ಕಮಲ್ ಕ್ಯಾತೆ, ರಣ್ವೀರ್ ರಗಳೆ, ನೆಟ್ಟು ಬೋಲ್ಟು, ಬಿಗ್ಬಾಸ್ ಬೀಗ- ಈ ವರ್ಷದ ಚಂದನವನ ವಿವಾದಗಳಿವು
ಚಿತ್ರರಂಗದಲ್ಲಿ ವಿವಾದಗಳು ಹೊಸದೇನು ಅಲ್ಲ. ಈ ವರ್ಷ ಸಾಕಷ್ಟು ವಿವಾದಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿ ಆಯಿತು. ರೇಣುಕಾಸ್ವಾಮಿ ಪ್ರಕರಣದಿಂದ ಶುರುವಾಗಿ ರಣ್ವೀರ್ ಸಿಂಗ್ ಹುಚ್ಚಾಟದವರೆಗೆ ಸಾಕಷ್ಟು ವಿಚಾರಗಳು ಸದ್ದು ಮಾಡಿದವು. ಒಂದಷ್ಟು ಪ್ರಕರಣಗಳು ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿದ್ದು ಇದೆ. ಕ್ಷಮೆ ಕೇಳುವುದರೊಂದಿಗೆ ಕೆಲವು ವಿವಾದಗಳು ತಣ್ಣಗಾಗಿದ್ದು ಗೊತ್ತೇಯಿದೆ.
ರಚಿತಾ ಪ್ರಚಾರದ ವಿವಾದ
'ಸಂಜು ವೆಡ್ಸ್ ಗೀತಾ 2' ಚಿತ್ರದ ಪ್ರಚಾರಕ್ಕೆ ನಟಿ ರಚಿತಾ ರಾಮ್ ಬರ್ತಿಲ್ಲ ಎಂದು ಚಿತ್ರತಂಡ ಬೇಸರಗೊಂಡಿತ್ತು. ಈ ಸಂಬಂಧ ನಿರ್ದೇಶಕ ನಾಗಶೇಖರ್ ಮತ್ತು ಚಿತ್ರತಂಡ ವಾಣಿಜ್ಯ ಮಂಡಳಿಗೆ ದೂರು ನೀಡಿತ್ತು. ಈ ಬಗ್ಗೆ ವೀಡಿಯೋ ಮಾಡಿ ಪ್ರತಿಕ್ರಿಯಿಸಿದ್ದ ರಚಿತಾ 'ನಾನೇನು ತಪ್ಪು ಮಾಡಿಲ್ಲ. ಬೇರೆ ಸಿನಿಮಾದ ಕಮಿಟ್ಮೆಂಟ್ ಇದ್ದ ಕಾರಣ ಪ್ರಚಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ
ರಾಜ್ಯದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ವಿವಾದ ಹುಟ್ಟಾಕ್ಕಿತ್ತು. ತಮನ್ನಾ ಕನ್ನಡ ನಟಿ ಅಲ್ಲ, ಆಕೆಗೆ ಕೋಟಿ ಕೋಟಿ ಹಣ ಕೊಟ್ಟು ರಾಯಭಾರಿ ಆಗಿ ಆಯ್ಕೆ ಮಾಡಿದ್ದು ತಪ್ಪು ಎಂದು ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಬ್ರ್ಯಾಂಡ್ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸಮರ್ಥಿಸಿಕೊಂಡಿದ್ದರು.
ದರ್ಶನ್ ಮತ್ತೆ ಜೈಲಿಗೆ
ಕಳೆದ ವರ್ಷ ರೇಣುಕಾಸ್ವಾಮಿ ಪ್ರಕರಣ ಭಾರೀ ಸದ್ದು ಮಾಡಿತ್ತು. ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಆದರೆ ಹೈಕೋರ್ಟ್ ನೀಡಿದ್ದ ಜಾಮೀನು ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜಾಮೀನು ರದ್ದಾಗಿ ದರ್ಶನ್ ಸೇರಿ ಎಲ್ಲಾ ಆರೋಪಿಗಳು ಮತ್ತೆ ಜೈಲು ಸೇರುವಂತಾಯಿತು. ದರ್ಶನ್ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ಬಿಡುಗಡೆ ಆಯಿತು.

