Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಜ್ರ ದೇಹದ ಹಿಂದಿನ ಮುಗ್ಧ ಮನಸು
ಇತರ
ನಟರಿಗಿಂತ
ವಿಭಿನ್ನವಾಗಿರುವ
'ದುನಿಯಾ'
ವಿಜಯ್
ವಿಭಿನ್ನವಾಗಿಯೇ
ಹುಟ್ಟುಹಬ್ಬ
ಆಚರಿಸಿಕೊಂಡಿದ್ದಾರೆ.
ಇಂದಿನ
ಸ್ಥಿತಿಗೆ
ಅಹಂಕಾರಪಡದ,
ಹಿಂದಿನ
ಸ್ಥಿತಿಯನ್ನು
ಮರೆಯದ
ವಿಜಯ್ಗೆ
ಹುಟ್ಟುಹಬ್ಬದ
ವಿಶೇಷ
ಶುಭಾಶಯ
ಸಲ್ಲಿಸಲು
ಅನೇಕ
ಕಾರಣಗಳಿವೆ.
ನೀವೂ
ಹಾರೈಸಿ.
ವಿಜಯ್ ಎದ್ದುನಿಂತವರೇ "ದಯವಿಟ್ಟು ತಾವೂ ವೇದಿಕೆಯ ಮೇಲೆ ಬರಬೇಕೆಂದು" ಪ್ರೇಕ್ಷಕರ ನಡುವೆ ಕುಂತಿದ್ದ ನಟರಿಗೆ ದುಂಬಾಲು ಬಿದ್ದರು. ಅಲ್ಲಿ ಜಾಗವಿಲ್ಲವೆಂದರೂ ಕೇಳಲಿಲ್ಲ. ಹೇಗೋ ಮಾಡಿ ಅವರನ್ನು ತಾವೇ ಸ್ವತಃ ಎಬ್ಬಿಸಿಕೊಂಡು ಹೋಗಿ ವೇದಿಕೆಯ ಮೇಲೆ ಇನ್ನೊಂದು ಕುರ್ಚಿಯನ್ನು ಹೇಗೋ ಅಡ್ಜಸ್ಟ್ ಮಾಡಿ ಕುಳ್ಳಿರಿಸಿದರು. ಆಗಲೇ ವಿಜಯ್ಗೆ ಸಮಾಧಾನ.
ಪ್ರೇಕ್ಷಕರ ನಡುವೆ ಕುಳಿತವರು ರಂಗಾಯಣ ರಘು. ವಿಜಯ್ ಮಾತನಾಡುತ್ತ, ದುನಿಯಾ ಚಿತ್ರದಲ್ಲಿ ಅಭಿನಯದ ಪಟ್ಟುಗಳನ್ನು ಕಲಿಸಿದವರೇ ರಘು. ಅವರ ಸಹಾಯವಿಲ್ಲದಿದ್ದರೆ ಈ ರಾಜ್ಯ ಪ್ರಶಸ್ತಿ ಸಿಗುತ್ತಿರಲಿಲ್ಲ. ಈ ವೇದಿಕೆಯ ಮೇಲೆ ನೀವು ನನ್ನನ್ನು ನೋಡುತ್ತಲೂ ಇರಲಿಲ್ಲ ಎಂದಾಗ ಕಣ್ಣಲ್ಲಿ ಸಾರ್ಥಕ್ಯ ಭಾವ. ವಿಜಯ್ ಹಿರಿಯರಿಗೆ ಮರ್ಯಾದೆ ನೀಡುವುದಿಲ್ಲ ಎಂದು ಹಲ್ಲು ಕಟಿಯುವ ಕಲಾ ಸಾಮ್ರಾಟರಿಗೆ ಈ ಘಟನೆಯೇ ಉತ್ತರ.
