ಕನ್ನಡದ ಗೋವಿಂದು ಮುಜುಗರದಿಂದ ಮುಖಮುಚ್ಚಿಕೊಂಡಿದ್ದಾರೆ
ಮೊದಲು ಮುಜುಗರದ ವಿಷಯ :
ಅಭಿನಯ ನನಗಲ್ಲ , ನಾನೇನಿದ್ದರೂ ನಿರ್ಮಾಪಕ ಎಂದು ಹೇಳುತ್ತಲೇ, ಗೆಳೆಯರ ಒತ್ತಾಯದ ಮೇರೆಗೆ ಗೋವಿಂದು ಬಣ್ಣ ಹಚ್ಚಿದ್ದು ಹಳೆಯ ಕಥೆ. 'ದಡ್ರು ಸಾರ್ ದಡ್ರು" ಸೆಟ್ಟೇರಿದ ದಿನವೇ ಗೋವಿಂದು ಘೋಷಿಸಿದ್ದರು- ಇದು ನನ್ನ ಮೊದಲನೇ ಚಿತ್ರ ಹಾಗೂ ಕೊನೆಯ ಚಿತ್ರ. ಗೋವಿಂದಣ್ಣ ನಿಜ ಹೇಳ್ತಾರೆ ಎಂದು ಅವರ ಅಭಿಮಾನಿಗಳೂ ನಂಬಿದ್ದರು. ಆದರೆ ನಂಬಿಕೆ ಸುಳ್ಳಾಗಿದೆ. ಗೋವಿಂದು ಮತ್ತೆ ಬಣ್ಣ ಹಚ್ಚಿದ್ದಾರೆ. ದಡ್ಡರಾಗುವ ಸರದಿ ಅಭಿಮಾನಿಗಳದು.
ಸಾ.ರಾ.ಗೋವಿಂದು ಮುಖ್ಯಪಾತ್ರದಲ್ಲಿ ನಟಿಸಲಿರುವ 'ನನ್ಹೆಂಡ್ತಿ ಮದುವೆ" ಚಿತ್ರದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದಡ್ರು ಚಿತ್ರದಂತೆ ಹೆಂಡ್ತಿ ಚಿತ್ರಕ್ಕೂ ಗೋವಿಂದುಗೆ ನಾಯಕಿ ಸಿಗಲು ಸ್ವಲ್ಪ ಕಿರಿಕ್ಕಾಯಿತು. ಪ್ರೇಮಾ ನಾಯಕಿಯಾದರೆ ಚೆನ್ನಾಗಿರುತ್ತೆ ಎಂದು ನಿರ್ಮಾಪಕರು ಅಂದುಕೊಂಡಿದ್ದರು. ಆದರೆ, ಗೋವಿಂದು ಹೆಸರು ಹೇಳಿದ ತಕ್ಷಣ 'ನನಗೆ ಬೇರೆ ಕೆಲಸ ಇದೆ" ಎಂದು ಪ್ರೇಮಾ ಚೀರಿಕೊಂಡರಂತೆ. ಏನು 'ಮರ್ಮ"ವೋ? ನನ್ನಂಥ ಕನ್ನಡದ ಕಂದನಿಗೇ ಪ್ರೇಮಾ ಕೈಕೊಟ್ಟಳಲ್ಲ ಎಂದು ಸಿಕ್ಕಾಪಟ್ಟೆ ರಾಂಗಾದ ಗೋವಿಂದು, ಪ್ರೇಮಾ ಸವಾಸನೇ ಬೇಡ ಎಂದು ಅನು ಕೃಷ್ಣಕುಮಾರ್ ಮನೆ ಕದ ತಟ್ಟಿದರು. ಅನು ಹ್ಞೂಂ ಅಂದರು.
ಮೊದಲ ಚಿತ್ರ 'ದಡ್ರು.." ಸಂದರ್ಭದಲ್ಲೂ ಗೋವಿಂದು ಇಂಥದ್ದೇ ಮುಜುಗರ ಎದುರಿಸಿದ್ದರು. ನಾಯಕಿಯಾಗು ಬಾರಮ್ಮಾ ಎಂದು- 'ವಾಲಿ"ಯ ಫೂನಂಳನ್ನು ಕರೆದರೆ ಆಕೆ ಒಲ್ಲೆ ಎಂದು ಮುಖ ತಿರುಗಿಸಿದ್ದಳು. ಬರೇ ಮುಖ ತಿರುಗಿಸಿದ್ದು ಮಾತ್ರವಲ್ಲ , 'ನನಗೆ ಅವಕಾಶ ಸಿಗದಿದ್ದರೂ ಪರವಾಗಿಲ್ಲ . ಗೋವಿಂದು ಅಂಥ ವಯಸ್ಸಾದವರ ಜೊತೆ ನಟಿಸುವುದಿಲ್ಲ" ಎಂದು ಫೂನಂ ಮಂಗಳಾರತಿ ಮಾಡಿದ್ದರಂತೆ. ಕೊನೆಗೆ ಗಂಟು ಬಿದ್ದದ್ದು ಕಾಸಿಗೊಂದು ಕಾಲ್ಷೀಟ್ ಹಂಚುತ್ತಿರುವ 'ಫ್ರೆಂಡ್ಸ್"ನ ಋತಿಕಾ.
ಈಗ ಕಂಗಾಲಿನ ವಿಷಯ :
ಗೋವಿಂದು ಅವರ ಸಿಕ್ಕಾಪಟ್ಟೆ ಕನ್ನಡಪ್ರೇಮವನ್ನು ಕಂಡು ಆತಂಕಗೊಂಡಿರುವ ತಮಿಳು ಉಗ್ರವಾದಿಗಳು ಅವರ ಮೇಲೆ ಕಣ್ಣಿಟ್ಟಿದ್ದಾರಂತೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ತೆಯಾದ ಬಾಂಬ್ ತಯಾರಿಸುತ್ತಿದ್ದ ತಮಿಳು ಉಗ್ರರ ತಂಡದ ಪಟ್ಟಿಯಲ್ಲಿದ್ದ ಮೊದಲ ಹೆಸರೇ ಗೋವಿಂದು ಅವರದಂತೆ. ಇದೆಲ್ಲಾ ನಿಜಾನಾ ಗೋವಿಂದು ?
'ಪ್ರತಿದಿನವೂ ನನ್ನ ಮನೆಗೆ ಬೆದರಿಕೆ ಕರೆಗಳು ಬರುತ್ತಿವೆ. ಫೈಟ್ ಮಾಡೋಕೆ ನಾನು ರೆಡಿ. ಆದರೆ, ಮಕ್ಕಳ ಗತಿಯೇನು?" ಎಂದು ಕೆಲವು ಆತ್ಮೀಯರು-ಸುದ್ದಿಗಾರರ ಹತ್ತಿರ ಗೋವಿಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯಕ್ಕೆ ಗೋವಿಂದು ಪೊಲೀಸ್ ಕಣ್ಗಾವಲಲ್ಲಿದ್ದಾರೆ. 'ದಡ್ರು ಸಾರ್ ದಡ್ರು" ಯಾವಾಗ ಬಿಡುಗಡೆ ಅನ್ನೋದು ತಿಳಿದುಬಂದಿಲ್ಲ .


Click it and Unblock the Notifications