ತಾರೆಯ ಪೊರೆಯಿಂದ ಹೊರಬಂದ ಶೃತಿ ಅವರೊಂದಿಗೆ ಪುಟ್ಟ ಮಾತುಕತೆ
ಅದು ಮಾಯಾ ಬಜಾರು!
'ಭಾರತದ ಹೌದಿನಿ' ಎಂದೇ ಪ್ರಸಿದ್ಧರಾದ ಯಕ್ಷಿಣಿಗಾರ ಪ್ರಹ್ಲಾದ್ ಆಚಾರ್ಯ ಅವರ ಮಾಯಾ ಜಾದೂ. ಮೊನ್ನೆ ಫ್ಯಾಮಿಲಿ ಡೇ (ಮೇ 15) ಯಂದು ಟೌನ್ ಹಾಲ್ನಲ್ಲಿ ಜನವೋ ಜನ. ಚಿಗುರು ವಯಸ್ಸಿನಿವರಿಂದ ಇಳಿ ವಯಸ್ಸನ ಮಂದಿಯವರೆಗೆ ಯಕ್ಷಿಣಿಗೆ ಪುಳಕಗೊಳ್ಳದವರಾರು? ನಟಿ ಶೃತಿ ಕೂಡ ಜಾದೂ ನೋಡಲು ಬಂದಿದ್ದರು, ಜೊತೆಯಲ್ಲಿ ಅರ್ಧಾಂಗ ಮಹೇಂದರ್.
ಶೃತಿ ಈಗ ಅಮ್ಮನಾಗುವ ಹಾದಿಯಲ್ಲಿ ಬಹು ದೂರ ಕ್ರಮಿಸಿದ್ದಾರೆ. ದುಂಡು ಮುಖದ ತುಂಬಾ ಅಮ್ಮನ ಕಳೆ. ಸದ್ಯಕ್ಕೆ ನಟನೆಗೆ ಅಲ್ಪ ವಿರಾಮ; ಮಗುವಿನತ್ತಲೇ ಗಮನ. ವಿರಾಮದ ವೇಳೆಯಲ್ಲಿ ಮಾತಿಗೆ ಸಿಕ್ಕ ಶೃತಿ, ಪಕ್ಕದ ಮನೆಯ ಹುಡುಗಿಯಂತೆ ಮಾತನಾಡಿದರು.
ಅಮ್ಮನಾದ ಮೇಲೂ ನಟನೆ ಮುಂದುವರೆಸುತ್ತೀರಾ?
ಖಂಡಿತವಾಗಿಯೂ. ಮಗುವಾದ ಮೇಲೆ ನಾನು ನಟಿಸೋಲ್ಲ ಅಂತ ನಾನು ಇನ್ನೂ ಎಲ್ಲೂ ಹೇಳಿಯೇ ಇಲ್ಲ.
ಮುಂದಿನ ದಿನಗಳಲ್ಲಿ ಯಾವ ತರಹದ ಪಾತ್ರಗಳನ್ನು ನೀವು ನಿರೀಕ್ಷಿಸುತ್ತೀರಿ?
ಪಾತ್ರ ಯಾವುದಾದರೂ ಆಗಬಹುದು. ಆಯ್ಕೆಯಲ್ಲಿ ಮಾತ್ರ ನಾನು ಚ್ಯೂಸಿ. ಹಿಂದೆಂದೂ ಮಾಡಿರದಂತಹ ಪಾತ್ರಗಳನ್ನು ಮಾತ್ರ ಸೆಲೆಕ್ಟ್ ಮಾಡ್ತೇನೆ.
ಸಿನಿಮಾ ನಿರ್ದೇಶಿಸುವ/ತಯಾರಿಸುವ ಆಸೆ ಏನಾದರೂ...?
ಉಹೂಂ.. ಖಂಡಿತಾ ಇಲ್ಲ.. ನಾನದರ ಬಗ್ಗೆ ಯೋಚನೆ ಮಾಡೇ ಇಲ್ಲ.
ಅಳು ಪ್ರಧಾನ ಫ್ಯಾಮಿಲಿ ಸಿನಿಮಾಗಳ ಕಾಲ ಮುಗಿದು ಪ್ರೀತಿ ಪ್ರಧಾನ ಚಿತ್ರಗಳ ಜಮಾನ ಶುರುವಾಗಿದೆ ಅಂತ ನಿಮಗೆ ಅನಿಸುತ್ತಾ?
ಹಂಗ್ಯಾಕೆ ತಿಳ್ಕೋತೀರಿ? ಕುಟುಂಬ ಮತ್ತು ಪ್ರೀತಿ- ಇವೆರಡೂ ಒಂದಕ್ಕೊಂದು complementary(ಪೂರಕ). ಫ್ಯಾಮಿಲಿ ಇದ್ದರೇನೇ ಪ್ರೀತಿ ಇರಲಿಕ್ಕೆ ಸಾಧ್ಯ. ಹಾಗೇನೇ ಪ್ರೀತಿ ಇದ್ದರೆ ಫ್ಯಾಮಿಲಿ. ಅಳು, ನಗು, ಪ್ರೀತಿ, ಪ್ರೇಮ ಇವೆಲ್ಲ ಬೆರೆತಾಗಲೇ ಒಂದು ಚಿತ್ರ ಪರಿಪೂರ್ಣ ಆಗೋಕೆ ಸಾಧ್ಯ.
ಕೇಳುವುದು ಸಾಕಷ್ಟಿತ್ತು . ಆದರೆ, ಅಷ್ಟರಲ್ಲಿ ಪ್ರಹ್ಲಾದ್ ಆಚಾರ್ಯ ವೇದಿಕೆಯ ಮೇಲೆ ಮತ್ತೆ ಪ್ರತ್ಯಕ್ಷರಾದರು. ಮಾಯಾಲೋಕದಲ್ಲಿ ಬಾಯಿಗೆ ಬೀಗ ; ಅಚ್ಚರಿಯಿಂದ ಅರಳಿದ ಕಣ್ಣುಗಳೇ ಮಾತನಾಡತೊಡಗುತ್ತವೆ.
ಇದನ್ನೂ ಓದಿ...


Click it and Unblock the Notifications