ನಮ್ಮನ್ನಗಲಿದ 'ತುಷಾರ್ ರಂಗನಾಥ್' ಬಯೋಡಾಟ

ಕನ್ನಡ ಚಿತ್ರರಂಗದಲ್ಲಿ 'ರಾಕ್ಷಸ' ಚಿತ್ರದ ಮೂಲಕ ಚಿತ್ರಕಥೆ ಹಾಗೂ ಸಂಭಾಷಣೆ ನೀಡಿ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ರಂಗನಾಥ್ ಅವರು ಸುಂಟರಗಾಳಿ, ಆಟೊ ಶಂಕರ್, ಮಸ್ತಿ ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಗುಲಾಮ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದ ತುಷಾರ್, ಕಂಠೀರವ ಚಿತ್ರ ನಿರ್ದೇಶಿಸಿದ್ದರು. 'ಗಂಗೆ ಬಾರೆ ತುಂಗೆ ಬಾರೆ' ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ನಿರ್ವಹಿಸಿದ್ದರು.
ತುಷಾರ್ ರಂಗನಾಥ್ ಸಾಹಿತಿ ಕೂಡ. ಅವರು ಬರೆದ ದುನಿಯಾ ಚಿತ್ರದ 'ಪ್ರೀತಿ ಮಾಯೆ ಹುಷಾರು, ಕಣ್ಣೀರ್ ಮಾರೋ ಬಜಾರು' ಹಾಗೂ ಸುಂಟರಗಾಳಿ ಚಿತ್ರದ 'ನನ್ನಾಣೆ ನನ್ನಾಣೆ ಪ್ರೀತಿ ದೇವತೆ ನನ್ನಾಣೆ' ಗೀತೆಗಳು ಬಾರೀ ಜನಮನ್ನಣೆ ಪಡೆದಿದ್ದವು. ಅವರ ಗೀತರಚನೆಯ ಇತರ ಚಿತ್ರಗಳೆಂದರೆ ಇಂತಿ ನಿನ್ನ ಪ್ರೀತಿಯ, ಅನಾಥರು. ಕಳೆದ 12 ವರ್ಷಗಳಿಂದ ಚಿತ್ರರಂಗದಲ್ಲಿದ್ದ ಅವರು ನಿರ್ದೇಶಕ ಸೂರಿ ಹಾಗೂ ಯೋಗರಾಜ್ ಭಟ್ ಟೀಮ್ ನಲ್ಲಿಯೂ ಕೆಲಸ ಮಾಡಿದ್ದರು.
ಸಾಧು ಕೋಕಿಲ, ರಾಮು ನಿರ್ಮಾಣದ ಹಲವು ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ. 'ಗಾಂಧಿ ಕ್ಲಾಸ್' ಎಂಬ ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದ ರಂಗನಾಥ್, ಜನವರಿಯಿಂದ ಚಿತ್ರದ ನಿರ್ದೇಶನ ಆರಂಭಿಸಬೇಕೆಂದಿದ್ದರು. ಎರಡು ವರ್ಷಗಳ ಹಿಂದಿನಿಂದಲೂ ಹೃದಯ ಸಂಬಂಧಿ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ, ಹಿರಿಯ ಸೋದರಿ ಹಾಗೂ ಸೋದರನನ್ನು ಅಗಲಿದ್ದಾರೆ ತುಷಾರ್. ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











