ಇದು ನನ್ನ ಜೀವಮಾನದ ಸಾಧನೆ: ಪುನೀತ್

ಪವರ್ ಸ್ಟಾರ್ ಪುನೀತ್ ಅವರನ್ನು ಭೇಟಿ ಮಾಡಿ ನಾಲ್ಕು ಮಾತಾಡುವುದು ಅಮರಾವತಿಗೆ ಇದ್ದ ಒಂದೇ ಆಸೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಆಕೆಯ ನೆರವಿಗೆ ಬಂದದ್ದು ಮೇಕ್ ಎ ವಿಶ್ ಫೌಂಡೇಷನ್ ಆಫ್ ಇಂಡಿಯಾ. ಈ ರೀತಿ ಸಾವಿನ ದಿನಗಳನ್ನು ಎಣಿಸುತ್ತಿರುವ ಮಕ್ಕಳ ಆಸೆಗಳನ್ನು ಈಡೇರಿಸುವುದನ್ನೇ ಕಾಯಕ ಮಾಡಿಕೊಂಡಿದೆ ಮೇಕ್ ಎ ವಿಶ್ ಫೌಂಡೇಷನ್.
ಪುನೀತ್ ಅವರ ಬ್ಯುಸಿ ಕಾರ್ಯಕ್ರಮಗಳ ನಡುವೆ ಈ ಹುಡುಗಿಯ ಬಗ್ಗೆ ಹೇಳಿದಾಗ ಮರು ಮಾತನಾಡದೆ ಒಪ್ಪಿ ಮಾನವೀಯತೆ ಮೆರೆದಿದ್ದಾರೆ. "ದೇವರು ಮಕ್ಕಳಿಗೆ ಯಾಕೆ ಇಂತಹ ಕಾಯಿಲೆ ಕೊಡುತ್ತಾನೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ನನ್ನಿಂದ ಬೇರೆಯವರಿಗೆ ಸಂತೋಷವಾಗುತ್ತದೆ ಎಂದರೆ ಅದಕ್ಕಿಂತ ಹೆಚ್ಚಿನ ಸಾಧನೆ ಇನ್ನೇನಿದೆ" ಎಂದು ಪುನೀತ್ ಹೇಳಿದಾಗ ಅವರು ಭಾವುಕರಾಗಿದ್ದರು ಎನ್ನುತ್ತಾರೆ ತಂತ್ರಜ್ಞ ಕವೀಶ್.
ವಿಶ್ ಇಂಡಿಯಾದ ಸದಸ್ಯರೊಬ್ಬರು ನನ್ನನ್ನು ಸಂಪರ್ಕಿಸಿ ಪುನೀತ್ ಅವರೊಡನೆ ಭೇಟಿ ಸಾಧ್ಯವೇ ಎಂದು ಕೇಳಿದರು. ನಾನು ಭರವಸೆ ನೀಡಿದ್ದೇನಾದರೂ, ಪುನೀತ್ ಅವರು ಬ್ಯುಸಿ ಷೆಡ್ಯೂಲ್ ನಡುವೆ ಒಪ್ಪುತ್ತಾರೆ ಎಂಬ ಪೂರ್ಣ ನಂಬಿಕೆ ಇರಲಿಲ್ಲ. ಆದರೆ ಶುಕ್ರವಾರ ಮಧ್ಯಾಹ್ನ 12 ವರ್ಷದ ಅಮರಾವತಿಯನ್ನು ಭೇಟಿ ಮಾಡಿ, ಉಡುಗೊರೆಗಳನ್ನು ಕೊಟ್ಟು, ಆತ್ಮೀಯವಾಗಿ ತಬ್ಬಿ, ಆ ಹುಡುಗಿಗೆ ಖುಷಿ ಆಗುವಂತೆ ಮಾಡಿದ್ದು ನಿಜಕ್ಕೂ ಅಭಿನಂದನಾರ್ಹ ಎಂದು ಕವೀಶ್ ದಟ್ಸ್ ಕನ್ನಡಕ್ಕೆ ತಿಳಿಸಿದರು.
ಕನ್ನಡ ಚಿತ್ರರಂಗದ ನಟರು ತೆರೆ ಮೇಲೆ ಮಾತ್ರ ನಾಯಕರು ಎಂಬ ಮಾತನ್ನು ಸುಳ್ಳು ಮಾಡುವತ್ತ ಯುವ ನಾಯಕರಾದ ಪುನೀತ್, ಗಣೇಶ್ , ಪ್ರೇಮ್ ಕುಮಾರ್ ಮತ್ತಿತ್ತರು ಹೆಜ್ಜೆ ಹಾಕಿರುವುದು ಸಂತಸದ ಸಂಗತಿ.


Click it and Unblock the Notifications