ಥಗ್ಲೈಫ್ ಬ್ಯಾನ್
ಕರ್ನಾಟಕದಲ್ಲಿ ಕಮಲ್ ಹಾಸನ್ ನಟನೆಯ 'ಥಗ್ಲೈಫ್' ಸಿನಿಮಾ ಬಿಡುಗಡೆ ವಿರೋಧ ವ್ಯಕ್ತವಾಗಿತ್ತು. ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಕನ್ನಡಿಗರನ್ನು ಕೆರಳಿಸಿತ್ತು. ಹಾಗಾಗಿ ಆತ ನಟಿಸಿರುವ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದು ಎಂದು ಪಟ್ಟು ಹಿಡಿದರು. ಕಮಲ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಹೈಕೋರ್ಟ್ ಹೇಳಿತ್ತು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಕಮಲ್ ಚಿತ್ರಕ್ಕೆ ರಿಲೀಫ್ ಸಿಕ್ಕಿತ್ತು. ಆದರೂ ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಆಗಲೇಯಿಲ್ಲ.
ಕನ್ನಡಿಗರ ಬಗ್ಗೆ ಸೋನು ವಿವಾದಾತ್ಮಕ ಹೇಳಿಕೆ
ಹಿಂದಿ ಗಾಯಕ ಸೋನು ನಿಗಮ್ ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿ ಗೆದ್ದಿದ್ದಾರೆ. ಆದರೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಬಗ್ಗೆ ಆಡಿದ್ದ ಮಾತು ವಿವಾದ ಸೃಷ್ಟಿಸಿತ್ತು. ಕಾರ್ಯಕ್ರಮದಲ್ಲಿ ಕನ್ನಡಿಗರು ಕನ್ನಡ ಹಾಡು ಹಾಡುವಂತೆ ಕೇಳಿದಾಗ, ಅದಕ್ಕೆ ಕೋಪಗೊಂಡ ಸೋನು ಅದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ ಮಾತನಾಡಿದ್ದರು. ಇದನ್ನು ಕನ್ನಡಿಗರು ತೀವ್ರವಾಗಿ ಖಂಡಿಸಿದ್ದಾರೆ. ಕನ್ನಡದಲ್ಲಿ ಹಾಡು ಹಾಡದಂತೆ ನಿಷೇಧ ಹೇರಲಾಗಿತ್ತು. ಕೊನೆಗೆ ಸೋನು ನಿಗಮ್ ಕ್ಷಮೆ ಕೋರಿದ್ದರು.
ನೆಟ್ಟು ಬೋಲ್ಟು ಟೈಟ್
ಬೆಂಗಳೂರಿನಲ್ಲಿ ನಡೆದ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಗೈರಾದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದರು. "ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ" ಎಂದು ಹೇಳಿದ್ದರು. ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕಿಚ್ಚ ಸುದೀಪ್ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದರು. ನಮಗೆ ಆಹ್ವಾನ ಇರಲಿಲ್ಲ ಅದಕ್ಕೆ ಬರಲಿಲ್ಲ ಎಂದು ಹೇಳಿದ್ದರು. ಈ ಗೊಂದಲಕ್ಕೆ ಸಾಧು ಕೋಕಿಲ ಕಾರಣ ಎಂದಿದ್ದರು.
ಬಿಗ್ಬಾಸ್ ಮನೆಗೆ ಬೀಗ
ಕಿಚ್ಚು ಸುದೀಪ್ ನೇತೃತ್ವದಲ್ಲಿ ಬಿಗ್ಬಾಸ್ -12 ಶುರುವಾದ 15 ದಿನಕ್ಕೆ ಸಮಸ್ಯೆ ಎದುರಾಗಿತ್ತು. ಬಿಡದಿಯ ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ಹಾಕಿ ಶೋ ನಡೆಸಲಾಗ್ತಿದೆ. ಆದರೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಹಾಗೂ ರಾಮನಗರ ಜಿಲ್ಲಾಡಳಿತವು ಪರಿಸರ ನಿಯಮಗಳ ಉಲ್ಲಂಘನೆ ಆರೋಪದಡಿ ಸ್ಟುಡಿಯೋಗೆ ಬೀಗ ಜಡಿದಿತ್ತು. ಹಾಗಾಗಿ ಬಿಗ್ಬಾಸ್ ಶೋ ಸ್ಥಗಿತಗೊಂಡಿತ್ತು, ಸ್ಪರ್ಧಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ನಾಲ್ಕೈದು ದಿನಗಳ ಬಳಿಕ ಸಮಸ್ಯೆ ಬಗೆಹರಿದು ಮತ್ತೆ ಶೋ ಪುನರಾರಂಭವಾಗಿತ್ತು.
