ಕನ್ನಡದ ತಾಕತ್ತು ದೊಡ್ಡದು - ಕಾಸರವಳ್ಳಿ
ಬೆಂಗಳೂರು : ಕನ್ನಡದಲ್ಲಿ ಗುಣಾತ್ಮಕ ಚಿತ್ರಗಳ ಕೊರತೆ ಇದೆ ಎನ್ನುವುದು ಹಸಿಹಸಿ ಸುಳ್ಳು. ಕನ್ನಡ ಚಿತ್ರರಂಗ ಹಣದಲ್ಲಿ ಹಿಂದಿದೆಯೇ ಹೊರತು ಗುಣದಲ್ಲಿ ಅಲ್ಲ ಎಂದು ಹೆಸರಾಂತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವ ಮಂದಿಗೆ ಈ ಸಾಲಿನ ರಾಷ್ಟ್ರಪ್ರಶಸ್ತಿಗಳು ತಕ್ಕ ಉತ್ತರ ನೀಡಿವೆ ಎಂದರು.
ರಾಷ್ಟ್ರಪ್ರಶಸ್ತಿ ಗಳಿಕೆಯಲ್ಲಿ ಬೆಂಗಾಲಿ, ಹಿಂದಿ ಮತ್ತು ಮಲೆಯಾಳಂ ಬಿಟ್ಟರೆ ಕನ್ನಡಕ್ಕೆ ಅಗ್ರಸ್ಥಾನ. ತಮಿಳು ಮತ್ತು ತೆಲುಗುಗಳಿಗಿಂತಲೂ ಅಧಿಕ ರಾಷ್ಟ್ರಪ್ರಶಸ್ತಿಗಳನ್ನು ಕನ್ನಡ ಚಿತ್ರರಂಗ ಪಡೆದಿದೆ. ಅನ್ಯ ಭಾಷೆ ಚಿತ್ರಗಳೊಂದಿಗೆ ಸ್ಪರ್ಧಿಸುವ ತಾಕತ್ತು ಕನ್ನಡ ಚಿತ್ರರಂಗಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸುವ ನಿರ್ಧಾರ ಸ್ವಾಗತಾರ್ಹ. ಇದು ಕೇವಲ ಅತ್ಯುತ್ತಮ ನಟ-ನಟಿ ಪ್ರಶಸ್ತಿಗೆ ಸೀಮಿತವಾಗಬಾರದು. ಕಲಾವಿದರ ನಡುವೆ ತಾರತಮ್ಯ ಸಲ್ಲದು ಎಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರಶಸ್ತಿ ವಿಜೇತ ಚಿತ್ರಗಳನ್ನು ಚಿತ್ರಪ್ರೇಮಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಚಿತ್ರಗಳ ಪ್ರದರ್ಶನಕ್ಕಾಗಿ ಸರ್ಕಾರ ಕೆಲವು ಚಿತ್ರಮಂದಿರಗಳನ್ನು ಮೀಸಲಿಡಬೇಕು ಎಂದು ಕಾಸರವಳ್ಳಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ, ನನ್ನ ಎಲ್ಲಾ ಸಾಧನೆಗೆ ಕನ್ನಡಿಗರ ಪ್ರೀತಿ ಮತ್ತು ಮಾಧ್ಯಮಗಳು ನೀಡಿದ ಪ್ರೋತ್ಸಾಹವೇ ಕಾರಣ ಎಂದರು.
(ಇನ್ಫೋ ವಾರ್ತೆ)
ಇದನ್ನೂ ಓದಿ :
ತಾರಾಗೆ ಪ್ರಥಮ ರಾಷ್ಟ್ರಪ್ರಶಸ್ತಿಯ ಹಾರ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications