ಕಿರುತೆರೆಯಲ್ಲಿ ಹೊಚ್ಚಹೊಸ ಚಲನಚಿತ್ರ 'ಸ್ನೇಹಾಂಜಲಿ'
ಬೆಂಗಳೂರು, ಡಿ.20 : ಸಿನಿಮಾದಲ್ಲಿ ನಟನೆ ಮಾಡುವುದು ಎಲ್ಲರಿಗೂ ಇತ್ತೀಚೆಗೆ ಸುಲಭವಾಗಿದೆ. ಆದರೆ ಮಾತು ಬರದ, ಕಿವಿ ಕೇಳದ ಒಬ್ಬ ಯುವಕ ನಾಯಕನಾಗಿ ನಟಿಸಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದು ನಿಮಗೆ ಗೊತ್ತೇ? ಆಶ್ಚರ್ಯ ಆಗ್ತಿದ್ಯಾ ? ಮಾತು ಬಾರದ, ಕಿವಿ ಕೇಳದ ನಟ ಧ್ರುವ ಈ ದಾಖಲೆ ಮಾಡಿದವರು.
ನಟ ಧ್ರುವ ನಟಿಸರುವ "ಸ್ನೇಹಾಂಜಲಿ" ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರ. ಜೀ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಶನಿವಾರ(ಡಿ.22) ಸಂಜೆ 5.30ಕ್ಕೆ ಈ ಚಿತ್ರ ಪ್ರಸಾರವಾಗಲಿದೆ. ಅಂಗವೈಕಲ್ಯ ಹೊಂದಿರುವವರೆಲ್ಲರಿಗೂ ಸ್ಫೂರ್ತಿಯಾಗುವಂತಹ ಒಬ್ಬ ಯುವಕನ ಯಶೋಗಾಥೆಗೆ ಉತ್ತಮ ಉದಾಹರಣೆ ಈ ಚಿತ್ರ.
ಭಾರತೀಯ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ಮಾತು ಬಾರದ, ಕಿವಿ ಕೇಳದ ಯುವಕನೊಬ್ಬ ಎಲ್ಲರಂತೆಯೇ ನಾಯಕನ ಪಾತ್ರದಲ್ಲಿ ಮಿಂಚಿದ್ದಾನೆ. ಇಡೀ ಚಿತ್ರದಲ್ಲಿ ಎಲ್ಲೂ ಈತ ಮಾತು ಬಾರದವ ಕಿವಿ ಕೇಳದ ಯುವಕ ಎಂದು ಪ್ರೇಕ್ಷಕರು ಗುರುತಿಸಲಾಗುವುದಿಲ್ಲ. ನಿಜ ಜೀವನದಲ್ಲಿ ಈತ ಕಿವುಡ ಮೂಗರ ಭಾರತೀಯ ಕ್ರಿಕೆಟ್ ತಂಡಕ್ಕೆ ನಾಯಕ. ಸ್ಪುರದ್ರೂಪಿಯಾದ ಈತ ನಟನೆಯಲ್ಲಿ ಉತ್ತಮ ಪ್ರತಿಭೆಯನ್ನು ತೋರಿದ್ದಾನೆ.
ಜೀ ಕನ್ನಡ ವೀಕ್ಷಕರಿಗೆ ಕ್ರಿಸ್ಮಸ್ ಹಬ್ಬದ ಅದ್ಭುತ ಕೊಡುಗೆಯಾಗಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿರುವ ಅದ್ಭುತ ಚಿತ್ರ "ಸ್ನೇಹಾಂಜಲಿ" ಪ್ರಸಾರವಾಗಲಿದೆ.
ಸ್ನೇಹಾಂಜಲಿ ಚಿತ್ರದ ನಿರ್ದೇಶಕ ಗಿರೀಶ್ ಕಂಪ್ಲಾಪುರ್ ಮತ್ತು ಸಿದ್ದರಾಜು , ಸಂಭಾಷಣೆ ಗಿರೀಶ್ ಮತ್ತು ಮಧುಕರ್ ಬೆಳವಾಡಿ. ಅಂಗವೈಕಲ್ಯವನ್ನು ಮೀರಿ ಉತ್ತಮ ನಟನೆ ತೋರಿರುವ ಧ್ರುವ ನಟನೆ ನೋಡುವ ಅವಕಾಶ ಕಳೆದುಕೊಳ್ಳದಿರಿ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications