ಆಪರೇಷನ್ ಸಕ್ಸಸ್, ರಾಜ್ ಆರೋಗ್ಯ
ಬೆಂಗಳೂರು : ಲಘು ಹೃದಯಾಘಾತಕ್ಕೆ ತುತ್ತಾಗಿದ್ದ ವರನಟ ಡಾ.ರಾಜ್ಕುಮಾರ್ ಅವರಿಗೆ ಜುಲೈ.21ರ ಬುಧವಾರ ಬೆಳಗ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು.
ರಾಜ್ರ ಹೃದಯದ ರಕ್ತನಾಳವೊಂದರಲ್ಲಿ ರಕ್ತ ಹೆಪ್ಪುಗಟ್ಟಿದ್ದ ವಿಷಯ ಆ್ಯಂಜಿಯಾಗ್ರಾಂ ಪರೀಕ್ಷೆಯಲ್ಲಿ ತಿಳಿದುಬಂದಿತ್ತು . ಹೆಪ್ಪುಗಟ್ಟಿದ್ದ ರಕ್ತವನ್ನು ರೀ ವ್ಯಾಸ್ಕೀಲೈಜೇಷನ್ ಶಸ್ತ್ರಚಿಕಿತ್ಸೆಯ ಮೂಲಕ ಬುಧವಾರ ನಿವಾರಿಸಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು , ರಾಜ್ ಆರೋಗ್ಯವಾಗಿದ್ದಾರೆ ಎಂದು ವೊಕ್ಹಾರ್ಟ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಎದೆನೋವು ಅನುಭವಿಸಿದ ರಾಜ್ರನ್ನು ಭಾನುವಾರ (ಜು.18) ವೊಕ್ಹಾರ್ಟ್ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಗೆ ದಾಖಲಿಸಲಾಗಿತ್ತು. ಹೃದಯತಜ್ಞ ಡಾ. ರಂಗನಾಥ ನಾಯಕ್ ಹಾಗೂ ರಾಜ್ರ ಖಾಸಗಿ ವೈದ್ಯ ಡಾ.ರಮಣ ರಾವ್ ಚಿಕಿತ್ಸೆಯ ಉಸ್ತುವಾರಿ ವಹಿಸಿದ್ದಾರೆ.
ರಾಜ್ರನ್ನು ತುರ್ತು ನಿಗಾ ಘಟಕದಲ್ಲಿ ಉಪಚರಿಸಲಾಗುತ್ತಿದ್ದು , ಎರಡು ಮೂರು ದಿನಗಳ ವಿಶ್ರಾಂತಿಯ ನಂತರ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ವೊಕ್ಹಾರ್ಟ್ ಆಸ್ಪತ್ರೆಯ ಮುಂದೆ ನೂರಾರು ರಾಜ್ ಅಭಿಮಾನಿಗಳು ಗುಂಪುಗೂಡಿದ್ದು , ಅಣ್ಣಾವ್ರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ರಾಜ್ ಆರೋಗ್ಯವನ್ನು ವಿಚಾರಿಸಿ ದಟ್ಸ್ಕನ್ನಡ ಕಚೇರಿಗೂ ಅನೇಕ ದೂರವಾಣಿ ಕರೆಗಳು, ಶುಭ ಹಾರೈಕೆಯ ಇ-ಮೇಲ್ಗಳು ಬಂದಿವೆ.
ವರನಟ ರಾಜ್ಕುಮಾರ್ ಇತ್ತೀಚೆಗಷ್ಟೇ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹಾಸ್ಮಟ್ ಕೀಲು ಮತ್ತು ಮೂಳೆ ಆಸ್ಪತ್ರೆಗೆ ಜರುಗಿದ್ದ ಶಸ್ತ್ರಚಿಕಿತ್ಸೆಯಲ್ಲಿ ಮಂಡಿಯಲ್ಲಿ ಅಳವಡಿಸಲಾಗಿದ್ದ ಕೆಲವು ತಂತಿಗಳನ್ನು ಸಡಿಲಗೊಂಡ ಕಾರಣ ತೆಗೆದುಹಾಕಲಾಗಿತ್ತು.(ಇನ್ಫೋ ವಾರ್ತೆ)


Click it and Unblock the Notifications