ಕಿಡಿಗೇಡಿಗಳ ವಿರುದ್ಧ ರಮ್ಯಾ ಕಾನೂನು ಕ್ರಮ
ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಕಳುಹಿಸುತ್ತಿದ್ದಾರೆ ಎಂದು ನಟಿ ರಮ್ಯಾ ದೂರಿದ್ದರು. ಅದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದು ಬುದ್ದಿ ಕಲಿಸಿದ್ದರು.
ಕರಾವಳಿ ದೈವಗಳನ್ನು ಅನುಕರಿಸಿದ್ದ ರಣ್ವೀರ್
'ಕಾಂತಾರ' ಸಿನಿಮಾ ನೋಡಿ ದೈವಗಳನ್ನು ಕೆಲವರು ಅನುಸರಿಸುವ ಹುಚ್ಚಾಟ ಮೆರೆದಿದ್ದರು. ಚಿತ್ರತಂಡ ಎಷ್ಟೇ ಮನವಿ ಮಾಡಿದ್ರು ಕೇಳಲಿಲ್ಲ. ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಎದುರು ಬಾಲಿವುಡ್ ನಟ ರಣ್ವೀರ್ ಸಿಂಗ್ ದೈವವನ್ನು ಅನುಕರಿಸಿದ್ದರು. ಚಾವುಂಡಿ ದೈವವನ್ನು ದೆವ್ವ ಎಂದಿದ್ದರು. ಬಳಿಕ ಕ್ಷಮೆ ಕೋರಿ ವಿವಾದಕ್ಕೆ ತೆರೆ ಎಳೆದಿದ್ದರು.
ಸೈಮಾದಲ್ಲಿ ಕನ್ನಡಿಗರಿಗೆ ಅವಮಾನ
ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡಿಗರಿಗೆ ಅವಮಾನ ಮಾಡುತ್ತಾರೆ ಎಂದು ನಟ ದುನಿಯಾ ವಿಜಯ್ ಆರೋಪಿಸಿದ್ದರು. ದಕ್ಷಿಣದ 4 ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡುತ್ತಾರೆ. ಆದರೆ ಚಿತ್ರರಂಗವನ್ನು ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದಿದ್ದರು. "ಕಾರ್ಯಕ್ರಮದಲ್ಲಿ ಯಾರೂ ಇಲ್ಲದಿದ್ದಾಗ ಕನ್ನಡಿಗರನ್ನು ಕರೆದು ಅವಾರ್ಡ್ಸ್ ಕೊಡೊದು ಎಷ್ಟು ಸರಿ? ಕನ್ನಡವನ್ನು ಕೆಳಗಿಳಿಸುವ ಪ್ರಯತ್ನ ಮಾಡಬೇಡಿ. ಹೀಗೆ ಮುಂದುವರೆದರೆ ಇನ್ನು ಮುಂದೆ ನಾವ್ಯಾರು ಸೈಮಾ ಕಾರ್ಯಕ್ರಮಕ್ಕೆ ಬರೋದಿಲ್ಲ" ಎಂದು ವಿಜಯ್ ಹೇಳಿದ್ದರು.
ರಶ್ಮಿಕಾ ಹೇಳಿಕೆ ವಿವಾದ
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ "ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಪ್ರವೇಶಿಸಿದ ಮೊದಲ ವ್ಯಕ್ತಿ ನಾನು" ಎಂದು ಹೇಳಿದ್ದರು. ಮತ್ತೊಂದು ಕಾರ್ಯಕ್ರಮದಲ್ಲಿ "ನಾನು ಹೈದರಾಬಾದ್ನವಳು" ಎಂದು ರಶ್ಮಿಕಾ ಹೇಳಿಕೊಂಡಿದ್ದು ಕೂಡ ಚರ್ಚೆ ಹುಟ್ಟಾಕ್ಕಿತ್ತು.
ದರ್ಶನ್ ಫ್ಯಾನ್ಸ್, ಸುದೀಪ್ ಫ್ಯಾನ್ಸ್ ವಾರ್
ಹುಬ್ಬಳ್ಳಿಯಲ್ಲಿ ನಡೆದ 'ಮಾರ್ಕ್' ಪ್ರೀ ರಿಲೀಸ್ ಈವೆಂಟ್ನಲ್ಲಿ ಸುದೀಪ್ ಆ ಪಡೆ ವಿರುದ್ಧ ಯುದ್ಧ ಮಾಡುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ನೀಡಿದ್ದ ಹೇಳಿಕೆ ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಬಳಿಕ ಸುದೀಪ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ಇನ್ನು ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು.


Click it and Unblock the Notifications











