‘ದ್ವೀಪ’ ಚಿತ್ರಕ್ಕೆ ಪ್ರಶಸ್ತಿಗಳನ್ನು ಮೊಗೆದು ಕೊಂಡಿರುವ ಕನ್ನಡತಿ
'ದ್ವೀಪ' ಚಿತ್ರಕ್ಕಾಗಿ ಸ್ವರ್ಣ ಕಮಲ ಪ್ರಶಸ್ತಿ ದಕ್ಕಿಸಿಕೊಂಡಿರುವ ಸೌಂದರ್ಯ ಈಗೇನು ಮಾಡುತ್ತಿದ್ದಾರೆ?ಟಾಲಿವುಡ್ನಲ್ಲಿ ಅವಕಾಶಗಳಿಗೆ ಕಷ್ಟ ಪಡುತ್ತಿದ್ದಾರೆ ಎನ್ನುತ್ತಿದೆ ಒಂದು ಮೂಲ. ಕನ್ನಡದಲ್ಲಿ ಹೊಸತನ್ನು ಪ್ರಯತ್ನಿಸಿ, ಮೇಕಪ್ಪೇ ಇಲ್ಲದೆ ಗ್ಲಾಮರ್ ರಹಿತ ಪಾತ್ರವನ್ನು 'ದ್ವೀಪ'ದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಸೌಂದರ್ಯ ಈಗ ಸಾಕಷ್ಟು ಬೆಳೆದಿದ್ದಾರೆ; ಬೌದ್ಧಿಕವಾಗಿ ಹಾಗೂ ವಯಸ್ಸಿನಲ್ಲೂ !
ಹೊಸ ಮುಖಗಳಿಗೆ ಹಾಸುಹುಲ್ಲಾಗಿರುವ ಟಾಲಿವುಡ್ ಒಂದು ಕಾಲದಲ್ಲಿ ಹೊಸ ಮುಖವಾಗಿದ್ದ ಸೌಂದರ್ಯರನ್ನು ಮೆರೆಸಿತು. ಸೌಂದರ್ಯಗೆ ಇವತ್ತೂ ಆಫರ್ಗಳ ಕೊರತೆಯೇನೂ ಇಲ್ಲ. ಆದರೀಗ ತೆಲುಗಿನಲ್ಲಿ ಹುಡುಕಿಕೊಂಡು ಬರುತ್ತಿರುವ ಅವಕಾಶಗಳು ಅಮ್ಮನ ಪಾತ್ರದವು. ಇಷ್ಟು ಬೇಗ ಅಮ್ಮನಾಗಿ ತೆರೆಗೆ ಬರಲು ಸೌಂದರ್ಯ ಸುತಾರಾಂ ಸಿದ್ಧರಿಲ್ಲ.
'ದ್ವೀಪ'ದ ಯಶಸ್ಸಿಗಾಗಿ ಕೆಲ ಕಾಲ ತೆಲುಗು ಸಿನಿಮಾ ಲೋಕದಿಂದ ಹೊರಗುಳಿದದ್ದೇ ಸೌಂದರ್ಯಗೆ ಶಾಪವಾಗಿದೆ ಎಂಬ ಮಾತೂ ಇದೆ. ಹಾಗಿದ್ದರೆ ಸೌಂದರ್ಯ ಕನ್ನಡಕ್ಕೆ ಪರ್ಮನೆಂಟಾಗಿ ಮರಳುತ್ತಾರಾ?
ಖಂಡಿತ ಇಲ್ಲ ಅಂತ ಖುದ್ದು ಸೌಂದರ್ಯ ಹೇಳಿದ್ದಾರೆ. ತಮಗಿನ್ನೂ ನಾಯಕಿಯಾಗುವ ವಯಸ್ಸು ಮೀರಿಲ್ಲ ಎಂಬುದನ್ನು ತೆಲುಗು ನಿರ್ಮಾಪಕರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಇತ್ತೀಚೆಗೆ ಹೆಚ್ಚು ಹೆಚ್ಚು ಸ್ಲೀವ್ಲೆಸ್ ಕುಪ್ಪಸ ತೊಡುವುದನ್ನು ಸೌಂದರ್ಯ ಆಭ್ಯಾಸ ಮಾಡಿಕೊಂಡಿದ್ದಾರೆ ಎಂಬ ಜೋಕೂ ಟಾಲಿವುಡ್ನಲ್ಲಿ ಚಾಲ್ತಿಯಲ್ಲಿದೆ.
ಇಷ್ಟೆಲ್ಲಾ ಪಡುಪಾಟಲು ಪಟ್ಟಿಕೊಂಡು ಪಕ್ಕದೂರಲ್ಲಿ ಅವಕಾಶ ಗಿಟ್ಟಿಸುವ ಬದಲು ನಮ್ಮೂರಿಗೇ ಬಂದು ಇನ್ನಷ್ಟು ಪ್ರಶಸ್ತಿಗಳನ್ನು ಸೌಂದರ್ಯ ಯಾಕೆ ಕೊಳ್ಳೆ ಹೊಡೆಯಬಾರದು, ಹೇಳಿ?


Click it and Unblock the Notifications