ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗೆ ಮುಖ್ಯಮಂತ್ರಿ ಕೃಷ್ಣ ಒಲವು
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಚಿತ್ರ ನಗರಿ ಸ್ಥಾಪಿಸಲು ಆಸಕ್ತರಾಗಿದ್ದು , ಚಿತ್ರ ನಗರಿಗೆ ಅಗತ್ಯವಾದ 250 ಎಕರೆ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಒದಗಿಸಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.
ಮೈಸೂರಿನ ಸ್ಪೋರ್ಟ್ಸ್ಕ್ಲಬ್ನಲ್ಲಿ ಶನಿವಾರ ನಡೆದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯಮಂಡಳಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಂದೇಶ್ ನಾಗರಾಜ್, ಚಿತ್ರನಗರಿಗೆ ಅಗತ್ಯವಾದ ಭೂಮಿಯನ್ನು ಸದ್ಯದಲ್ಲಿಯೇ ಗುರ್ತಿಸಲಾಗುವುದು ಎಂದರು.
ಚಿತ್ರನಗರಿ ಸ್ಥಾಪನೆಗೆ ಬೆಂಗಳೂರಿನಲ್ಲಿ ಭೂಮಿಯನ್ನು ಒದಗಿಸಿಕೊಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೋರಿತ್ತಾದರೂ, ಚಿತ್ರನಗರಿ ಸ್ಥಾಪನೆಗೆ ಮೈಸೂರೇ ಸೂಕ್ತ ಸ್ಥಳವೆಂದು ಮುಖ್ಯಮಂತ್ರಿ ಅಭಿಪ್ರಾಯ ಪಟ್ಟಿದ್ದಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಸಾ.ರಾ.ಗೋವಿಂದು ಮತ್ತಿತರರು- ತಮಿಳು, ತೆಲುಗು, ಮಲಯಾಳಂ ಚಿತ್ರಗಳು ಕರ್ನಾಟಕದಲ್ಲಿ ತೆರೆ ಕಾಣುತ್ತಿರುವಂತೆಯೇ, ಇತರ ರಾಜ್ಯಗಳಲ್ಲೂ ಕನ್ನಡ ಚಿತ್ರಗಳು ತೆರೆ ಕಾಣಬೇಕು ಎಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅವಕಾಶ ಕಲ್ಪಿಸುವುದಾಗಿ ಕೆಸಿಎನ್ ಚಂದ್ರಶೇಖರ್ ಭರವಸೆ ನೀಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ , ಮಾಜಿ ಸಚಿವ ಎಸ್.ರಮೇಶ್, ಎಸ್.ಎ.ಗೋವಿಂದರಾಜು, ಎಸ್.ಎ.ಚಿನ್ನೇಗೌಡ, ಟಿ.ಎಸ್.ನಾಗಾಭರಣ, ಜಯಮಾಲಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. (ಇನ್ಫೋ ವಾರ್ತೆ)


Click it and Unblock the Notifications