ಇವರು ಖ್ಯಾತ ಜ್ಯೋತಿಷಿ ಯೋಗರಾಜ್ ಭಟ್!
ಗಾಳಿಪಟ, ಪಂಚರಂಗಿ, ಮುಂಗಾರು ಮಳೆ ನಿರ್ದೇಶಕ ಯೋಗರಾಜ್ ಭಟ್ ಅವರಿಗೂ ನಮ್ಮ ಚಿತ್ರಕ್ಕೂ ಸುತಾರಾಂ ಸಂಬಂಧವಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದಾರೆ ಮತ್ತೊಬ್ಬ ನಿರ್ದೇಶಕ ದಯಾಳ್ ಪದ್ಮನಾಭನ್. ಕಾರಣ ಅವರ ಹೊಸ ಚಿತ್ರಕ್ಕೆ "ಯೋಗರಾಜ್ ಭಟ್" (Yograj But) ಎಂದು ಹೆಸರಿಟ್ಟಿದ್ದಾರೆ.
"ಚಿತ್ರದ ಪ್ರಮುಖ ಪಾತ್ರದ ಹೆಸರು ಯೋಗರಾಜ್. ಚಿತ್ರದಲ್ಲಿ ಅವನು ಖ್ಯಾತ ಜ್ಯೋತಿಷಿ.ಅವನ ಜೀವನದಲ್ಲಿ ನಡೆಯುವ ಎರಡು ದಿನಗಳ ಸ್ವಾರಸ್ಯ ಘಟನೆಗಳೇ ಚಿತ್ರದ ಕಥಾವಸ್ತು " ಎಂದು 'ಯೋಗರಾಜ್ But' ಬಗ್ಗೆ ವಿವರ ನೀಡಿದ್ದಾರೆ ದಯಾಳ್.
ಈ ಹಿಂದೆ ದಯಾಳ್ ಅವರ 'ಶ್ರೀಹರಿಕಥೆ' ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದ ನವೀನ್ ಕೃಷ್ಣ ಅವರಿಗೆ ಇಲ್ಲೂ ಸ್ಥಾನ ನೀಡಲಾಗಿದೆ. ಯೋಗರಾಜ್ ಭಟ್ ಅವರ 'ಗಾಳಿಪಟ' ಚಿತ್ರದಲ್ಲಿ ಅಭಿನಯಿಸಿದ್ದ ನೀತೂ ಚಿತ್ರದ ನಾಯಕಿ. ಶಿವಕುಮಾರ ಸ್ವಾಮೀಜಿ ಅವರ ಆಶ್ರಮದಲ್ಲಿ ಬೆಳೆಯುತ್ತಿರುವ ಅನಾಥ ಹುಡುಗಿ ಪಾತ್ರದಲ್ಲಿ ನೀತೂ ಕಾಣಿಸಲಿದ್ದಾರೆ.
ಈ ಚಿತ್ರದ ಮತ್ತೊಂದು ಪ್ರಮುಖ ಅಂಶವೆಂದರೆ ಸ್ವತಃ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿಗಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. 'ಪಟ್ರೆ ಲವ್ಸ್ ಪದ್ಮ' ಖ್ಯಾತಿಯ ಅಜಿತ್ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಗೀತ ಸಾಹಿತಿ ನಾಗೇಂದ್ರ ಪ್ರಸಾದ್, ಸಿಹಿಕಹಿ ಚಂದ್ರು, ಗೀತಾ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.


Click it and Unblock the Notifications











