ದಾವಣಗೆರೆಯಲ್ಲಿ ನಟ ದರ್ಶನ್ ಸಾರಥಿ ಸಾರೋಟು
ನಟ ದರ್ಶನ್ ರೋಡ್ ಶೋ ದಾವಣಗೆರೆಯಲ್ಲಿ ಅದ್ದೂರಿಯಾಗಿ ಗುರುವಾರ (ಅ.20) ನಡೆಯಿತು. ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಗಿ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡೆಬೇಕಾಯಿತು. ಅಭಿಮಾನಿಗಳ ನಿಯಂತ್ರಣ ಕೈಮೀರಿದಾಗ ಲಘು ಲಾಠಿ ಪ್ರಹಾರ ಪ್ರಯೋಗಿಸಲಾಯಿತು.
ಬಳಿಕ ಅರುಣ ಚಿತ್ರಮಂದಿರದಲ್ಲಿ 'ಸಾರಥಿ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಚಿತ್ರಮಂದಿರಲ್ಲಿ ಅಭಿಮಾನಿಗಳೊಂದಿಗೆ ಕೊಂಚ ಹೊತ್ತು ಚಿತ್ರವನ್ನು ದರ್ಶನ್ ವೀಕ್ಷಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರಗಳ ನಡುವೆ ಚಿತ್ರಮಂದಿರ ಪ್ರತಿಧ್ವನಿಸಿತು.
ಅರುಣ ಚಿತ್ರಮಂದಿರದ ಹೊರಗೆ ಪಟಾಕಿ ಸಿಡಿಸಿ ದೀಪಾವಳಿಯನ್ನು ಹಬ್ಬಕ್ಕೆ ಮುನ್ನವೇ ಆಚರಿಸಿ ದರ್ಶನ್ ಅಭಿಮಾನಿಗಳು ಸಂಭ್ರಮಿಸಿದರು. ಬಳಿಕ ತೆರೆದ ವಾಹನದಲ್ಲಿ ಅರುಣ ಚಿತ್ರಮಂದಿರದ ಸರ್ಕಲ್ನಿಂದ ಗಾಂಧಿವೃತ್ತದವರೆಗೂ ಅಭಿಮಾನಿಗಳೆಡೆಗೆ ಕೈಬೀಸುತ್ತಾ ದರ್ಶನ್ ಸಾಗಿದರು.
ತಮ್ಮ ಮೇಲೆ ತೋರಿದ ಅಭಿಮಾನಕ್ಕೆ ದರ್ಶನ್ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ರಂಜಿಸುವ ಭರವಸೆಯನ್ನು ನೀಡಿದರು. ನಿರ್ದೇಶಕ ದಿನಕರ್ ತೂಗುದೀಪ, ಶ್ರೀನಿವಾಸ್, ನಟ ಯಶ್ರಾಜ್ ಮುಂತಾದವರು ಸಾಥ್ ನೀಡಿದರು.
ಬಳಿಕ ಅವರ ಸಾರಥಿ ಸಾರೋಟು ಗಂಗಾವತಿಗೆ ಪಯಣ ಬೆಳಸಿತು. ಅಲ್ಲೂ ದರ್ಶನ್ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಗಂಗಾವತಿಯಲ್ಲಿ ಕೇಕ್ ಕತ್ತರಿಸಿ ಸಾರಥಿ ಚಿತ್ರದ ಗೆಲುವನ್ನು ಆಚರಿಸಿದರು. ತಮ್ಮ ಮೇಲಿನ ಅಭಿಮಾನವನ್ನು ಹೀಗೇ ಚಿರಸ್ಥಾಯಿಯಾಗಿರಲಿ ಎಂದು ದರ್ಶನ್ ವಿನಂತಿಸಿಕೊಂಡರು. (ಒನ್ಇಂಡಿಯಾ ಕನ್ನಡ)


Click it and Unblock the Notifications











