ಚಿತ್ರಾನ್ನ : ಸ್ಯಾಂಡಲ್ವುಡ್ನ ಗರಿಗರಿ.. ಪುಡಿಪುಡಿ ಸುದ್ದಿಗಳು!
ಕಾಶಿ ಪಾಪ ಅಪ್ಪಚ್ಚಿ.. ಗುಂಡಣ್ಣನ ಜೊತೆ ರಾಜುಗೆ ಮುನಿಸು.. ‘ಮುಂಗಾರುಮಳೆ’ತಂಡದವರ ಆಲಾಪದೊಂದಿಗೆ ಒಂದಿಷ್ಟು ಪುಡಿ ಸುದ್ದಿಗಳು.. ಮಾತಿಗೆ ನಂಚಿಕೊಳ್ಳಲು!
- ಪುಷ್ಪ ಪಾದ
*
ರಾಜು ಅನಂತಸ್ವಾಮಿಗೆ ಹಾಡಿನ ಲೋಕಕ್ಕಿಂತ ಗುಂಡಿನ ಲೋಕವೇ ಹೆಚ್ಚು ಪ್ರಿಯ ಎನ್ನುವುದು ಅವರ ಮೇಲಿನ ಪ್ರೀತಿಯ ಬೈಗುಳ! ಆದ್ಯಾಕೋ ಆಸ್ಪತ್ರೆಗೆ ಹೋಗಿ ಬಂದ ಮೇಲೆ ಅವರು ಪ್ರತಿಜ್ಞೆ ಮಾಡಿದ್ದಾರಂತೆ... ಗುಂಡು ಮುಟ್ಟೋದಿಲ್ಲ ಅಂತ.
*
ನಿರುದ್ಯೋಗಿಗಳಿಗೆ ಕೆಲಸ ಕೊಡೋದು ‘ಮುಂಗಾರು ಮಳೆ’ ನಿರ್ಮಾಪಕ ಕೃಷ್ಣಪ್ಪನವರ ಹವ್ಯಾಸ! ಹೀಗಾಗಿ ತಮ್ಮ ಮುಂದಿನ ಚಿತ್ರಕ್ಕೆ ‘ಮುಂಗಾರು ಮಳೆ’ ತಂಡವನ್ನು ದೂರವಿಟ್ಟಿದ್ದಾರೆ! ಆ ತಂಡದವರಿಗೆ ನಿರುದ್ಯೋಗ ಕಾಡಿದ ದಿನ, ಅವರು ಮನೆ ತಟ್ಟಬಹುದಂತೆ! ಯಾಕೋ ‘...ಮಳೆ’ ತಂಡ ಒದ್ದಾಡುತ್ತಿದೆ! ಚಿತ್ರದ ನಿರ್ಮಾಪಕರು ಕೋಟಿ ಕೋಟಿ ಹಣವನ್ನು ಜೇಬಿಗೆ ತುಂಬಿಕೊಳ್ಳುತ್ತಿದ್ದಾರೆ. ನಮಗೆ ಮಳೆಯಲ್ಲಿ ನೆಂದದ್ದಷ್ಟೇ ಪುಣ್ಯ ಎಂದು ‘..ಮಳೆ ’ ತಂಡದ ಒಬ್ಬರು ಸಣ್ಣದಾಗಿ ಅಪಸ್ವರ ತೆಗೆದಿದ್ದಾರೆ..
*
‘ಈ ಬಂಧನಾ’ ಚಿತ್ರದ ನಾಯಕಿ ಜಯಪ್ರದಾ, ಚಿತ್ರೀಕರಣ ಸಂದರ್ಭದಲ್ಲಿ ರಾಜ್ ಕುಮಾರ್ರನ್ನು ನೆನಪು ಮಾಡಿಕೊಂಡರು. ರಾಜ್ಗೆ ರಾಷ್ಟ್ರಮಟ್ಟದಲ್ಲಿ ಸಿಗಬೇಕಾದ ಮಾರ್ಯಾದೆ ಸಿಗಲಿಲ್ಲ ಎಂದು ಕೊರಗಿದರು. ಒಂದರ್ಥದಲ್ಲಿ ಅದು ನಿಜ. ಆದರೆ ಏನ್ ಮಾಡೋದು?
*
ಸೋಲು ಗೆಲುವಿನ ಮೆಟ್ಟಿಲು ಎಂದುಕೊಂಡು ಕಾಶೀನಾಥ್ ಚಿತ್ರ ಮಾಡುತ್ತಾ ಬಂದಿದ್ದಾರೆ. ಅವರ ನಟನೆ ಮತ್ತು ನಿರ್ದೇಶನದ ಹೊಸ ಚಿತ್ರ ‘ಅಪ್ಪಚ್ಚಿ’ಯ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ನಾಯಕಿ ಅರ್ಪಿತಾ, ಕೇರಳದ ಹುಡುಗಿ. ಪರೀಕ್ಷೆ ಕಾರಣ ಅವರು ಸದ್ಯಕ್ಕೆ ಚಿತ್ರೀಕರಣಕ್ಕೆ ಬರಲಾಗುತ್ತಿಲ್ಲ. ಹೀಗಾಗಿ ಎರಡನೇ ಹಂತದ ಚಿತ್ರೀಕರಣ ಸದ್ಯಕ್ಕಿಲ್ಲ.


Click it and Unblock the Notifications