಿಯಾಗುವ ಅರ್ಹತೆ ಠಾಕ್ರೆ ಅವರನ್ನು ಬಿಟ್ಟರೆ ಯಾರಿಗಿದ್ದೀತು ಅನ್ನುವುದು ಬೇರೆ ಮಾತು!
ಹಿಂದೂ ವಿವಾದ
ಹಿಂದೂ ಚಿತ್ರ ವಿವಾದಗಳನ್ನು ಹುಟ್ಟು ಹಾಕುತ್ತದೆಯೇ? ಮಣಿರತ್ನಂ ಅವರ 'ಬಾಂಬೆ"ಯಂಥ ಸೂಕ್ಷ್ಮ ಸಂವೇದನೆಗಳ ಕನ್ನಡಿಯಾಗುತ್ತದಾ? 'ಬಾಂಬೆ"ಯಂಥ ಚಿತ್ರವಾಗುತ್ತದೋ ಇಲ್ಲವೋ ಹೇಳಲಾಗದು, ವಿವಾದಗಳನ್ನು ಹುಟ್ಟುಹಾಕುವುದಂತೂ ಖಚಿತ ಅನ್ನುವ ಸಣ್ಣ ದನಿಗಳು ಆಗಲೇ ಕೇಳಿಬರುತ್ತಿವೆ. ಮುನಿರತ್ನಂಗೆ ವಿವಾದಗಳೇನೂ ಹೊಸತಲ್ಲ . ಅವರು ವಿವಾದಕ್ಕೆ ಅಂಜುವವರೂ ಅಲ್ಲ . ಆ ಕಾರಣದಿಂದಲೇ ಪ್ರಚಲಿತ ಘಟನೆಗಳನ್ನು ಅವರು ತಮ್ಮ ಸಿನಿಮಾಕ್ಕೆ ಆರಿಸಿಕೊಳ್ಳುತ್ತಾರೆ. ಕಂಬಾಲಹಳ್ಳಿಯಲ್ಲಿ ದಲಿತರ ಕಗ್ಗೊಲೆಯಾದದ್ದೆ ತಡ- ಮುನಿರತ್ನಂ ತಲೆಯಲ್ಲಿ ಕಂಬಾಲಹಳ್ಳಿ ಚಿತ್ರ ಹುಟ್ಟಿತು. ಕಂಬಾಲಹಳ್ಳಿ ಇನ್ನೇನು ತೆರೆ ಕಾಣಲಿದೆ.
ಮುನಿರತ್ನಂ ಸದ್ಯಕ್ಕೆ 'ಹಿಂದೂ" ಚಿತ್ರದ ಕಥಾ ಹಂದರದ ಗುಟ್ಟು ಬಿಟ್ಟುಕೊಟ್ಟಿಲ್ಲ . ಗುಜರಾತ್ ಹಿಂಸಾಚಾರದ ಹಿನ್ನೆಲೆ ಮುನ್ನೆಲೆಯೇ 'ಹಿಂದೂ" ಚಿತ್ರದ ಕಥೆ ಅನ್ನಲಾಗುತ್ತಿದೆ. ಚಿತ್ರ ಮುಸ್ಲಿಮರಿಗೆ ಸಹಾನುಭೂತಿ ತೋರಿಸುವುದಕ್ಕೋಸ್ಕರವೋ, ಹಿಂದೂಗಳ ಜಾಗೃತಿಗಾಗೋ? ಮುಹೂರ್ತಕ್ಕೆ ಠಾಕ್ರೆ ಬರುತ್ತಿರುವುದು ಗಮನಿಸಿ ಚಿತ್ರದ ದಿಕ್ಕನ್ನು ಗುರ್ತಿಸಲು ಸಾಧ್ಯವಾ?
ಸಿನಿ ಸಂಚಯ


Click it and Unblock the Notifications