ಕಲೆ, ಕನಸು, ಕಸುವು, ಒಂಚೂರು ಅದೃಷ್ಟದ ಜೊತೆ ಬ್ರಹ್ಮಾಂಡದಷ್ಟು ಪ್ರಯತ್ನವಿದ್ದರೆ ಅಂದುಕೊಂಡಿದ್ದು ಸಾಧಿಸಬಹುದು ಅನ್ನುವುದಕ್ಕೆ 'ದುನಿಯಾ' ಚಿತ್ರದ ವಿಜಯ್ಗಿಂತ ಬೇರೆ ನಟ ಕಣ್ಮುಂದೆ ಸಿಗಲಿಕ್ಕಿಲ್ಲ. ಜಿಮ್ನಲ್ಲಿ ಮೈಬಿರುಸು ಮಾಡಿಕೊಳ್ಳುತ್ತಿದ್ದಾಗ ಕಟ್ಟಿಕೊಂಡಂಥ ಕನಸು, ಕನಸು ನನಸು ಮಾಡಲು ಹೊಂಟಲ್ಲೆಲ್ಲಾ ಅವಮಾನ, ಕೊನೆಗೆ ಕರ್ನಾಟಕದ ಜನತೆ ಹರಸಿದಾಗ ಸಿಕ್ಕಿದ್ದೇ ವಿಜಯ್ ಎಂಬ ಗಂಧ ತೀಡಿದಂತಿರುವ ನಟ. ಹಿಂದಿನದನ್ನು ಮರೆಯದ, ಇಂದಿನ ಸ್ಥಿತಿಯ ಬಗ್ಗೆ ಅಹಂಕಾರಪಡದ ನಟನಿಗೆ ಇಂದು 34ನೇ ಹುಟ್ಟುಹಬ್ಬ.
ಜನ್ಮದಿನದ ಹಾರ್ದಿಕ ಶುಭಾಶಯಗಳು.
ವಿಜಯ್ ಇಂದಿನ, ಹಿಂದಿನ ಕಲಾವಿದರಿಗಿಂತಲೂ ವಿಭಿನ್ನ. ಮೊದಲ ನೋಟದಲ್ಲೇ ಹೀರೋ ಆಗಲು ಅನರ್ಹ ಎಂಬಂಥ ನೋಟ. ನಟನೆಯಲ್ಲಿ, ಸಾರ್ವಜನಿಕ ವರ್ತನೆಯಲ್ಲಿ ಅಸಹಜತೆಯ ಸೊಂಕೂ ಇಲ್ಲ. ಕಟುಮಸ್ತಾದ ದೇಹದ ಹೃದಯದಲ್ಲಿ ಮುಗ್ಧಮಗುವಿನ ಮನಸ್ಸು. ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗಬೇಕೆಂಬ ಕನಸು. ವಿಜಯ್ ಚಿತ್ರಗಳ ಯಶಸ್ಸು ಏನೇ ಇರಲಿ. ದುಡಿದದ್ದನ್ನು ವಿನಿಯೋಗಿಸುತ್ತಿರುವ ರೀತಿ ಅನೇಕರಿಗೆ ಇರುಸುಮುರುಸು ಮಾಡುತ್ತಿರುವುದಂತೂ ನಿಜ. ಪತ್ರಕರ್ತ ಗಣೇಶ್ ಕಾಸರಗೋಡು ಅವರೊಂದಿಗೆ ಕೈಜೋಡಿಸಿರುವ ವಿಜಯ್ ಹಿರಿಯರಿಗೆ ಅನಾಥಾಲಯ ನಿರ್ಮಿಸುವುದಕ್ಕೆ ಸ್ಥಳವನ್ನು ನೀಡಿರುವುದೇ ಅವರ ಹೃದಯ ವೈಶಾಲ್ಯಕ್ಕೆ ನಿದರ್ಶನ.
