ಗಾಂಧಿನಗರಕ್ಕೆ ಮತ್ತೊಂದು ಐನಾತಿ ಮಚ್ಚಿನ ಚಿತ್ರ!
ಕನ್ನಡ ಬೆಳ್ಳಿತೆರೆಯ ಮೇಲೆ ಲಾಂಗು, ಮಚ್ಚುಗಳ ಭರಾಟೆ ಸದ್ಯಕ್ಕೆ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಮಚ್ಚು, ಕೊಚ್ಚು, ಕಡಿ, ಬಡಿ, ಹೊಡಿ ಚಿತ್ರಗಳು ಸಾಲುಸಾಲಾಗಿ ಮಲಗುತ್ತಿದ್ದರೂ ನಮ್ಮ ನಿರ್ಮಾಪಕರಿಗೆ ಇನ್ನೂ ಬುದ್ಧಿ ಬಂದಂತಿಲ್ಲ. ಬೆಂಕಿಯ ಸಂಗಕ್ಕೆ ಬಿದ್ದ ಪತಂಗದಂತೆ ಮತ್ತೆ ಮತ್ತೆ ಮಚ್ಚುಗಳನ್ನು ಜಳಪಿಸುತ್ತಲೆ ಇದ್ದಾರೆ.
ಬೆಂಗಳೂರು ಭೂಗತ ಜಗತ್ತಿಗೆ ಸಂಬಂಧಿಸಿದ ಹೊಸ ಚಿತ್ರವೊಂದು ಮಂಗಳವಾರ (ಸೆ.21) ಸೆಟ್ಟೇರಿದೆ. ಚಿತ್ರದ ಹೆಸರು ಗವಿಪುರ. ಹೆಸರು ಕೇಳಿದರೆ ಇದ್ಯಾವುದೋ ಒಂದು ಪಕ್ಕಾ ಲೋಕಲ್ ಸಬ್ಜೆಕ್ಟ್ ಎಂದು ಸುಲಭವಾಗಿ ಗ್ರಹಿಸಬಹುದು. ಈ ಚಿತ್ರದ ಟ್ಯಾಗ್ ಲೈನ್ ಸಹ ವಿಚಿತ್ರವಾಗಿದೆ. 'ಗುರು ನನ್ ಕಥೆ' ಎಂಬುದೇ ಚಿತ್ರದ ಅಡಿಬರಹ.
ಸಂಪೂರ್ಣ ಹೊಸಬರಿಂದಲೇ ತುಂಬಿರುವ ಈ ಚಿತ್ರವನ್ನು ಜಗನ್ನಾಥ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಕೃಷ್ಣಬಾಬಾ ನಿರ್ದೇಶಕರು. ಇಬ್ಬರದ್ದೂ ಚೊಚ್ಚಲ ಪ್ರಯತ್ನ. ಚಿತ್ರದ ನಾಯಕ ಸೂರಜ್ ಸಾಸನೂರು. ಹುಟ್ಟಿ ಬೆಳೆದದ್ದು ಧಾರವಾಡದಲ್ಲಾದರೂ ಸದ್ಯಕ್ಕೆ ಬೆಂಗಳೂರಿನ ನಿವಾಸಿ. ನಾಯಕಿ ಹೆಸರು ಸೌಜನ್ಯ.
ನಾಯಕ ಸೂರಜ್ ಅವರ ತಂದೆ ಕೆಎಎಸ್ ಅಧಿಕಾರಿ ಅಜಿತ್ ಸಾಸನೂರು. ವರನಟ ರಾಜ್ ಕುಮಾರ್ ಅವರ ಹಲವಾರು ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದ ವಿಜಯ್ ಸಾಸನೂರು, ಸೂರಜ್ ಅವರ ದೊಡ್ಡಪ್ಪ. ಈಗಷ್ಟೆ ಪದವಿ ಮುಗಿಸಿರುವ ಸೂರಜ್ ಗವಿಪುರದ ಮೂಲಕ ನಾಯಕನಾಗುತ್ತಿದ್ದಾನೆ.
"ನಾನು ಮಾತ್ರ ಯಾರ ತಂಟೆಗೂ ಹೋಗಲ್ಲ. ನನ್ನ ತಂಟೆಗೆ ಬಂದ್ರೆಯಾರನ್ನೂ ಬಿಡಲ್ಲ" ಎಂಬ ಧೋರಣೆಯ ಹುಡುಗನ ಮೇಲೆ ಬೆಂಗಳೂರು ಭೂಗತ ಜಗತ್ತಿನ ಕರಿ ನೆರಳು ಹೇಗೆ ಬೀಳುತ್ತದೆ ಎಂಬುದೇ ಒನ್ ಲೈನ್ ಸ್ಟೋರಿ. ಶೇ.75ರಷ್ಟು ಲವ್, 25ರಷ್ಟು ಆಕ್ಷನ್ ಇರುವ ಚಿತ್ರವಿದು. ಚಿತ್ರಕ್ಕೆ ಸಂವೀರ್ ಸಂಗೀತ, ಜೆ ಜೆ ಕೃಷ್ಣ ಛಾಯಾಗ್ರಹಣವಿದೆ. ತಾರಾಗಣದಲ್ಲಿ ಟೆನ್ನಿಸ್ ಕೃಷ್ಣ, ಗುರುದತ್, ಸತ್ಯರಾಜ್, ಕೆಂಪೇಗೌಡ, ಸತೀಶ್ ಅಭಿನಯಿಸಿದ್ದಾರೆ.


Click it and Unblock the Notifications











