ಗಂಡನ ಮನೆಗೆ ಬರೋದಕ್ಕಿಂತಲೂ ಮುಂಚೆ..!
ಒಂದು ಕಡೆ ಮಾತಾಡ್ ಮಾತಾಡು ಮಲ್ಲಿಗೆ, ಇನ್ನೊಂದು ಕಡೆ ಗಂಡನ ಮನೆ. ಪ್ರೇಕ್ಷಕರ ಆಯ್ಕೆ ಯಾವುದೋ ಗೊತ್ತಿಲ್ಲ. ತವರು, ತಾಯಿ, ಕರುಳು, ಕುಂಕುಮದ ನಂತರ ಈಗ ಗಂಡ ಸಿನಿಮಾದ ವಸ್ತು. ಸಿನಿಮಾ ನೋಡಿ ಗಂಡಂದಿರು ಅಳಬೇಕೋ, ಹೆಂಡಿರು ಅಳಬೇಕೋ ನಿರ್ದೇಶಕ ಮಹೇಂದರ್ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಸುಮಾರು 2.5 ಕೋಟಿ ಸುರಿದು ಆರ್. ಎಸ್. ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹುದಿನಗಳ ನಂತರ ಮಹೇಂದರ್ ಚಿತ್ರ ತೆರೆಗೆ ಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಚಿತ್ರದ ನಾಯಕ. ಮೊದಲ ಸಲ ಬಸ್ ಕಂಡಕ್ಟರ್ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಬಸ್ ಕಂಡಕ್ಟರ್ ಎಂದರೆ ಕಮಲ ಹಾಸನ್ ನೆನಪಾಗುತ್ತಾರೆ. ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿನ ಮುಂದೆ ಬನ್ನಿ ಜೀವನದಲ್ಲಿ ಮುಂದೆ ಬನ್ನಿ ಅನ್ನೋ ಹಾಡು ನೆನಪಾಗುತ್ತದೆ. ಶಿವಣ್ಣ ಈ ಪಾತ್ರವನ್ನು ಹೇಗೆ ನಿಬಾಯಿಸಿದ್ದಾರೋ ನೋಡೋಣ.
ನಮ್ಮ ಬಸವಚಿತ್ರದಲ್ಲಿ ಪುನೀತ್ ಜೊತೆಕಾಣಿಸಿಕೊಂಡಿದ್ದ ಪರಭಾಷಾ ಚೆಲುವೆ ಗೌರಿ , ಈಗ ಅವರ ಸಹೋದರ ಶಿವರಾಜ್ ಕುಮಾರ್ ಗೆ ನಾಯಕಿ. ತಮ್ಮನ ಹೆಂಡತಿ ಪಾತ್ರ ಮಾಡಿದಾಕೆ, ಸಿನಿಮಾದಲ್ಲಿ ಅಣ್ಣನಿಗೂ ಹೆಂಡತಿ! ಇಂಥ ಉದಾಹರಣೆಗಳು ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟಿವೆ.
ದೊಡ್ಡಣ್ಣ, ಟೆನ್ನಿಸ್ ಕೃಷ್ಣ, ಅವಿನಾಶ್, ಹೇಮಾ ಚೌಧರಿ ತಾರಾಗಣದಲ್ಲಿದ್ದಾರೆ. ವಿ.ಮನೋಹರ್ ಸಂಗೀತ, ಸುಂದರನಾಥ ಸುವರ್ಣ ಛಾಯಾಗ್ರಹಣ ಚಿತ್ರದಲ್ಲಿದೆ.
ನಮ್ಮ ಕನ್ನಡ ಚಿತ್ರಬ್ರಹ್ಮರು ಇನ್ನೂ ಗಂಡನ ಮನೆ, ತವರು ಮನೆ ಸುತ್ತಲೇ ಸುತ್ತುತ್ತಿದ್ದಾರೆ. ಅವರಿಗೆ ಚಕ್ ದೇ ಇಂಡಿಯಾದಂತಹ ಚಿತ್ರಗಳು ಕಾಣಿಸುತ್ತಿಲ್ಲ! ಅಂತಹ ಆಲೋಚನೆಗಳೇ ಅವರಿಗೆ ಬರುವುದಿಲ್ಲ!


Click it and Unblock the Notifications