ಹೀರೋಗೆ ಬೇಕಾದ ಯಾವುದೇ ಮಾನದಂಡಗಳಾಗಲಿ, ಗಾಡ್ ಫಾದರ್ ಆಗಲಿ ಇಲ್ಲ. ಚಿತ್ರರಂಗದ ಹಿನ್ನಲೆ ಮೊದಲೇ ಇಲ್ಲ. ಆದರೆ ನಟನೆಗೆ ಬೇಕಾದ ಪ್ರತಿಭೆ ಮಾತ್ರ ದಂಡಿಯಾಗಿದೆ. ಪ್ರತಿಭೆಯನ್ನೇ ತೋರಿಸಿಕೊಳ್ಳಲು ಅವಕಾಶಕ್ಕಾಗಿ ಬೀದಿ ಬೀದಿ ಅಲೆದದ್ದೇ ಬಂತು. ನಿರ್ದೇಶಕ ಸೂರಿ ಅದ್ಯಾವ ಗಳಿಗೆಯಲ್ಲಿ ದುನಿಯಾ ಚಿತ್ರದಲ್ಲಿ ಅವಕಾಶ ಕೊಟ್ಟರೋ ವಿಜಯ್ ತನ್ನ ಅಪ್ಪಟ ಪ್ರತಿಭೆಯನ್ನು ಸಾಬೀತು ಪಡಿಸಿಕೊಂಡರು. ಅಲ್ಲಿಂದ 'ಕರಿಯ'ನ ಜೊತೆಗೆ ನಸೀಬು ಬದಲಾಯಿತು.
ವಿಜಯ್ ಮೊದಮೊದಲು ನಟನೆಯ ಅವಕಾಶಕ್ಕಾಗಿ ಮುಂಬೈವರೆಗೂ ಪಾದ ಬೆಳಸಿದ್ದುಂಟು. ಅಲ್ಲಿಂದ ಗಾಂಧಿನಗರಕ್ಕೆ ಬಂದು ಒಂದೇ ಒಂದು ಅವಕಾಶಕ್ಕಾಗಿ ಅಂಡಲೆದರು. ನಿರ್ಮಾಪಕರ ಕಣ್ಣಿಗೆ ಈತ ಹೀರೋ ಆಗಿ ಕಾಣಲಿಲ್ಲ. ಈತನನ್ನು ಕಂಡು ಮುಸಿಮುಸಿ ನಕ್ಕವರೂ ಇಂದು ಕಾಲ್ಶೀಟ್ಗಾಗಿ ಆತನ ಮನೆಗೆ ಅಲೆಯುತ್ತಿದ್ದಾರೆ. ಇದೇ ಏನೋ ದುನಿಯಾ ಬದಲಾಗುವುದೆಂದರೆ. ಚಂಡ ಮತ್ತು ಯುಗ ಚಿತ್ರಗಳು ಪರ್ವಾಗಿಲ್ಲ ಅನಿಸಿಕೊಂಡರೂ ಆತನ ಪ್ರತಿಭೆಗೆ ಸವಾಲೊಡ್ಡಿರುವ ಕವಿತಾ ಲಂಕೇಶ್ರ 'ಅವ್ವ' ಬಿಡುಗಡೆಯಾಗಬೇಕಿದೆ. ರವಿ ಬೆಳಗೆರೆ ನಿರ್ಮಾಣದ 'ಮುಖ್ಯಮಂತ್ರಿ ಐ ಲವ್ ಯೂ' ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
ಇಂದು ವಿಜಯ್ ಕತ್ರಿಗುಪ್ಪೆಯಲ್ಲಿರುವ ತಮ್ಮ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳು ಹಾಗೂ ಬಂಧು ಮಿತ್ರರ ಜತೆ ಸಂಭ್ರಮದಿಂದ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಏಳು ವರ್ಷದ ಅಲುಮಮ್ಮ ಎಂಬ ಮಗುವಿನ ಚಿಕಿತ್ಸೆಗೆ ವಿಜಯ್ ಒಂದು ಲಕ್ಷ ರೂ. ಕೊಟ್ಟು ನೆರವಾಗಿದ್ದಾರೆ. ಅದಕ್ಕೇ ಹೇಳಿದ್ದು ವಿಜಯ್ ಅನೇಕ ಇಂದಿನ, ಹಿಂದಿನ ಕಲಾವಿದರಿಗಿಂತ ವಿಭಿನ್ನವೆಂದು.